24 ಸಿಐಎಸ್ಎಫ್ ಜವಾನರಿಗೆ ಸೋಂಕು
Team Udayavani, Jul 8, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸುರತ್ಕಲ್: ಸುರತ್ಕಲ್ ಪ್ರದೇಶದಲ್ಲಿ ಒಟ್ಟು 33 ಮಂದಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ.
ಇಲ್ಲಿನ ಸಿಐಎಸ್ಎಫ್ ಯೂನಿಟ್ನ 24 ಜವಾನರಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲಾಡಳಿತದ ವತಿಯಿಂದ ಸೀಲ್ಡೌನ್ ಮಾಡಲಾಗಿಲ್ಲ. ಆದರೆ ಎಚ್ಚರಿಕೆಯ ಸ್ಟಿಕ್ಕರ್ ಅಂಟಿಸಿ ಜಾಗೃತರಾಗಿರುವಂತೆ ಸೂಚಿಸಲಾಗಿದೆ.
ಸೋಂಕಿತರಲ್ಲಿ 1 ವರ್ಷದ ಮಗು
ಸಿಐಎಸ್ಎಫ್ ಯೂನಿಟ್ನ 25 ಮಂದಿ ಸೋಂಕಿತರಲ್ಲಿ ಒಂದು ವರ್ಷದ ಮಗುವು ಸೇರಿದೆ. ಈ ಹಿಂದೆ ಸಿಬಂದಿಗೆ ಪಾಸಿಟವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಇದೀಗ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಹೋಂ ಕ್ವಾರಂಟೈನ್ ಮೂಲಕ ಚಿಕಿತ್ಸೆ ನೀಡಲು ಸರಕಾರ ಆದೇಶ ನೀಡಿದೆ. ಇಲ್ಲಿಯೂ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಸಾಧ್ಯತೆಯಿದೆ.
ಸುರತ್ಕಲ್ ಇಡ್ಯಾದ ವಸತಿ ಸಮುಚ್ಚಯದಲ್ಲಿ ಮೂವರಿಗೆ, ಜೆ.ಎಂ. ರಸ್ತೆ ಸಮೀಪ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರ ಮನೆಯನ್ನು ಸೀಲ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪ್ರಾಥಮಿಕ ಸಂಪರ್ಕ ಇದ್ದವರಿಗೆ ಹೆಚ್ಚಿನ ಸೋಂಕು ತಗಲುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಮಂಗಳ ಪೇಟೆಯಲ್ಲಿ ಓರ್ವರಿಗೆ ಕೋವಿಡ್ 19 ಸೋಂಕು ದೃಢ
ಪಟ್ಟಿದ್ದು ಅಧಿಕಾರಿಗಳು ಯಾರೂ ಸೋಂಕಿತರ ಮನೆ ಪ್ರವೇಶಿಸದಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಮಾಹಿತಿ ಅಂಟಿಸಿದ್ದಾರೆ.
ಬಂಟ್ವಾಳ: 11 ತಿಂಗಳ ಮಗುವಿಗೆ ಸೋಂಕು
ಪುದು ಗ್ರಾಮದ ಮಾರಿಪಳ್ಳದಲ್ಲಿ 11 ತಿಂಗಳ ಮಗು ಹಾಗೂ ಮೇರಮಜಲು ಗ್ರಾಮದಲ್ಲಿ ಒಂದೇ ಮನೆಯ ಐವರು ಸೇರಿ ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ 10ಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಮಾರಿಪಳ್ಳದಲ್ಲಿ 28 ವರ್ಷದ ಮಹಿಳೆ ಮತ್ತು 11 ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಅವರ ಕುಟುಂಬ ಸದಸ್ಯರೊಬ್ಬರಿಗೆ ಸೋಂಕು ತಗಲಿತ್ತು. ಹೀಗಾಗಿ ಅವರ ಮನೆಯವರ ಗಂಟಲ ದ್ರವ ಪರೀಕ್ಷೆ ಮಾಡಿದ ವೇಳೆ ತಾಯಿ-ಮಗುವಿಗೆ ಸೋಂಕು ಕಂಡುಬಂದಿದೆ.
ಮೇರಮಜಲು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಪ್ರಕರಣ ಕಂಡು ಬಂದವರ ಮನೆಯ 25 ವರ್ಷದ ಪುರುಷ, 32 ವರ್ಷದ ಮಹಿಳೆ, 52 ವರ್ಷದ ಪುರುಷ, 25 ವರ್ಷದ ಯುವತಿ ಹಾಗೂ 27 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಪೂಜಾರಿ ಆರೋಗ್ಯದಲ್ಲಿ ಚೇತರಿಕೆ
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹಾಗೂ ಅವರ ಮನೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಯಾವುದೇ ಆತಂಕವಿಲ್ಲ ಎಂದು ಅವರ ಆಪ್ತರ ಮೂಲಗಳು ತಿಳಿಸಿವೆ.
ವಿಟ್ಲ: ಮಹಿಳೆಗೆ ಪಾಸಿಟಿವ್
ವಿಟ್ಲದ ಬೊಬ್ಬೆಕೇರಿಯ ಮಹಿಳೆಗೆ ಕೋವಿಡ್ 19 ಸೋಂಕು ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಟ್ಲದ ಬೊಬ್ಬೆಕೇರಿಯಲ್ಲಿರುವ ಮಹಿಳೆಯ ಪತಿಯ ಮನೆ ಸೀಲ್ಡೌನ್ ಮಾಡಲಾಗಿದೆ.
ಕಾರ್ನಾಡು ನಿವಾಸಿಗೆ ಕೋವಿಡ್ 19 ಸೋಂಕು
ಇಲ್ಲಿಯ ಕಾರ್ನಾಡು ಜಂಕ್ಷನ್ ಮನೆಯ 88 ವರ್ಷ ಪ್ರಾಯದ ಮಹಿಳಾ ನಿವಾಸಿಯೋರ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಎನ್. ಅವರು ತಿಳಿಸಿದ್ದಾರೆ.
ಕಿನ್ನಿಗೋಳಿ: ಓರ್ವರಿಗೆ ಸೋಂಕು
ಇಲ್ಲಿನ ಮೆನ್ನಬೆಟ್ಟು ಗ್ರಾ. ಪಂ. ವ್ಯಾಪ್ತಿಯ ರಾಜರತ್ನಪುರ ಬಳಿಯ ವಸತಿ ಗೃಹದಲ್ಲಿರುವ ನಿವಾಸಿಗೆ ಜ್ವರ ತಪಾಸಣೆ ವೇಳೆ ನಡೆಸಲಾದ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸತಿಗೃಹದ 11 ಮನೆಗಳನ್ನು ಸೀಲ್ಡೌನ್ ಮಾಡಲಾಗಿದ್ದು 31 ಜನರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಸೋಂಕು
ಪಡುಬಿದ್ರಿ: ಬೆಂಗಳೂರಿನಿಂದ ಎರ್ಮಾಳಿಗೆ ಬಂದಿದ್ದ 44 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ವರದಿಯಾಗಿದೆ. ಜ್ವರ ಬಾಧೆಯಿಂದ ಬಳಲುತ್ತಿದ್ದ ಅವರು ಮೊದಲಿಗೆ ಪ್ರಾ. ಆ. ಕೇಂದ್ರಕ್ಕೆ ತೆರಳಿದ್ದರು. ಜ್ವರ ಕಡಿಮೆಯಾಗದಿದ್ದಾಗ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲಿ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಅವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪತ್ನಿ ಹಾಗೂ ಮಗನ ಜತೆಗೆ ಬಂದಿದ್ದ ಇವರ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ಕುಂದಾಪುರ: 10 ಮಂದಿಗೆ ಪಾಸಿಟಿವ್
ತಾಲೂಕಿನ 10 ಜನರಿಗೆ ಮಂಗಳವಾರ ಕೋವಿಡ್ -19 ಪಾಸಿಟಿವ್ ಬಂದಿದೆ. ಅವರನ್ನೆಲ್ಲ ಸರಕಾರಿ ಕೋವಿಡ್ – 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆದೂರು, ಗುಜ್ಜಾಡಿ, ಹಟ್ಟಿಯಂಗಡಿ, ಕುಂದಾಪುರ ನಗರ (ತಲಾ 2 ಪ್ರಕರಣ), ವಕ್ವಾಡಿ, ಕೋಣಿ, ವಡೇರಹೋಬಳಿ, ವಂಡ್ಸೆ, ಬೆಳ್ಳಾಲದ ವ್ಯಕ್ತಿಗಳಿಗೆ ಪಾಸಿಟಿವ್ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ