ಆಮ್ನಿಗೆ ಬಸ್ ಢಿಕ್ಕಿ : ಓರ್ವ ಸಾವು
Team Udayavani, Nov 19, 2017, 10:35 AM IST
ಉಪ್ಪಿನಂಗಡಿ : ಇಚ್ಲಂಪಾಡಿ ಗ್ರಾಮದ ಅಲಂಗದಲ್ಲಿ ಶನಿವಾರ ಯಾತ್ರಾರ್ಥಿಗಳಿದ್ದ ಆಮ್ನಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿ ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಕಳ ತಾಲೂಕು ಮುನಿಯಾಲು – ಅಂಡಾರು ಗ್ರಾಮದ ಮೊಟ್ಲುಪ್ಪಾಡಿ ನಿವಾಸಿ ರಾಜು ಶೆಟ್ಟಿ ಅವರ ಪುತ್ರ ಸಂದೇಶ್ ಶೆಟ್ಟಿ (28) ಮೃತಪಟ್ಟವರು. ಮುನಿಯಾಲುವಿನಿಂದ ಬಂಧುಗಳನ್ನು ಕುಳ್ಳಿರಿಸಿ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದಾಗ ಸುಬ್ರಹ್ಮಣ್ಯ ದಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ಖಾಸಗಿ ಬಸ್ ಕಾರಿಗೆ ಢಿಕ್ಕಿ ಹೊಡೆಯಿತು.
ಈ ಪರಿಣಾಮ ತಲೆಗೆ ಗಂಭೀರ ವಾಗಿ ಗಾಯಗೊಂಡ ಸಂದೇಶ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ ಮಹೇಶ್ ಶೆಟ್ಟಿ (35), ಸುಕಿನ್ ಶೆಟ್ಟಿ (18), ಗಿರಿಜಾ ಶೆಟ್ಟಿ (62) , ಜಲಜಾಕ್ಷಿ (54), ಪ್ರಭಾಕರ (50) ,ವಿಶಾಲ್ ಶೆಟ್ಟಿ (56) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.