ಸುಬ್ರಹ್ಮ ಣ್ಯ ಪರಿಸರದಲ್ಲಿ 94 ಸಿ: ಜಂಟಿ ಸರ್ವೆಗೆ ತೀರ್ಮಾನ
Team Udayavani, Jul 11, 2017, 3:25 AM IST
ಸುಳ್ಯ: ಸುಬ್ರಹ್ಮಣ್ಯ ಮತ್ತು ಏನೆಕಲ್ಲು ಭಾಗದಲ್ಲಿನ 94 ಸಿ ವಿಷಯಕ್ಕೆ ಸಂಬಂಧಿಸಿದಂತೆ ಜು. 25 ರಂದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಸೋಮವಾರ ನಡೆದ ತಾಲೂಕು ಪಂಚಾಯತ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.ಸುಬ್ರಹ್ಮಣ್ಯ ಪರಿಸರದಲ್ಲಿ 94 ಸಿ ಸರ್ವೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸಿದ ಅಶೋಕ್ ನೆಕ್ರಾಜೆ ಅವರು, ಸುಬ್ರಹ್ಮಣ್ಯ, ಏನೆಕಲ್ಲು ಗ್ರಾಮದಲ್ಲಿ 94 ಸಿಗೆ 150 ಮಂದಿಯಷ್ಟು ಫಲಾನುಭವಿಗಳಿದ್ದಾರೆ. ಅರಣ್ಯ ಇಲಾಖೆ ಸಭೆಗೆ ಆಗಮಿಸಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಉಪತಹಶೀಲ್ದಾರ್ ರಾಮಣ್ಣನಾಯ್ಕ, ಅಲ್ಲಿರುವುದು ಅರಣ್ಯ ಇಲಾಖೆ ಜಾಗ. ಹಾಗಾಗಿ ಅವರು ಸರ್ವೆ ನಡೆಸಿ ನಮಗೆ ಮಾಹಿತಿ ನೀಡಬೇಕಿದೆ ಎಂದು ಪ್ರತಿಪಾದಿಸಿದರು.
ಮಧ್ಯ ಪ್ರವೇಶಿಸಿದ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಾಗಗಳಲ್ಲಿ ಅವರವರ ಕಾನೂನು ವ್ಯಾಪ್ತಿಯಲ್ಲಿ ಜಾಗ ಮಂಜೂರಾತಿ ಮಾಡಲು ಜಿಲ್ಲಾಧಿಕಾರಿಗಳೇ ಸೂಚಿಸಿದ್ದಾರೆ ಎಂದು ತಿಳಿಸಿದರು. ಅಂತಿಮವಾಗಿ ಜುಲೈ 25 ರಂದು ಸುಬ್ರಹ್ಮಣ್ಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಲು ತೀರ್ಮಾನಿಸಲಾಯಿತು. ಇದೇ ರೀತಿ ಉಳಿದ ಗ್ರಾಮಗಳಲ್ಲೂ ಅನುಸರಿಸುವಂತೆ ಉಪಾಧ್ಯಕ್ಷೆ ಶುಭದಾ ರೈ ಸಲಹೆ ನೀಡಿದರು.
ಶಾಲೆಗೆ ಭೇಟಿ ನೀಡದ ಬಗ್ಗೆ ಆಕ್ಷೇಪ
ಬಿಇಒ ರವರು ಶಾಲೆಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ ಎಂದು ಅಶೋಕ್ ನೆಕ್ರಾಜೆ ಆರೋಪಿಸಿದರು. ಈ ಸಂದರ್ಭ ಹಲವು ಹಂಚಿನ ಛಾವಣಿ ಇರುವ ಶಾಲೆಗಳ ಸ್ಥಿತಿ ಕಳವಳಕಾರಿಯಾಗಿದೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ರಾಧಾಕೃಷ್ಣ ಬೊಳ್ಳೂರು ಸಲಹೆ ನೀಡಿದರು. ತುರ್ತಾಗಿ ಅನುದಾನ ಬೇಕಾಗಿರುವ ಶಾಲೆಯ ಸ್ಥಿತಿಗತಿಯ ಬಗ್ಗೆ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡಿದರೆ ದುರಸ್ತಿಗೆ ಅನುದಾನ ನೀಡುತ್ತಾರೆ. ಇದೇ ಕ್ರಮ ಅನುಸರಿಸುವಂತೆ ಅಧಿಕಾರಿ ಕೆಂಪಲಿಂಗಪ್ಪ ಅವರಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಸೂಚಿಸಿದರು.
ಕುಡಿಯುವ ನೀರಿನ ಘಟಕ
ಎರಡೂವರೆ ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿಲ್ಲ ಎಂದು ಅಶೋಕ್ ನೆಕ್ರಾಜೆ ಹಾಗೂ ಉದಯ್ಕೊಪ್ಪಡ್ಕ ಪ್ರಸ್ತಾಪಿಸಿದಾಗ, ತಾಲೂಕಿಗೆ 11 ಘಟಕ ಮಂಜೂರಾಗಿದ್ದು ಈ ಪೈಕಿ 9 ಪ್ರಾರಂಭವಾಗಿದೆ. ಕನಕಮಜಲಿನಲ್ಲಿ ಇನ್ನೂ ಆರಂಭಗೊಳ್ಳಬೇಕಿದೆ ಎಂದು ಸಂಬಂಧಿತ ಅಧಿಕಾರಿ ತಿಳಿಸಿದರು.
ಅಬಕಾರಿ ಇಲಾಖೆ
ಮದ್ಯದಂಗಡಿಗಳ ಸನ್ನದು ನವೀಕರಣ ವೇಳೆ ಅಬಕಾರಿ ಇಲಾಖೆ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ, ಬೇಕಾಬಿಟ್ಟಿ ಅನುಮತಿ ನೀಡಲಾಗಿದೆ ಎಂದು ಅಶೋಕ್ ನೆಕ್ರಾಜೆ ಆಪಾದಿಸಿದರು. ಸನದು ನವೀಕರಣ ಬಗ್ಗೆ ಮಾಹಿತಿ ಬಯಸಿದಾಗ ಅಧಿಕಾರಿಗಳು, ಮಾರ್ಗಸೂಚಿ ಪ್ರಕಾರವೇ ನೀಡಿದ್ದೇವೆ. ಹಿಂದೆ 28 ಮದ್ಯದಂಗಡಿಗಳಿದ್ದವು. ಈಗ ನಾರ್ಕೋಡು, ಪಂಜಿಗಾರು, ಐವರ್ನಾಡು, ನಿಂತಿಕಲ್ಲು, ಬೆಳ್ಳಾರೆಯಲ್ಲಿ 2 ಹಾಗೂ ಏನೆಕಲ್ಲು ಮತ್ತು ಪಂಜ ಒಟ್ಟು 10 ನವೀಕರಣಗೊಂಡಿವೆ. 18 ನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.
ಆರೋಗ್ಯ ಇಲಾಖೆ
ತಾಲೂಕು ಆರೋಗ್ಯ ಕೇಂದ್ರದಲ್ಲಿ ಅತ್ಯುತ್ತಮ ವೈದ್ಯರಿದ್ದಾರೆ. ಕೋಟ್ಯಂತರ ರೂ. ವೆಚ್ಚದ ಕಟ್ಟಡವಿದೆ. ಆದರೆ ಸೂಕ್ತ ಉಪಕರಣ ಮತ್ತು ಔಷಧಿ ಕೊರತೆಯಿದೆ. ಸ್ಪೆಷಲ್ ರೂಮ್ಗೆ ಕನಿಷ್ಠ 10 ಬೆಡ್ಗಳನ್ನು ಪೂರೈಸಬೇಕು. ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸುವಂತೆ ಅಶೋಕ್ ನೆಕ್ರಾಜೆ ಆಗ್ರಹಿಸಿದರು. ಸುಬ್ರಹ್ಮಣ್ಯದ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಗಮನಸೆಳೆದರು.
ಪೊಲೀಸ್ ಸಿಬಂದಿ ನೇಮಕ
ಸುಬ್ರಹ್ಮಣ್ಯ ಪೊಲೀಸ್ಠಾಣೆಯಲ್ಲಿ 7 ಮಂದಿ ಮಾತ್ರ ಖಾಯಂ ಸಿಬಂದಿ ಇದ್ದಾರೆ. ಮೂರು ಎಎಸ್ಐ, ಎರಡು ಮಂದಿ ಮಹಿಳಾ ಕಾನ್ಸ್ಟೆàಬಲ್ ಸಹಿತ 14 ಮಂದಿ ನೇಮಕಕ್ಕೆ ಜಿಲ್ಲಾಪೊಲೀಸ್ ಅಧೀಕ್ಷಕರಿಗೆ ನಿರ್ಣಯ ಕಳುಹಿಸುವಂತೆ ಅಶೋಕ್ ನೆಕ್ರಾಜೆ ಒತ್ತಾಯಿಸಿದರು. ಸುಬ್ರಹ್ಮಣ್ಯ ಕೆಎಸ್ಸಾರ್ಟಿಸಿ ಡಿಪೋ, ಸುಬ್ರಹ್ಮಣ್ಯ ಮೆಸ್ಕಾಂ ಸಬ್ಡಿವಿಶನ್, ಅಡಿಕೆ ಹಳದಿರೋಗ ಹತೋಟಿ ಕ್ರಮವಾಗದಿರುವ ಬಗ್ಗೆಯೂ ಪ್ರಸ್ತಾಪಿಸಿದರು.
ಸದಸ್ಯರಾದ ಪುಷ್ಪಾ ಮೇದಪ್ಪ ಅವರು, ಅರಂತೋಡು ಪ್ರಾಥಮಿಕ ಶಾಲೆಗೆ 10 ವರ್ಷಗಳಿಂದ ಮುಖ್ಯಶಿಕ್ಷಕರ ನೇಮಕವಾಗದಿರುವ ಬಗ್ಗೆ ಪ್ರಸ್ತಾಪಿಸಿದರು.
ಸಭೆಯಲ್ಲಿ ಅಂಬೇಡ್ಕರ್ ಭವನ, ಪಂಚಾಯತ್ ಮೀಸಲಿರಿಸಿದ ಜಾಗಕ್ಕೆ 94ಸಿ ಕಲ್ಪಿಸುವ ಅವಕಾಶ, ಆರ್ಎಂಎಸ್ನಡಿ ನಿರ್ಮಾಣವಾದ ಶಾಲೆ ಉದ್ಘಾಟನೆಗೊಂಡಿಲ್ಲದ ಬಗ್ಗೆ, ಪೋಡಿ ಮುಕ್ತ ಗ್ರಾಮಗಳ ಕುರಿತು ಚರ್ಚೆ ನಡೆಯಿತು. ಸಭೆ ಅಧ್ಯಕ್ಷತೆಯನ್ನು ಅಧ್ಯಕ್ಷ ಚನಿಲ ಕಲ್ತಡ್ಕ ವಹಿಸಿªರು. ಜಿ.ಪಂ. ಸದಸ್ಯೆ ಆಶಾತಿಮ್ಮಪ್ಪ, ತಹಶೀಲ್ದಾರ್ ಗಣೇಶ್ ಗೈರಾಗಿದ್ದರು. ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಾವತಿ ಬಾಳಿಲ, ತಾ.ಪಂ. ಸದಸ್ಯರು ಮತ್ತು ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಅಮಾನತಿಗೆ ನಿರ್ಣಯ
ಗಂಗಾ ಕಲ್ಯಾಣ ಇಲಾಖೆ ಅಧಿಕಾರಿ ಸತತ ಗೈರಾಗುವ ಬಗ್ಗೆ ಅಮಾನತಿಗಾಗಿ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಪಂಬೆತ್ತಾಡಿ ಮುಚ್ಚುಗಡೆಯಾದ ಶಾಲಾ ಜಾಗ ಒತ್ತುವರಿಯಾಗದಂತೆ ತಂತಿಬೇಲಿ ಅಳವಡಿಸಲು ಅಧ್ಯಕ್ಷರು ಬಿಇಒ ಅವರಿಗೆ ಸೂಚಿಸಿದರು.
ಕೇನ್ಯ ಕಾಯಂಬಾಡಿ ಮರಳು ಗುತ್ತಿಗೆದಾರ ವಿರುದ್ಧ ಶಿಸ್ತುಕ್ರಮಕ್ಕಾಗಿ ಮತ್ತು ಗುತ್ತಿಗೆ ರದ್ದುಗೊಳಿಸಲು ಕಾರ್ಯಪಾಲಕ ಅಭಿಯಂತರರಿಗೆ ವರದಿ ಕಳುಹಿಸಿರುವುದಾಗಿ ಪಿಡಬ್ಲೂéಡಿ ಎಂಜಿನಿಯರ್ ಸಂದೇಶ್ ಮಾಹಿತಿ ನೀಡಿದರು.
ಅನುಷ್ಠಾನ ನಿರ್ಣಯವಾಗದಿದ್ದರೆ
ಮುಂದೆ ಸಭೆ ಬಹಿಷ್ಕಾರ: ಅಶೋಕ್
ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸಭೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯಗಳು ಅನುಷ್ಠಾನಗೊಳ್ಳುವುದಿಲ್ಲ. ತಾ.ಪಂ. ಪ್ರಾಧಿಕಾರದಲ್ಲಿ ಏನು ಮಾಡಬಹುದು ಎಂದು ಸದಸ್ಯರನ್ನು ಪ್ರಶ್ನಿಸಿದರು. ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ, ಅನುಷಾನಕ್ಕೆ ಗಮನಹರಿಸದಿದ್ದರೆ ಮುಂದೆ ಸಭೆ ಬಹಿಷ್ಕರಿಸುತ್ತೇವೆ ಎಂದು ವಿಪಕ್ಷ ನಾಯಕ ಅಶೋಕ್ ನೆಕ್ರಾಜೆ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು