ಇಳಂತಿಲ: 16ನೇ ಶತಮಾನದ ಅಪೂರ್ವ ತುಳು ಶಾಸನ ಪತ್ತೆ
Team Udayavani, Oct 5, 2019, 5:33 AM IST
ಬೆಳ್ತಂಗಡಿ: ತಾಲೂಕಿನ ಇಳಂತಿಲ ಗ್ರಾಮದ ಇಚ್ಚಾರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾಚೀನ ತುಳು ಶಾಸನವೊಂದು ಬೆಳಕಿಗೆ ಬಂದಿದೆ.
ಸುಮಾರು 36 ವರ್ಷಗಳಿಂದ ದೇವಾಲಯದ ಆಗ್ನೇಯ ಮೂಲೆಯ ಕೋಣೆಯಲ್ಲಿದ್ದ ಸುಮಾರು 37 ಇಂಚು ಎತ್ತರ ಹಾಗೂ 13 ಇಂಚು ಅಗಲದ ಈ ಶಿಲಾಖಂಡವು ಪ್ರಾಚೀನ ಶಾಸನ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಭೂತದ ಕಲ್ಲು ಎಂದು ಭಾವಿಸಲಾಗಿದ್ದ ಈ ಕಲ್ಲಿನ ಕುರಿತು ಜೋತಿಷಿಗಳು ಅನುಮಾನಗೊಂಡು ವಿಶ್ಲೇಷಿಸಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರರ ಸೂಚನೆಯಂತೆ ಹಿರಿಯ ಶಾಸನ ತಜ್ಞ ಡಾ| ವೈ. ಉಮಾನಾಥ ಶೆಣೈ ಮತ್ತು ಡಾ| ಎಸ್.ಆರ್. ವಿಘ್ನರಾಜರನ್ನು ಕರೆಸಿ ಓದಿಸಿದಾಗ ಇದು ಒಟ್ಟು 8 ಪಂಕ್ತಿಗಳಲ್ಲಿ ಬರೆದಿರುವ ಕ್ರಿ.ಶ. ಸುಮಾರು 16ನೇ ಶತಮಾನದ ಒಂದು ಅಪೂರ್ವ ತುಳುಶಾಸನವೆಂದು ತಿಳಿದು ಬಂದಿದೆ.
ತುಳು ಲಿಪಿ ಅಡಕ
-ಸ್ವಸ್ತಿಶ್ರೀ
-ಹ (ಇ) ಚ್ಚಾರ ಉದಕ
-ಮಣಿಗಾದ್
-ರಾಜಕೃತ
-ಜ್ಜೆ (?) ಮಾಜಾರ
-ನರಮಾನಿಯೆರೆ
-ಮಾ (ವಾ) ಸಪ್ಪೆರೆ
-ಪದ ಬರಹ (ವು)
ಶಾಸನದಲ್ಲಿ ಎರಡು ವಿಚಾರಗಳನ್ನು ತಿಳಿಸಲಾಗಿದೆ. ಇಚ್ಚಾರ ಉದಕಮಣಿ ಎಂದು ಪ್ರಸಿದ್ಧಿ ಪಡೆದ ಈ ಬಾಲಸುಬ್ರಹ್ಮಣ್ಯ ದೇವಾಲಯವು ರಾಜನಿರ್ಮಿತವಾದುದು. ಆದರೆ ಇಲ್ಲಿ ರಾಜನ ಹೆಸರು ಉಲ್ಲೇಖಗೊಂಡಿಲ್ಲ.
ಉಳಿದಂತೆ ಮಾಚಾರ ಸಮಾಜದ ವಾಸಪ್ಪ ಎಂಬವನು ಶಾಸನವನ್ನು ರಚಿಸಿ ಈ ಶಿಲೆಯ ಮೇಲೆ ಬರೆದ. ನಾಗಗಳಿಗೆ ಮತ್ತು ಜಲಕ್ಕೆ ದೇವತೆಯಾಗಿರುವ ಸುಬ್ರಹ್ಮಣ್ಯನನ್ನು ಇಲ್ಲಿ ಉದಕಮಣಿ ಎಂದು ವಿಶೇಷವಾಗಿ ಕರೆಯಲಾಗುತ್ತಿತ್ತು. ಇಂದಿಗೂ ಇಲ್ಲಿ ಶ್ರೀ ಬಾಲಸುಬ್ರಹ್ಮಣ್ಯನನ್ನು ನೀರಿಗಾಗಿ ಪ್ರಾರ್ಥಿಸಿ ಧಾರಾಳ ನೀರನ್ನು ಪಡೆಯಲಾಗುತ್ತದೆ. ಆದುದರಿಂದ ಪ್ರಾಚೀನ ಕಾಲ ದಿಂದಲೂ ಉದಕ ಮಣಿಯೆಂದು ಶ್ರೀ ದೇವರನ್ನು ಸಂಬೋಧಿಸಲಾಗುತ್ತಿತ್ತು.
ಈ ಶಾಸನವನ್ನು ಓದುವುದರಲ್ಲಿ ಧರ್ಮಸ್ಥಳದ ಪವನಕುಮಾರ್ ಸಹಕರಿಸಿದ್ದರು.
ದೇವಾಲಯದ ಆಡಳಿತ ಮೊಕ್ತೇಸರ ಹಾಗೂ ಅರ್ಚಕರಾದ ಸತೀಶ ಪುತ್ತೂರಾಯ, ಸಹೋದರ ಸೂರ್ಯ ನಾರಾಯಣ ಪುತ್ತೂರಾಯರು ವ್ಯವಸ್ಥೆಗೊಳಿ ಸಿದ್ದರು. ಚರಸ್ಥಿತಿಯಲ್ಲಿದ್ದ ಈ ಶಿಲಾ ಶಾಸನವನ್ನು ಈಗ ಸುರಕ್ಷಿತವಾಗಿ ಇಡಲಾಗಿದೆ.