ಬಂಟ್ವಾಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ನ್ಯಾಯಾಧೀಶರ ತಂಡ ಭೇಟಿ
Team Udayavani, Aug 11, 2019, 3:50 PM IST
ಬಂಟ್ವಾಳ: ಬಂಟ್ವಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ರವಿವಾರ ದ.ಕ.ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು, ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರ ಅಹವಾಲು ಸ್ವೀಕರಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಾಡ್ಲೋರ್ ಸತ್ಯ ನಾರಾಯಣಾಚಾರ್ಯ, ಸಿಜೆಎಂ ಗಂಗಾಧರ ಎ.ಆರ್, ಬಂಟ್ವಾಳ ಸೀನಿಯರ್ ಡಿವಿಜನ್ ಸಿವಿಲ್ ನ್ಯಾಯಾಧೀಶ ಇಮ್ತಿಯಾಜ್ ಅಹ್ಮದ್, ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶೆ ರಮ್ಯಾ, ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳ್ಯ, ಸಿಬಂದಿ ಸೀತಾರಾಮ ಕಮ್ಮಾಜೆ, ಗ್ರಾಮಲೆಕ್ಕಿಗ ಕರಿಬಸಪ್ಪ ನಾಯ್ಕ್, ಶಿವಪ್ರಸಾದ್, ಮೈಕಲ್ ಡಿಸೋಜಾ ಮೊದಲಾದವರಿದ್ದರು.
ತಂಡವು ಭಂಡಾರಿಬೆಟ್ಟು ಮುಳುಗಡೆ ಪ್ರದೇಶ, ಬಂಟ್ವಾಳ ಪೇಟೆಯ ಬಡ್ಡಕಟ್ಟೆ, ಗೂಡಿನಬಳಿ ಗೇಜ್, ಆಲಡ್ಕ ಪ್ರದೇಶಗಳಿಗೆ ಭೇಟಿ ನೀಡಿದ್ದು, ನ್ಯಾಯಾಧೀಶರು ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿದರು.
ಬಡ್ಡಕಟ್ಟೆಯ ವಾಣಿಜ್ಯ ಸಂಕೀರ್ಣದ ವ್ಯಾಪಾರಿಗಳು ಸೂಕ್ತ ಪರಿಹಾರ ಕೊಡಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಪ್ರತಿ ವರ್ಷ ನೆರೆಯ ಸಂದರ್ಭ ಅಂಗಡಿ ಮುಳುಗಡೆಯಾಗಿ ಅಪಾರ ನಷ್ಟವುಂಟಾಗುತ್ತಿದ್ದು, ಆದರೆ ಪರಿಹಾರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.