ಕರಾವಳಿಯಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ
ಅಕಾಲಿಕ ಮಳೆಯಿಂದ ಅಡಿಕೆ, ಕಾಳುಮೆಣಸು ಬೆಳೆಗಾರರಲ್ಲಿ ಆತಂಕ
Team Udayavani, Dec 2, 2019, 5:54 AM IST
ಮಂಗಳೂರು/ ಉಡುಪಿ/ಕಾಸರಗೋಡು/ಮಡಿಕೇರಿ:ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಅನಿರೀಕ್ಷಿತ ಉತ್ತಮ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಯಿತು.
ಮಂಗಳೂರಿನಲ್ಲಿ ಸಂಜೆ ವೇಳೆಗೆ ನಿರಂತರ ಮಳೆ ಸುರಿಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಉತ್ಸವದ ಸಂದರ್ಭ ಮಳೆಯಿಂದಾಗಿ ಭಕ್ತರಿಗೆ ಸ್ವಲ್ಪ ತೊಂದರೆಯಾಯಿತು. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೂ ಸಮಸ್ಯೆಯಾಯಿತು.
ಬೆಳ್ತಂಗಡಿ ನಗರದಲ್ಲಿ ತುಂತುರು ಮಳೆಯಾದರೆ, ಗ್ರಾಮೀಣ ಭಾಗಗಳಲ್ಲಿ ಉತ್ತಮವಾಗಿ ಸುರಿದಿದೆ. ಕಟೀಲು, ಕಿನ್ನಿಗೋಳಿಯಲ್ಲಿ ಉತ್ತಮ ಮಳೆಯಾಗಿದೆ. ಮೂಲ್ಕಿ, ವೇಣೂರಿನಲ್ಲಿಯೂ ಮಳೆ ಬಂದಿದೆ. ವಿಟ್ಲ, ಬಂಟ್ವಾಳ, ಸುರತ್ಕಲ್ನಲ್ಲಿ ಸಾಧಾರಣ ಮಳೆಯಾಗಿದೆ. ಸುಳ್ಯ ತಾಲೂಕಿನ ಕೆಲವೆಡೆ ಗುಡುಗು ಸಹಿತ ವರ್ಷಧಾರೆಯಾಗಿದೆ. ಹಳೆಯಂಗಡಿ, ಕಡಬ, ಪುತ್ತೂರಿನಲ್ಲಿ ಹನಿ ಮಳೆಯಾಗಿದೆ.ಉಡುಪಿ ಜಿಲ್ಲೆಯ ಕಾರ್ಕಳ ಪರಿಸರದಲ್ಲಿ ಉತ್ತಮ ಮಳೆಯಾದರೆ ಉಡುಪಿ, ಕುಂದಾಪುರ, ತೆಕ್ಕಟ್ಟೆ, ಕೋಟ, ಕೋಟೇಶ್ವರ ಮೊದಲಾದೆಡೆ ಸಾಧಾರಣ ಮಳೆಯಾಗಿದೆ.
ಕಾಸರಗೋಡಿನಾದ್ಯಂತ ಬಿರುಸಿನ ಮಳೆ
ಕಾಸರಗೋಡು: ರವಿವಾರ ಅಪರಾಹ್ನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಅಪರಾಹ್ನ 2ರ ಆಸುಪಾಸು ಆರಂಭಗೊಂಡ ಮಳೆ ಮುಸ್ಸಂಜೆಯ ವರೆಗೂ ಸುರಿಯಿತು. ಬಿರುಸಿನ ಮಳೆಯಿಂದಾಗಿ ಜನರು ಕಂಗಾಲಾದರು. ಹಲವೆಡೆ ನೀರು ಹರಿಯಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾಯಿತು.
ಕೆಸರು ರಸ್ತೆ: ಸಂಚಾರ ಸ್ಥಗಿತ
ಉಳ್ಳಾಲ: ಮುಡಿಪುವಿನಿಂದ ಇರಾ ಸಂಪರ್ಕಿಸುವ ಮೂಳೂರು ಕೈಗಾರಿಕಾ ವಲಯ ಪ್ರದೇಶಕ್ಕೆ ಸಂಪರ್ಕಿಸುವ ಕಾಮಗಾರಿ ಪ್ರಗತಿ ಯಲ್ಲಿರುವ ರಸ್ತೆಯಲ್ಲಿ ಕೆಸರುಮಣ್ಣು ತುಂಬಿದ ಕಾರಣ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಯಿತು.
ಮುಡಿಪು ಇರಾ ಮೂಲಕ ಪಣೋಲಿಬೈಲ್ ಮೆಲ್ಕಾರ್ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಮಂದಗತಿಯ ಕಾಮಗಾರಿಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಕೆಐಡಿಬಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರು.
ತೋಟದ ಬೆಳೆಗಳಿಗೆ ಹಾನಿ
ಕಾಸರಗೋಡು, ಕಾಂಞಂಗಾಡ್, ಬೇಕಲ, ಪಳ್ಳಿಕೆರೆ, ಬದಿಯಡ್ಕ, ನೀರ್ಚಾಲು, ಮುಳ್ಳೇರಿಯ, ಅಡೂರು, ಕುಂಬಳೆ, ಉಪ್ಪಳ ಮೊದಲಾದೆಡೆ ಭಾರೀ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಹಲವರ ಅಂಗಳದಲ್ಲಿ ಒಣಗಲು ಹಾಕಿದ್ದ ಮೊದಲ ಕೊಯ್ಲಿನ ಅಪಾರ ಪ್ರಮಾಣದ ಅಡಿಕೆ ಫಸಲು ಒದ್ದೆಯಾಗಿದೆ. ಇದು ಕೃಷಿಕರಿಗೆ ಭಾರೀ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಿದ್ದಾರೆ. ಹವಾಮಾನ ಇಲಾಖೆ ಮಂಗಳವಾರದ ವೇಳೆಗೆ ಮಳೆಯ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿತ್ತು. ಕೇರಳ ರಾಜ್ಯ ಶಾಲಾ ಕಲೋತ್ಸವ ನಡೆಯುವ ಕಾಂಞಂಗಾಡ್ ಪ್ರದೇಶದಲ್ಲಿ ಶಾಲಾ ಕಲೋತ್ಸವದ ಸ್ಪರ್ಧೆ ಮುಗಿದ ಬಳಿಕ ಮಳೆ ಸುರಿಯಲಾರಂಭಿಸಿತು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇಗುಲದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತಿದ್ದು ಭಾರೀ ಜನಸಂದಣಿ ಇತ್ತು. ಅಪರಾಹ್ನ ಆರಂಭವಾದ ಮಳೆಯಿಂದಾಗಿ ಜನರಿಗೆ ಜನರು ಮನೆಗೆ ತೆರಳಲು ತೊಂದರೆಯಾಯಿತು.
ಕೊಡಗಿನಲ್ಲಿ ಉತ್ತಮ ಮಳೆ
ಮಡಿಕೇರಿ: ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯ ಮೇಲೂ ಆಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರವಿವಾರ ಅಪರಾಹ್ನದಿಂದ ಮಳೆಯಾಗುತ್ತಿದೆ.
ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದರೆ, ದಕ್ಷಿಣ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪ ಮತ್ತಿತರ ಪ್ರದೇಶಗಳಲ್ಲಿ ಮಧ್ಯಾಹ್ನ ತುಂತುರು ಮಳೆಯಾಗತೊಡಗಿತ್ತು. ಸಂಜೆ ವೇಳೆಗೆ ತೀವ್ರತೆ ಪಡೆದುಕೊಂಡಿತು. ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ.
ಸುಂಟಿಕೊಪ್ಪದಲ್ಲಿ ರವಿವಾರ ವಾರದ ಸಂತೆಗಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಸಂತೆಯ ವ್ಯಾಪಾರಿಗಳು ಸಂಜೆ ಸುರಿದ ಭಾರೀ ಮಳೆಯಲ್ಲಿ ಪರದಾಡುವಂತಾಯಿತು.
ಕಾಫಿ ಫಸಲಿಗೆ ಮಾರಕ
ಜಿಲ್ಲೆಯ ಕಾಫಿ ತೋಟಗಳಲ್ಲಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರು ಕೊಯ್ದು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಬಿಸಿಲಿನ ಅಭಾವದಿಂದ ಒಣಗಿಸುವುದು ಹೇಗೆಂಬ ಬೆಳೆಗಾರರ ಚಿಂತೆಯನ್ನು ಇಂದು ಸುರಿದ ಮಳೆ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಭತ್ತದ ತೆನೆ ಬಿಡುವ ಕಾಲದಲ್ಲಿ ಸುರಿದ ಮಳೆಯಿಂದ ಭತ್ತ ಜಳ್ಳಾಗುವ ಭೀತಿಯೂ ಎದುರಾಗಿದೆ. ಪ್ರಸಕ್ತ ಸಾಲಿನ ಮಹಾಮಳೆಯಿಂದಾಗಿ ಈಗಾಗಲೇ ಕಾಫಿ, ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳು ಕೈಕೊಟ್ಟಿದ್ದು, ಅದೃಷ್ಟವಶಾತ್ ಉಳಿದಿದ್ದ ಅಲ್ಪಸ್ವಲ್ಪ ಬೆಳೆಯೂ ಅಕಾಲಿಕ ಮಳೆಯಿಂದಾಗಿ ಕೈತಪ್ಪುವುದರೊಂದಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಭೀತಿ ಎದುರಾಗಿದೆ.
ಅರಬೀ ಸಮುದ್ರದಲ್ಲಿ
ಉಂಟಾಗಿರುವ ವಾಯುಭಾರ ಕುಸಿತ ಬಲಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ ಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಕೂಡಿದ ಮಳೆ ಮುಂದುವರಿಯುವ ಸಾಧ್ಯತೆ ಇದೆ.
– ಸುನಿಲ್ ಗವಾಸ್ಕರ್,
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ