ದೇವಾಂಗ ಸಮಾಜದ ವಾರ್ಷಿಕೋತ್ಸವ
Team Udayavani, May 26, 2018, 12:15 PM IST
ಮಹಾನಗರ: ದೇವಾಂಗ ಸಮಾಜದ 36ನೇ ವಾರ್ಷಿಕೋತ್ಸವ, ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕುಕ್ಕಾಡಿ ಕ್ಷೇತ್ರ ಅಶೋಕ ನಗರದ ದೇವಾಂಗ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ದೇವಾಂಗ ಸಮಾಜದ ಅಧ್ಯಕ್ಷರಾದ ರಾಮು ಮಾಯಿಪ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಮೊದಲನೇ ಹಂತದ ಮಹಾಸಭೆ ನಡೆಯಿತು. ಕೋಶಾಧಿಕಾರಿ ಪ್ರಜ್ವಲ್ ಪಡೀಲ್ ಲೆಕ್ಕಪತ್ರ ಮಂಡಿಸಿದರು. ಸದಸ್ಯರಿಂದ ಸಲಹೆ ಸೂಚನೆಯ ಬಳಿಕ ಸಭೆ ಮುಕ್ತಾಯಗೊಂಡಿತು. ಎರಡನೇ ಹಂತವಾಗಿ ವಾರ್ಷಿಕೋತ್ಸವ ನಡೆಯಿತು. ನಿವೃತ್ತ ರೈಲ್ವೇ ಅಧಿಕಾರಿ ಎಂ. ಸಂಜೀವ ಶೆಟ್ಟಿ ದೀಪ ಪ್ರಜ್ವಲನೆ ಮಾಡಿದರು.
ಅಧ್ಯಕ್ಷತೆಯನ್ನು ಕುಕ್ಕಾಡಿ ಕ್ಷೇತ್ರದ ಗೌರವಾಧ್ಯಕ್ಷ ಎಂ. ಸಂಜೀವ ಶೆಟ್ಟಿ, ಮುಖ್ಯ ಅತಿಥಿಗಳಾಗಿ ವಕೀಲ ಅನಿಲ್ ಕುಮಾರ್, ಚೀರುಂಬಾ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ರವೀಂದ್ರ, ದಕ್ಷಿಣ ವಲಯ ದೇವಾಂಗ ಸಂಘದ ಅಧ್ಯಕ್ಷರಾದ ಆರ್. ವೆಂಕಟೇಶ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ದೇವಾಂಗ ಸಮಾಜದ ಗೌರವಾಧ್ಯಕ್ಷರಾದ ರಾಮಚಂದ್ರ ಕೆ. ತೊಕ್ಕೊಟ್ಟು ಸ್ವಾಗತಿಸಿದರು.
ಗೌರವ ಕಾರ್ಯದರ್ಶಿ ಕ್ಷಿತಿ ಮಮ್ಲೂರು ಅವರು ಶೈಕ್ಷಣಿಕ, ಪ್ರತಿಭಾ ಪುರಸ್ಕಾರ, ಕಿರಣ ಯೋಜನೆಗಳ ವಿವರಣೆ ನೀಡಿದರು. ಅಕ್ಷಯ ಅಕ್ಕಿ ಯೋಜನೆಯ ಪ್ರಾಯೋಜಕರಿಗೆ, ಕ್ಷೇತ್ರದಲ್ಲಿ ನಡೆಯುವ ಯಕ್ಷಗಾನ ತಾಳಮದ್ದಳೆ ನಿರ್ವಾಹಕರಿಗೆ ಹಾಗೂ ಆಮಂತ್ರಣ ವಿತರಣ ಸದಸ್ಯರಿಗೆ ಗೌರವಾರ್ಪಣೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಶ್ರೀಧರ ಪಣಂಬೂರು ಮಾಹಿತಿ ನೀಡಿದರು. ಇದೇ ವೇಳೆ ಮಕ್ಕಳಿಗೆ ಉಚಿತ ಶಾಲಾ ಸಮವಸ್ತ್ರ ವಿತರಣೆ ನಡೆಯಿತು. ಉಪಾಧ್ಯಕ್ಷ ದೇವದಾಸ ಚಿಲಿಂಬಿ ಮಾಹಿತಿ ನೀಡಿದರು. ಬಹುಮಾನದ ಪಟ್ಟಿಯನ್ನು ನಿಕಟಪೂರ್ವ ಕಾರ್ಯದರ್ಶಿ ದಯಾನಂದ ಆಕಾಶಭವನ ವಾಚಿಸಿದರು. ಸಮಿತಿಯ ಉಪಾಧ್ಯಕ್ಷ ಮನಮೋಹನ ಕಾಟಿಪಳ್ಳ ವಂದಿಸಿದರು. ಕಾರ್ಯದರ್ಶಿ ಬಿ. ದಾಮೋದರ ಚೆಟ್ಟಿ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.