2,945 ಅನರ್ಹ ಕಾರ್ಡ್ ರದ್ದು
ದ.ಕ., ಉಡುಪಿ: ಮುಂದುವರಿದ ಪಡಿತರ ಚೀಟಿದಾರರ ಬೇಟೆ
Team Udayavani, Nov 3, 2019, 3:30 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಅನರ್ಹ ಪಡಿತರ ಚೀಟಿ ಪತ್ತೆ ಕಾರ್ಯ ಮುಂದುವರಿದಿದ್ದು, ದ.ಕ., ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 2,945 ಬಿಪಿಎಲ್ ಚೀಟಿಗಳನ್ನು ಆಹಾರ, ನಾಗರಿಕ ಪೂರೈಕೆ ಇಲಾಖೆ ಪತ್ತೆಹಚ್ಚಿ ರದ್ದುಗೊಳಿಸಿದೆ. ಕೆಲವರು ಸ್ವಪ್ರೇರಣೆಯಿಂದಲೇ ಬಿಪಿಎಲ್ ಚೀಟಿಯನ್ನು ಎಪಿಎಲ್ಗೆ ಬದಲಾಯಿಸಿಕೊಂಡಿದ್ದಾರೆ.
ಬಿಪಿಎಲ್ ಪಡಿತರ ಚೀಟಿಗೆ ಅನರ್ಹ ರಾದರೂ ಆ ಸೌಲಭ್ಯ ಪಡೆಯು ತ್ತಿರುವ ಶ್ರೀಮಂತ ವರ್ಗದವರು ಎಪಿಎಲ್ಗೆ ಪರಿವರ್ತಿಸಿಕೊಳ್ಳಲು ಸರಕಾರ ಸೆ. 30ರ ಗಡುವು ನೀಡಿತ್ತು. ಆಗಸ್ಟ್, ಸೆಪ್ಟಂಬರ್ನಲ್ಲಿ ಕೆಲವರು ಎಪಿಎಲ್ಗೆ ಬದಲಾಯಿಸಿಕೊಂಡಿದ್ದರಾದರೂ ಸಾಕಷ್ಟು ಮಂದಿ ಬಿಪಿಎಲ್ನಲ್ಲೇ ಮುಂದುವರಿದಿದ್ದರು. ಇದರಿಂದ ಉಭಯ ಜಿಲ್ಲೆಗಳ ಇಲಾಖೆ ಅಧಿಕಾರಿ ಗಳು ಅನರ್ಹರ ಪತ್ತೆಗಾಗಿ ಆರ್ಟಿಒ ಮೊರೆ ಹೋಗಿದ್ದರು. ಚತುಷ್ಕಕ್ರ ವಾಹನ ಹೊಂದಿರುವವರು ವಾಹನ ನೋಂದಣಿ ಸಂದರ್ಭ ಮಾಡಿರುವ ಆಧಾರ್ ಲಿಂಕ್ ಆಧರಿಸಿ ಚತುಶ್ಚಕ್ರ ವಾಹನ ಹೊಂದಿರುವವರ ಪಟ್ಟಿ ಪಡೆದುಕೊಂಡು ಅನರ್ಹರ ಪತ್ತೆ ಕಾರ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿ ದ್ದಾರೆ. 3 ತಿಂಗಳ ಅವಧಿಯಲ್ಲಿ ಎರಡೂ ಜಿಲ್ಲೆ ಗಳಲ್ಲಿ 2,945 ಮಂದಿ ಬಿಪಿಎಲ್ಗೆ ಅನರ್ಹರೆಂದು ಗೊತ್ತಾ ಗಿದೆ. ಈ ಪತ್ತೆ ಕಾರ್ಯ ನಿರಂತರ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ.ಕ.: 1,899 ಕಾರ್ಡ್
ದ.ಕ. ಜಿಲ್ಲೆಯಲ್ಲಿ ಬಿಪಿಎಲ್ಗೆ ಅನರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವ ಒಟ್ಟು 1,899 ಮಂದಿಯನ್ನು ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಪತ್ತೆ ಹಚ್ಚ ಲಾಗಿದೆ. ಈ ಪೈಕಿ ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 87, ಮಂಗಳೂರು ತಾಲೂಕು 261, ಬಂಟ್ವಾಳ 547, ಪುತ್ತೂರು 274, ಬೆಳ್ತಂಗಡಿ 611, ಸುಳ್ಯದ 119 ಅನರ್ಹ ಕುಟುಂಬಗಳ ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ.
1,311 ಮಂದಿ ಚತುಶ್ಚಕ್ರ ಮಾಲಕರು
ಕಾರ್ಡ್ ರದ್ದುಗೊಂಡ ದ.ಕ. ಜಿಲ್ಲೆಯ 1,899 ಕುಟುಂಬಗಳ ಪೈಕಿ 1,311 ಕುಟುಂಬಗಳು ಚತುಶ್ಚಕ್ರ ವಾಹನ ಹೊಂದಿದವು. ಮಂಗಳೂರು ಅ.ಪ.ದಲ್ಲಿ 35, ಮಂಗಳೂರು ತಾ| 103, ಬಂಟ್ವಾಳ 360, ಪುತ್ತೂರು 188, ಬೆಳ್ತಂಗಡಿ 520, ಸುಳ್ಯದ 105 ಕುಟುಂಬ ಚತುಶ್ಚcಕ್ರ ವಾಹನ ಹೊಂದಿದವರಾಗಿದ್ದಾರೆ.
ದಂಡ ವಿಧಿಸಲಾಗುವುದು
ಅನರ್ಹ ಬಿಪಿಎಲ್ ಪಡಿತರ ಚೀಟಿ ದಾರರು ಶೀಘ್ರವೇ ತಮ್ಮ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ಗೆ ಪರಿವರ್ತಿಸಿಕೊಳ್ಳಬೇಕು. ಪತ್ತೆ ಕಾರ್ಯ ವೇಳೆ ಅನರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವುದು ಕಂಡು ಬಂದರೆ ಅಂತಹವರಿಗೆ ಯಾವಾಗಿನಿಂದ ಅವರು ಎಪಿಎಲ್ಗೆ ಪರಿವರ್ತಿಸಿಕೊಳ್ಳಬೇಕಿತ್ತೋ ಅಲ್ಲಿಂದ ಇಲ್ಲಿಯವರೆಗೆ ಅಕ್ಕಿಗೆ ಪ್ರತಿ ಕೆಜಿಗೆ 35 ರೂ.ಗಳಂತೆ ದಂಡ ವಿಧಿಸಲಾಗುವುದು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಉಡುಪಿ: 1,046 ಪಡಿತರ ಚೀಟಿ
ಉಡುಪಿ ಜಿಲ್ಲೆಯಲ್ಲಿ ಪತ್ತೆಹಚ್ಚಿರುವ 1,046 ಚೀಟಿಗಳ ಪೈಕಿ 693 ಮಂದಿ ಸ್ವಪ್ರೇರಣೆಯಿಂದ ಹಿಂದಿುಗಿಸಿದವರಾಗಿದ್ದಾರೆ. 350 ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ಗೆ ಪರಿವರ್ತಿಸಲಾಗಿದೆ. ಮೂರು ಕುಟುಂಬಗಳು ಅನರ್ಹವಾಗಿದ್ದರೂ ಬಿಪಿಎಲ್ ಚೀಟಿ ಹೊಂದಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕುಸುಮಾಧರ್ ತಿಳಿಸಿದ್ದಾರೆ.
ಅನರ್ಹ ಪಡಿತರ ಚೀಟಿ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈಗಾಗಲೇ 1,899 ಮಂದಿಯನ್ನು ಪತ್ತೆಹಚ್ಚಲಾಗಿದೆ. ನಿಯಮಾನುಸಾರ ದಂಡ ವಿಧಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಬಿಪಿಎಲ್ಗೆ ಅನರ್ಹರಾದವರು ತತ್ಕ್ಷಣ ತಮ್ಮ ಕಾರ್ಡನ್ನು ಎಪಿಎಲ್ಗೆ ಬದಲಾಯಿಸಬೇಕು.
-ಡಾ| ಮಂಜುನಾಥನ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ