ಆಲಂಕಾರು ಪೇಟೆ: ದಿನನಿತ್ಯ ಟ್ರಾಫಿಕ್ ಜಾಮ್!
Team Udayavani, Jan 19, 2019, 5:11 AM IST
ಆಲಂಕಾರು : ಹೋಬಳಿ ಕೇಂದ್ರ ವಾಗಿ ಬೆಳೆಯುತ್ತಿರುವ ಆಲಂಕಾರು ಪೇಟೆ ಯಲ್ಲಿ ಇದೀಗ ದಿನನಿತ್ಯವೂ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಶಾಂತಿ ಮೊಗರು ಕುಮಾರಧಾರಾ ನೂತನ ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ಆಲಂಕಾರನ್ನು ಸಂಪರ್ಕಿಸುವ ವಾಹನಗಳ ಸಂಖ್ಯೆ ಗಣನೀ ಯವಾಗಿ ಹೆಚ್ಚಾಗಿದೆ. ಈ ಕಾರಣದಿಂದ ಆಲಂಕಾರು ಪೇಟೆಯಲ್ಲಿ ನಿತ್ಯವೂ ಟ್ರಾಫಿಕ್ ಸಮಸ್ಯೆ ಉದ್ಭವಿಸಿದೆ.
ಕಷ್ಟಪಡುತ್ತಿರುವ ವಿದ್ಯಾರ್ಥಿಗಳು
ತೀರಾ ಗ್ರಾಮೀಣ ಪ್ರದೇಶವಾದರೂ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ಈಗಾಗಲೇ ದೂರದ ಊರುಗಳಿಂದ ಈ ಭಾಗದಲ್ಲಿರುವ ವಿದ್ಯಾ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುತ್ತಿ ದ್ದಾರೆ. ಹೆಚ್ಚಾಗಿ ಬಸ್ಸನ್ನು ಆಶ್ರಯಿಸಿಯೇ ಆಲಂಕಾರಿಗೆ ಬರುತ್ತಾರೆ. ಆದರೆ ಬೆಳಗ್ಗೆ ಮತ್ತು ಸಂಜೆ ವೇಳೆ ಉಂಟಾಗುವ ಟ್ರಾಫಿಕ್ ಜಾಮ್ನಿಂದ ಮಕ್ಕಳಿಗೆ ತೊಂದರೆ ಯುಂಟಾಗಿದೆ. ಜತೆಗೆ ಪುಟ್ಪಾತ್ ಗಳನ್ನು ಕೆಲವೊಂದು ಅಂಗಡಿ ವ್ಯಾಪಾರ ಸ್ಥರು ಆಕ್ರಮಿಸಿಕೊಂಡು ತರಕಾರಿ ಬುಟ್ಟಿ ಗಳನ್ನು ಇಟ್ಟಿರುವುದರಿಂದ ಶಾಲೆ ಬಿಡುವ ಸಂಧರ್ಭ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯಲ್ಲೇ ನಡೆದಾಡು ವಂತಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ.
ನೋ-ಪಾರ್ಕಿಂಗ್: ಡಿಸಿ ಆದೇಶ ಬೇಕು
ಆಲಂಕಾರು ಪೇಟೆಯಲ್ಲಿ ಉಂಟಾಗು ತ್ತಿರುವ ಸಮಸ್ಯೆಗೆ ಸ್ಥಳೀಯಾಡಳಿತ ಈಗಾಗಲೇ ನೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ. ಇದಕ್ಕೆ ಕಾನೂನಿನ ತೊಡಕಿದೆ. ಗ್ರಾಮೀಣ ಪ್ರದೇಶದಲ್ಲಿಯೂ ನೋ- ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸ ಬೇಕಾದರೆ ಸ್ಥಳೀಯಾಡಳಿತವು ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಅದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅವರಿಂದ ಆದೇಶ ಪಡೆದುಕೊಳ್ಳಬೇಕು. ಅನಂತರ ನೋ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ. ಈ ರೀತಿಯ ಕಾನೂನಿನ ತೊಡಕಿರುವುದರಿಂದಲೇ ಆಲಂಕಾರು ಗ್ರಾ.ಪಂ.ನ ಆಡಳಿತ ಮಂಡಳಿ ನಿರ್ಣಯಿಸಿರುವ ನೋ-ಪಾರ್ಕಿಂಗ್ ವ್ಯವಸ್ಥೆ ಯನ್ನು ಜಾರಿಗೊಳಿಸುವಲ್ಲಿ ವಿಳಂಬ ವಾಗಿದೆ. ಈ ಬಗ್ಗೆ ಗ್ರಾ.ಪಂ. ತುರ್ತು ಸಾಮಾನ್ಯ ಸಭೆ ನಡೆಸಿದ್ದು, ಜಿಲ್ಲಾಧಿಕಾರಿ ಗಳಿಗೆ ನಿರ್ಣಯದ ಪ್ರತಿಯನ್ನು ಕಳುಹಿಸಿ ಕೊಟ್ಟಿದೆ. ಕೆಲವೇ ದಿನಗಳಲ್ಲಿ ಜಿಲ್ಲಾಧಿ ಕಾರಿಗಳಿಂದ ಪರವಾನಿಗೆ ಆದೇಶ ಬರುವ ನಿರೀಕ್ಷೆಯಲ್ಲಿದೆ.
ಮುಳುವಾಗುತ್ತಿದೆ ಅಶಿಸ್ತಿನ ಪಾರ್ಕಿಂಗ್
ಅಂಗಡಿ ಮುಂಗಟ್ಟುಗಳು ಸಹಿತ ಬಸ್ ನಿಲ್ದಾಣದ ಸುತ್ತಮುತ್ತ ಎಲ್ಲೆಂದರಲ್ಲಿ ವಾಹನ ಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿರುವುದೇ ಟ್ರಾಫಿಕ್ ಜಾಮ್ಗೆ ಮೂಲ ಕಾರಣವಾಗಿದೆ.
ಮುಖ್ಯವಾಗಿ ಅಂಗಡಿ ಮಾಲಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ತಮ್ಮ ವಾಹನಗಳನ್ನು ಅಂಗಡಿ ಮುಂಭಾಗದಲ್ಲೇ ಬೆಳಗ್ಗೆಯಿಂದ ರಾತ್ರಿಯವರೆಗೆ ಪಾರ್ಕಿಂಗ್ ಮಾಡುವುದನ್ನು ನಿಲ್ಲಿಸಿ ಅನತಿ ದೂರದಲ್ಲಿ ಪಾರ್ಕಿಂಗ್ಗೆ ಅವಕಾಶವಿರುವ ಜಾಗದಲ್ಲಿ ನಿಲುಗಡೆ ಮಾಡಬೇಕು. ಈ ಮೂಲಕ ಗ್ರಾಹಕರಿಗೆ ತಮ್ಮ ಅಂಗಡಿ ಮುಂಭಾಗದಲ್ಲಿ ಪಾರ್ಕಿಂಗ್ಗೆ ಅವಕಾಶ ಮಾಡಿಕೊಟ್ಟು ವಾಹನ ದಟ್ಟನೆಯನ್ನು ನಿಯಂತ್ರಿಸಲು ಸಹಕರಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಬಾರಿಕೇಡ್ ಅಳವಡಿಕೆಗೆ ಚಿಂತನೆ
ಆಲಂಕಾರು ಶಾಂತಿಮೊಗರು ರಸ್ತೆ ಬದಿಯಲ್ಲಿ ಎರಡು ವಿದ್ಯಾ ಸಂಸ್ಥೆಗಳಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬಾರಿಕೇಡ್ಗಳನ್ನು ಅಳವಡಿಸಲು ತಯಾರಿ ನಡೆಸಿಕೊಂಡಿದೆ. ಗ್ರಾ.ಪಂ.ನಿಂದ ಹಸಿರು ನಿಶಾನೆ ಸಿಕ್ಕಿದ ತತ್ಕ್ಷಣ ಅಳವಡಿಸಲಾಗುತ್ತದೆ. ಆಲಂಕಾರು ಹಿಂದೂ ಜಾಗರಣ ವೇದಿಕೆಯು ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಗೆ ಎರಡು ಬಾರಿಕೇಡ್ಗಳನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ.
ಪೇಟೆಯಲ್ಲಿ ಒನ್ ವೇ
ಟ್ರಾಫಿಕ್ ಸಮಸ್ಯೆ ಆಲಂಕಾರಿನಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿವೆ. ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆ ಈ ಸಮಸ್ಯೆ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಸಾಕಷ್ಟು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಲಂಕಾರು ಪೇಟೆಯಲ್ಲಿ ಹಾದು ಹೋಗುವ ರಸ್ತೆಯನ್ನು ಒನ್ ವೇ (ಏಕಮುಖ ಸಂಚಾರ) ಮಾಡಲಾಗುವುದು. ಘನ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಘನ ವಾಹನಗಳಿಗೆ ಸಿ.ಎ. ಬ್ಯಾಂಕ್ನ ಬಳಿಯಿಂದ ಗ್ರಾ.ಪಂ. ಎದುರಿನಲ್ಲಿ ಹಾದು ಹೋಗುವ ರಸ್ತೆಯಲ್ಲಿ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು.
-ಸದಾನಂದ ಆಚಾರ್ಯ,
ಗ್ರಾ.ಪಂ. ಉಪಾಧ್ಯಕ್ಷರು
ಸದಾನಂದ ಆಲಂಕಾರು