62 ವರ್ಷಗಳ ಶಿರಾಡಿ ಸರಕಾರಿ ಶಾಲೆ: ತರಗತಿ ಏಳು, ಮಕ್ಕಳು ಮೂರು!
Team Udayavani, Jun 16, 2018, 5:19 PM IST
ನೆಲ್ಯಾಡಿ: ಖಾಸಗಿ ಶಾಲೆಗಳ ಕುರಿತಾದ ಜನರ ವ್ಯಾಮೋಹ ಸರಕಾರಿ ಶಾಲೆಗಳನ್ನು ಮುಚ್ಚಿಸುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಶಿರಾಡಿ ಸರಕಾರಿ ಶಾಲೆ. ಇಲ್ಲಿ ಏಳು ತರಗತಿಗಳಲ್ಲಿರುವ ಮಕ್ಕಳ ಸಂಖ್ಯೆà ಬರೀ ಮೂರು. ಒಬ್ಬರು ಶಿಕ್ಷಕರು ಹಾಗೂ ಒಬ್ಬರು ಅಡುಗೆ ಸಿಬಂದಿ ಇದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಿರಾಡಿ ಸರಕಾರಿ ಹಿ.ಪ್ರಾ. ಶಾಲೆ ಈಗ ಯಾರಿಗೂ ಬೇಡವಾಗಿ,
ಮುಚ್ಚುವ ಹಂತಕ್ಕೆ ತಲುಪಿರುವುದು ವಿಪರ್ಯಾಸವಾಗಿದೆ.
1956ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಎಲ್ಲ ಸೌಕರ್ಯಗಳಿವೆ. 6 ತರಗತಿ ಕೊಠಡಿಗಳು, ಸುಸಜ್ಜಿತ ಅಡುಗೆ
ಕೋಣೆ, ಆಟದ ಮೈದಾನ, ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಉಚಿತ ಬಟ್ಟೆ ಸಹಿತ ಸರಕಾರಿ ಸವಲತ್ತುಗಳನ್ನು ಒದಗಿಸುತ್ತಿದ್ದರೂ ಈ ಶಾಲೆಗೆ ಮಕ್ಕಳು ಬರುತ್ತಿಲ್ಲ. ಶಿಕ್ಷಕರ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸುಮಾರು 62 ವರ್ಷಗಳ ಇತಿಹಾಸವಿರುವ ಶಿರಾಡಿ ಶಾಲೆಯಲ್ಲಿ ಒಂದು ಹಂತದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು. ಇಲ್ಲಿ ಕಲಿತವರು ಉನ್ನತ ವ್ಯಾಸಂಗ ಮಾಡಿ, ವಿದೇಶಗಳಲ್ಲೂ ಉದ್ಯೋಗದಲ್ಲಿದ್ದಾರೆ. 10-15 ವರ್ಷಗಳ ಹಿಂದೆ 100ಕ್ಕಿಂತ ಹೆಚ್ಚು ಮಕ್ಕಳು ಇರುತ್ತಿದ್ದರು. ಇತ್ತೀಚಿನ 7 ವರ್ಷಗಳಲ್ಲಿ ಮಕ್ಕಳ ಸಂಖ್ಯೆ 51, 44, 41, 29, 19, 16 ಹಾಗೂ 5 – ಹೀಗೆ ಕುಸಿಯುತ್ತಲೇ ಬಂದಿದೆ. ಇಲ್ಲಿಗೆ ಸಮೀಪದ ಉದನೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದು ಆರಂಭಗೊಂಡಿದ್ದೇ ಸ.ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗಿದೆ.
ಅಡುಗೆ ಸಿಬಂದಿ ಮೊಮ್ಮಕ್ಕಳು!
ಈಗಿರುವ ಮೂವರು ಮಕ್ಕಳ ಪೈಕಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವಿಶೇಷ ಅಗತ್ಯವುಳ್ಳ ಮಗುವಾಗಿದೆ. ಮತ್ತೊಬ್ಬಳು ಎರಡನೇ ತರಗತಿಯಲ್ಲಿದ್ದಾಳೆ. ಈ ಇಬ್ಬರೂ ಶಾಲೆಯ ಅಡುಗೆ ಸಿಬಂದಿಯ ಮೊಮ್ಮಕ್ಕಳು. ಐದನೇ ತರಗತಿ ವಿದ್ಯಾರ್ಥಿ ಸಕಲೇಶಪುರದಿಂದ ವಲಸೆ ಬಂದ ಕುಟುಂಬದ ಬಾಲಕ. ಕಳೆದ ವರ್ಷ ಶಿರಾಡಿಗೆ ಬಂದಿದ್ದ ಈತ ಶಾಲೆಗೆ ಹೋಗದೆ ಅಲೆದಾಡುತ್ತಿದ್ದ. ಆತನನ್ನು ಕರೆತಂದು ನಾಲ್ಕನೇ ತರಗತಿಗೆ ಸೇರಿಸಲಾಗಿತ್ತು. ಆತನ ಕುಟುಂಬ ಸಕಲೇಶಪುರಕ್ಕೆ ಮರಳಿದರೆ, ಅಡುಗೆ ಸಿಬಂದಿಯ ಮೊಮ್ಮಕ್ಕಳು ಮಾತ್ರ ಶಾಲೆಯಲ್ಲಿ ಉಳಿಯುತ್ತಾರೆ.
ಶಿಕ್ಷಕರ ಕೊರತೆ
2006ರಲ್ಲಿ ಇಲ್ಲಿ 80ಕ್ಕಿಂತ ಹೆಚ್ಚು ಮಕ್ಕಳಿದ್ದರು. ನಾಲ್ವರು ಶಿಕ್ಷಕರಿದ್ದರು. ಇದರ ಜೊತೆಗೆ ಗೌರವ ಶಿಕ್ಷಕಿಯರೂ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಅಬ್ರಹಾಂ ಅಕಾಲಿಕವಾಗಿ ನಿಧನರಾದರು. ಶಿಕ್ಷಕಿ ಅನ್ನಮ್ಮ ಸ್ವಯಂ ನಿವೃತ್ತಿ ಪಡೆದುಕೊಂಡರು. ಅಮ್ಮಣ್ಣಿ ಎಂಬ ಶಿಕ್ಷಕಿ ನಿವೃತ್ತಿಗೊಂಡರು. ಆದರೂ ಅವರ ಜಾಗಕ್ಕೆ ಯಾರನ್ನೂ ನೇಮಿಸಿಲ್ಲ. ಹೀಗಾಗಿ, ಇಲ್ಲಿ ಶಿಕ್ಷಕರ ಕೊರತೆ ಎದುರಾಯಿತು. ಮುಖ್ಯ ಶಿಕ್ಷಕಿಯಾಗಿದ್ದ ಆಲೀಸ್ ಎ.ಜೆ. ಅವರು ಕಳೆದ ಎಪ್ರಿಲ್ ತಿಂಗಳಿನಲ್ಲಿ ನಿವೃತ್ತಿಗೊಂಡಿದ್ದಾರೆ. ಈಗ ಇಲ್ಲಿ ಅಡ್ಡಹೊಳೆಯಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ತ್ರೇಸಿಯಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯ ಸಭೆ ಗಳಿಗೆ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ. ಬಿಸಿಯೂಟಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನೂ ಸಕಾಲಕ್ಕೆ ಕೊಡಬೇಕು. ಇದರಿಂದ ಹಿನ್ನಡೆಯಾಗಿದೆ.
ಕಳೆದ ವರ್ಷ 5 ಮಕ್ಕಳು
ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಲ್ಲಿ 15 ಮಕ್ಕಳಿದ್ದರು. ಒಬ್ಬರು ಮುಖ್ಯ ಶಿಕ್ಷಕಿ ಹಾಗೂ ಸಹಶಿಕ್ಷಕಿ ಇದ್ದರು. ಮಕ್ಕಳ ಸಂಖ್ಯೆ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಸಹಶಿಕ್ಷಕಿಯನ್ನು ಅಡ್ಡಹೊಳೆ ಶಾಲೆಗೆ ನಿಯೋಜಿಸಲಾಯಿತು. ಇಲ್ಲಿ ಶಿಕ್ಷಕರಿಲ್ಲ ಎಂಬ ನೆಪವೊಡ್ಡಿ 10 ಮಕ್ಕಳು ಅಡ್ಡಹೊಳೆ, ನೇಲ್ಯಡ್ಕ ಶಾಲೆ ಸೇರಿದರು. ಹೀಗಾಗಿ, ಕಳೆದ ವರ್ಷ ಐದು ಮಕ್ಕಳಷ್ಟೇ ಉಳಿದರು. ಏಳನೇ ತರಗತಿ ಉತ್ತೀರ್ಣಳಾದ ವಿದ್ಯಾರ್ಥಿಯೊಬ್ಬ 8ನೇ ತರಗತಿಗೆ ಬೇರೆ ಶಾಲೆಗೆ ತೆರಳಿದ್ದಾನೆ. ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಟಿಸಿ ಪಡೆದು ಶಾಲೆ ಬದಲಿಸಿದ್ದಾಳೆ. ಈ ವರ್ಷ ಹೊಸದಾಗಿ ಮಕ್ಕಳು ಸೇರ್ಪಡೆಯಾಗದ ಕಾರಣ, ಇಡೀ ಶಾಲೆಯಲ್ಲಿ ಮೂವರು ಮಕ್ಕಳಷ್ಟೇ ಇದ್ದಾರೆ.
ಯಾರಿಗೂ ಮನಸ್ಸಿಲ್ಲ
ಕೆಲವು ವರ್ಷಗಳಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೀಗ ಉದನೆಯಲ್ಲಿ ಖಾಸಗಿ ಆಂಗ್ಲಮಾಧ್ಯಮ ಶಾಲೆ ಆರಂಭಗೊಂಡ ಪರಿಣಾಮ ಹೆಚ್ಚಿನವರು ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಯಾರೂ ಮನಸ್ಸು ಮಾಡುತ್ತಿಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲಿ 5 ಮಕ್ಕಳಿದ್ದು, ಈ ವರ್ಷ ಮೂವರು ಮಕ್ಕಳಿದ್ದಾರೆ.
– ತ್ರೇಸಿಯಮ್ಮ, ಸಹಶಿಕ್ಷಕಿ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ