ಶಿಥಿಲಾವಸ್ಥೆಯಲ್ಲಿದ್ದ ಕುದ್ಮುಲ್ ರಂಗರಾವ್ ಹೆಣ್ಣು ಮಕ್ಕಳ ವಸತಿ ನಿಲಯಕ್ಕೆ ಕಾಯಕಲ್ಪ
7 ಕೋ.ರೂ. ವೆಚ್ಚದಲ್ಲಿ ಪುನಃ ನಿರ್ಮಾಣ
Team Udayavani, Jun 6, 2019, 6:00 AM IST
ಮಹಾನಗರ: ಒಂದೂವರೆ ವರ್ಷದಿಂದ ಮುಚ್ಚಿದ್ದ ಕೊಡಿಯಾಲ ಬೈಲ್ನ ಕುದ್ಮುಲ್ ರಂಗರಾವ್ ಹೆಣ್ಣು ಮಕ್ಕಳ ವಸತಿ ನಿಲಯಕ್ಕೆ ಹೊಸ ಕಟ್ಟಡ ಹೊಂದುವ ಭಾಗ್ಯ ಲಭಿಸಿದ್ದು, ಸುಮಾರು ಏಳು ಕೋಟಿ ರೂ. ವೆಚ್ಚದಲ್ಲಿ ಪುನಃ ನಿರ್ಮಾಣಗೊಳ್ಳಲಿದೆ.
ಶಿಥಿಲಾವಸ್ಥೆಯಲ್ಲಿರುವ ಕಾರಣ ಈ ವಸತಿ ನಿಲಯವು ವಾಸಕ್ಕೆ ಯೋಗ್ಯವಲ್ಲ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಮುಚ್ಚಿ, ವಿದ್ಯಾರ್ಥಿನಿಯರನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಖಾಸಗಿ ಕಟ್ಟ ಡಕ್ಕೆ ತಿಂಗಳಿಗೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿತ್ತು. ವಸತಿ ನಿಲಯದ ದುರಸ್ತಿಗೆ ಸರಕಾರಕ್ಕೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ದೊರೆತಿರಲಿಲ್ಲ.
ಇದೀಗ ಪುನಃ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯು 7 ಕೋಟಿ ರೂ. ಮಂಜೂರು ಮಾಡಿದ್ದು, ಕಾಮಗಾರಿಗಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಹಿಂದಿನ ಕಟ್ಟಡದಲ್ಲಿ 150 ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ಆದರೆ ಹೊಸ ಕಟ್ಟಡದಲ್ಲಿ 200ರಿಂದ 250 ವಿದ್ಯಾರ್ಥಿಗಳಿಗೆ ಅವಕಾಶವಿರಲಿವೆ.
ಹೆಚ್ಚುವರಿ ವಸತಿ ನಿಲಯಗಳಿಗಾಗಿ ಬೇಡಿಕೆ ಇದ್ದು, ಆ ಬಗ್ಗೆಯೂ ಸರಕಾರದ ಗಮನಕ್ಕೆ ತರಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ವಿದ್ಯಾರ್ಥಿನಿಯರಿಗೆ ವಸತಿ, ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ದಿ| ಕುದ್ಮುಲ್ ರಂಗರಾವ್ ಹೆಣ್ಣು ಮಕ್ಕಳ ವಸತಿ ನಿಲಯವನ್ನು ಸ್ಥಾಪಿಸಲಾಗಿತ್ತು.
ಹೆಚ್ಚುವರಿ ವಿದ್ಯಾರ್ಥಿ ನಿಲಯಕ್ಕೆ ಆಗ್ರಹ
ಸದ್ಯ ಜಿಲ್ಲೆಯಲ್ಲಿ 29 ವಸತಿ ನಿಲಯಗಳಿದ್ದು, ಇದರಲ್ಲಿ 10 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, 19 ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. ಇದರಲ್ಲಿ 820 ವಿದ್ಯಾರ್ಥಿಗಳಿಗೆ ವಾಸ್ತವ್ಯ ಹೂಡಲು ಅವಕಾಶವಿದೆ. ಆದರೆ ಪ್ರತಿ ವರ್ಷ ಸುಮಾರು 1800 ಅರ್ಜಿಗಳು ಬರುತ್ತವೆ. ಬಳಿಕ ವಿದ್ಯಾರ್ಥಿಗಳ ಆಯ್ಕೆ ಮಾಡಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ನಗರದಲ್ಲಿ 2 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹುಡುಗರಿಗೆ, 2 ಮೆಟ್ರಿಕ್ ಪೂರ್ವ ವಸತಿ ನಿಲಯ ಹುಡುಗಿಯರಿಗೆ, ಒಂದು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಹುಡುಗರಿಗೆ, ಒಂದು ಮೆಟ್ರಿಕ್ ಪೂರ್ವ ವಸತಿ ವ್ಯವಸ್ಥೆ ಹುಡುಗರಿಗೆ ಇದೆ. ನಗರ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿಲ್ಲ. ಹೆಚ್ಚುವರಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ವಿವಿಧ ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿವೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಿ
ನಗರದ ಹೊರಭಾಗಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯ ಸೌಲಭ್ಯಗಳು ದೊರೆತಾಗ ಉತ್ತಮ ವಿದ್ಯಾಭ್ಯಾಸ ಪಡೆಯುವ ಅವಕಾಶವಿತ್ತು. ಇದೀಗ ಖಾಸಗಿ ಪಿಜಿಗಳಿಗೆ ದುಬಾರಿ ಬೆಲೆ ನೀಡಬೇಕಾಗಿದೆ. ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಬೇಕು.
- ರಘುರಾಜ್ ಕದ್ರಿ,
ಅಖೀಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ
ಹೆಚ್ಚುವರಿ ವಸತಿ ನಿಲಯಕ್ಕೆ ಪ್ರಸ್ತಾವನೆ ಸಲ್ಲಿಕೆ
ನಗರ ವ್ಯಾಪ್ತಿಯಲ್ಲಿ ಇಲಾಖೆಯ ವಸತಿ ನಿಲಯಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಹೆಚ್ಚುವರಿ ನಾಲ್ಕು ವಸತಿ ನಿಲಯಗಳನ್ನು ನಗರ ವ್ಯಾಪ್ತಿಯಲ್ಲಿ ತೆರೆಯುವಂತೆ ಇಲಾಖೆ ವತಿಯಿಂದ ಸರಕಾರಕ್ಕೆ ಮನವಿ ನೀಡಲಾಗಿದೆ.
– ಯೋಗೀಶ್,
ಸಮಾಜ ಕಲ್ಯಾಣಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ