ಆಳ್ವಾಸ್ ವಿರಾಸತ್: ಸಾಂಸ್ಕೃತಿಕ ಮೆರವಣಿಗೆ
Team Udayavani, Jan 13, 2018, 9:29 AM IST
ಮೂಡಬಿದಿರೆ: ಶುಕ್ರವಾರ ಸಂಜೆ 5.15ರ ಹೊತ್ತು. ವಿದ್ಯಾಗಿರಿಯ ಸನಿಹ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದಲ್ಲಿ ಆಳ್ವಾಸ್ ವಿರಾಸತ್- 2018ರ 24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಸಂಭ್ರಮಕ್ಕೆ ಮುನ್ನುಡಿಯಾಗಿ ಕದನಿಗಳು ಮೊಳಗಿದವು, ವೈಭವದ ಸಾಂಸ್ಕೃತಿಕ ಮೆರವಣಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಎದುರಿನ 50 ಸಾವಿರ ಆಸನಗಳ ಗ್ಯಾಲರಿಯ ಮೇಲ್ಗಡೆಯಿಂದ ಹೊರಟಿತು.
ರಂಗೇರಿದ ಮೆರವಣಿಗೆ
ಯಕ್ಷಗಾನದ ಪೂತನಿ ಬೆಂಕಿಯುಗುಳುತ್ತ, ಶಂಖ, ಜಾಗಟೆಯ ಶಂಖದಾಸರ ತಂಡಗಳು, ಕೊಂಬುಗಳು, ಚೆಂಡೆ ಮೇಳದವರು, ಭಾರೀ ಗಾತ್ರದ ಚಿಂಪಾಂಜಿಯೊಂದಿಗೆ ಶೃಂಗಾರಿ ಮೇಳದೊಂದಿಗೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ರಂಗು ತುಂಬಿದವು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಉತ್ಸವ ಉದ್ಘಾಟಕರಾದ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಕವಿತಾ ಆಚಾರ್ಯ, ಸಭಾಧ್ಯಕ್ಷರಾದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಂಸದ ನಳಿನ್ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಶಾಸಕ ಕೆ. ಅಭಯಚಂದ್ರ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಐಟಿ ಪ್ರ. ಆಯುಕ್ತ ನರೋತ್ತಮ್ ಮಿಶ್ರಾ, ಯೇನೆಪೊಯಾ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ಲಾ ಕುಂಞಿ, ಕರ್ಣಾಟಕ ಬ್ಯಾಂಕ್ ಎಂ.ಡಿ., ಸಿಇಒ ಮಹಾಬಲೇಶ್ವರ ಎಂ.ಎಸ್. ಕೆನರಾ ಬ್ಯಾಂಕ್ನ ಎಂ.ಡಿ. ರಾಕೇಶ್ ಶರ್ಮ, ರಾ.ಗಾ. ವಿ.ವಿ. ಕುಲಪತಿ ಡಾ| ಎಂ. ಕೆ. ರಮೇಶ್, ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಸುರೇಶ್ ಭಂಡಾರಿ ಕಡಂದಲೆ, ಹರೀಶ್ ಶೆಟ್ಟಿ ಐಕಳ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಪ್ರಸನ್ನ ಶೆಟ್ಟಿ, ಎಚ್. ಎಸ್. ಶೆಟ್ಟಿ ಬರಮಾಡಿಕೊಂಡರು.