ಕಡಬ ಪ. ಪಂ. ವ್ಯಾಪ್ತಿ: ಚರಂಡಿ ದುರಸ್ತಿಗೆ ಕ್ರಮ
Team Udayavani, Apr 13, 2022, 9:53 AM IST
ಕಡಬ: ಗ್ರಾಮ ಪಂಚಾಯತ್ನಿಂದ ಪಟ್ಟಣ ಪಂಚಾಯತ್ ವ್ಯವಸ್ಥೆಗೆ ಮೇಲ್ದರ್ಜೆಗೇರಿರುವ ತಾಲೂಕು ಕೇಂದ್ರ ಕಡಬ ಪೇಟೆಯಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುವಂತೆ ಚರಂಡಿಗಳ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿಯೂ ಮಳೆನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆನೀರು ರಸ್ತೆಯಲ್ಲಿಯೆ ಹರಿದು ಕೃತಕ ನೆರೆ ಉಂಟಾಗುತ್ತಿತ್ತು. ಇದೀಗ ಅಲ್ಲಿ 3.57 ಲಕ್ಷ ರೂ.ನಲ್ಲಿ ವ್ಯವಸ್ಥಿತ ಕಾಂಕ್ರೀಟ್ ಚರಂಡಿ ನಿರ್ಮಾಣದ ಕಾಮಗಾರಿಗೆ ಚಾಲನೆ ದೊರೆತಿದ್ದು, ಪ್ರಗತಿಯಲ್ಲಿದೆ. ಅದೇ ರೀತಿ ಕಡಬ ಪೇಟೆಯ ಅಡ್ಡಗದ್ದೆ ಕಾಲೇಜು ರಸ್ತೆಯಲ್ಲಿಯೂ ಮಳೆನೀರು ಸಂಗ್ರಹಗೊಂಡು ಸಮಸ್ಯೆಗೆ ಕಾರಣವಾಗಿರುವ ಚರಂಡಿಯನ್ನು 2.61 ಲಕ್ಷ ರೂ.ನಲ್ಲಿ ದುರಸ್ತಿಗೊಳಿಸುವ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ. ಉಳಿದಂತೆ ಪೇಟೆಯಲ್ಲಿನ ರಸ್ತೆಯ ಬದಿಯ ಚರಂಡಿಗಳಲ್ಲಿ ತುಂಬಿ ಕೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯಗಳು, ಕಸಕಡ್ಡಿಗಳು, ಗಿಡಗಂಟಿಗಳು ಹಾಗೂ ಹೂಳನ್ನು ತೆರವುಗೊಳಿಸುವ ಕೆಲಸವನ್ನು ಪಟ್ಟಣ ಪಂ.ನ ಸ್ವಚ್ಛತ ಕಾರ್ಮಿಕರು ಕೈಗೆತ್ತಿಕೊಂಡಿದ್ದಾರೆ.
ಕಾಮಗಾರಿ ನಡೆಸಲಾಗುವುದು
ಪಟ್ಟಣ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆಯ ಪಕ್ಕದಲ್ಲಿ ವ್ಯವಸ್ಥಿತವಾದ ಕಾಂಕ್ರೀಟ್ ಚರಂಡಿ ನಿರ್ಮಾಣವಾಗುತ್ತಿದೆ. ಉಳಿದೆಡೆ ಸ್ವಚ್ಛತ ಕಾರ್ಮಿಕರು ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ಚರಂಡಿಗಳ ನಿರ್ಮಾಣಕ್ಕೂ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು. –ವೈ. ಪಕೀರ ಮೂಲ್ಯ, ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯತ್