ದುಶ್ಚಟ ತೊರೆಯಲು ಯೋಗ ಸಹಕಾರಿ
Team Udayavani, Jun 16, 2018, 11:22 AM IST
ಚಿತ್ರದುರ್ಗ: ಮನುಷ್ಯನ ಮನಸು ಕಲುಷಿತವಾಗಿದೆ. ಯೋಗ ಮತ್ತು ಪರಿಸರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯೋಗ ಮಾಡುವುದರಿಂದ ಅವನ ದುರಾಸೆ, ದುಶ್ಚಟ, ದುರಹಂಕಾರ, ಸ್ವಾರ್ಥತೆ ತೊಡೆದು ಹಾಕಲು ಸಹಾಯವಾಗುತ್ತದೆ ಎಂದು ಪರಿಸರವಾದಿ ಡಾ| ಎಚ್.ಕೆ.ಎಸ್. ಸ್ವಾಮಿ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಪರಿಸರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಯೋಗ ಮತ್ತು ಪರಿಸರ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಯೋಗ ಮತ್ತು ಪರಿಸರದ ಸಂರಕ್ಷಣೆಗಳು ಜೊತೆ ಜೊತೆಯಾಗಿ ಹೆಜ್ಜೆ ಹಾಕಬೇಕು. ಈ ಎರಡು ಒಂದನ್ನೊಂದು ಅವಲಂಬಿಸಿಕೊಂಡಿವೆ.
ಮನುಷ್ಯನ ಮನಸ್ಸಿನಲ್ಲಿರುವ ಆಸೆ, ದುರಾಸೆ, ಸ್ವಾರ್ಥಗಳನ್ನು ಕಡಿಮೆಗೊಳಿಸುವ ಶಕ್ತಿ ಯೋಗ ಮತ್ತು ಧ್ಯಾನಕ್ಕೆ ಮಾತ್ರ ಉಂಟು ಎಂದರು. ಮೌನ ಮತ್ತು ನೆಮ್ಮದಿ ನೆಲೆಸಿರುವ ಮನಸ್ಸಿನಲ್ಲಿ ಬಿರುಗಾಳಿ ಎದುರಿಸುವಷ್ಟು ಶಕ್ತಿ ಉಂಟು. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಯೋಗಾಭ್ಯಾಸ, ಧ್ಯಾನ, ಹೇಳಿಕೊಡುವುದರಿಂದ ಜೀವನ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.
ಭೂಮಿಯ ಮೇಲೆ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಾರಣವನ್ನು ಕಂಡು ಹಿಡಿದು, ಅವುಗಳನ್ನು ನಿಗ್ರಹಿಸುವಂತಹ ಕೆಲಸವನ್ನು ಯೋಗ ಕೇಂದ್ರಗಳು ಮಾಡಿಕೊಡಬೇಕು. ಯೋಗಾಭ್ಯಾಸ ನಿರತರಾದವರು ಸಮಾಜಕ್ಕೆ ಮಾದರಿಯಾಗಬೇಕು. ಯೋಗ ಪಟುಗಳು ಸರಳತೆ, ಅಹಿಂಸೆ, ಸ್ವದೇಶಿ ಇವೆಲ್ಲವೂ ಸಹ ಸಮಾಜ ಸುಧಾರಣೆಗೆ, ಪರಿಸರ ಸಂರಕ್ಷಣೆಗೆ ಸಹಾಯಕವಾಗಿದೆ.
ಮಹಾತ್ಮ ಗಾಂಧೀಜಿಯವರು ಆಧ್ಯಾತ್ಮಿಕ ಚಿಂತನೆಗಳನ್ನು ಬಳಸಿಕೊಂಡು ರಾಜಕೀಯ, ಸಾಮಾಜಿಕ, ಶೆ„ಕ್ಷಣಿಕವಾಗಿ ಪರಿವರ್ತನೆ ತಂದರು. ಅಂತಹ ಪ್ರಯೋಗಗಳನ್ನು ಇಂದು ನಾವು ಹೆಚ್ಚಿಸುತ್ತಾ ಹೋಗಬೇಕಾಗಿದೆ ಎಂದರು.
ಮನಸ್ಸಿನ ಕಲ್ಮಶ ಹೆಚ್ಚಾದಷ್ಟು ಪರಿಸರದ ಮಾಲಿನ್ಯ ಹೆಚ್ಚಾಗುತ್ತಿದೆ. ಮನಸ್ಸಿನ ಕಲ್ಮಶವನ್ನು ತೊಡೆದು ಹಾಕುವವರೆಗೂ ಪರಿಸರ ಸಂರಕ್ಷಣೆ ಅಸಾಧ್ಯ. ಪರಿಸರದ ಪ್ರತಿಯೊಂದು ನಿಯಮವನ್ನೂ ಸೂಕ್ಷ್ಮವಾಗಿ
ಗ್ರಹಿಸುವಂತಹ, ಅಭ್ಯಾಸ ಮಾಡುವಂತಹ, ಮನಸ್ಸನ್ನು ನಾವು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನಾವು ಮಾಲಿನ್ಯ ಮಾಡುತ್ತಿರುವ ವಸ್ತುಗಳ ಬಗ್ಗೆ ಕೂಡ ಗಮನ ಹರಿಸಬೇಕು, ಮನಸ್ಸಿನಲ್ಲಿರುವ ಕಳೆ ತೆಗೆದಂತೆ, ಪರಿಸರದಲ್ಲಿರುವ ಕಸವನ್ನು ಸಹ ನಾವು ನಿಯಮಿತವಾಗಿ ತೆಗೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಕಸ ವಿಂಗಡಣೆ ಅಸಾಧ್ಯವಾದ ಕೆಲಸವೇನಲ್ಲ, ಮನುಷ್ಯರು ಮನಸ್ಸನ್ನು ಗಟ್ಟಿ ಮಾಡಿಕೊಂಡು, ಮೂಲ ಹಂತದಲ್ಲೇ ಕಸ ವಿಂಗಡಣೆ ಮಾಡಿ, ಮಾಲಿನ್ಯ ನಿಗ್ರಹಿಸುವುದನ್ನು ಕಲಿಯಬಹುದು ಎಂದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಮಾತನಾಡಿ, ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ
ಮನುಷ್ಯನ ಮನಸ್ಸೇ ಕಾರಣ. ಮನಸ್ಸನ್ನು ಹಿಡಿದಿಟ್ಟು ಕೊಳ್ಳುವಂತಹ ಎಲ್ಲಾ ಮಾರ್ಗಗಳನ್ನು ಕಂಡುಕೊಳ್ಳಬೇಕು. ಕಣ್ಣು, ಕಿವಿ, ಮೂಗು, ಬಾಯಿ, ಪಂಚೇಂದ್ರಿಯಗಳನ್ನು ತಮ್ಮ ಹದ್ದುಬಸ್ತಿನಲ್ಲಿ ಇಟ್ಟುಕೊಂಡಷ್ಟು, ಮನುಷ್ಯನ ಬಾಳು ಸುಭದ್ರವಾಗಿರುವುದು. ಯೋಗ ಮತ್ತು ಧ್ಯಾನದ ಮುಖಾಂತರ ಮನುಷ್ಯನ ಮನಸ್ಸನ್ನು ಬದಲಾಯಿಸುವಷ್ಟು ಶಕ್ತಿ ಇದೆ. ಸಮಾಜದ ಪರಿವರ್ತನೆಗೆ ಯೋಗ ಕಾರ್ಯಕರ್ತರು ಶ್ರಮ ಪಡಬೇಕಾಗಿದೆ.
ಮನಸ್ಸಿನ ಒಳಗೆ ತುಂಬಿಕೊಳ್ಳುತ್ತಿರುವ ಕಲ್ಮಶಗಳನ್ನು ಹೊರ ಹಾಕುವಂತಹ ದಾರಿಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದರು. ಮಲ್ಲಿಕಾರ್ಜುನ ಸ್ವಾಮಿ, ನರಸಿಂಹಪ್ಪ, ಕೃಷ್ಣಪ್ಪ, ಪಾಪಣ್ಣ, ಪಾಪಯ್ಯ,
ಸಾವಿತ್ರ, ವಸಂತ, ಜಾನಕಿ, ವಿಜಯ ಲಕ್ಕ್ಷ್ಮೀ ಕಮಲಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ