ಮನೆಗೆ ಬಂದ ಬೇರೊಂದು ಯುವತಿಯ ದಿಬ್ಬಣ!
ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ಆತ್ಮಹತ್ಯೆ ಪ್ರಕರಣ
Team Udayavani, Nov 23, 2021, 7:02 AM IST
ಸಾಂದರ್ಭಿಕ ಚಿತ್ರ.
ಪುತ್ತೂರು: ಕೆಲವೇ ದಿನಗಳಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದ್ದ ನೆಟ್ಟಣಿಗೆ ಮುಟ್ನೂರು ಗ್ರಾಮದ ಮುಂಡ್ಯಕರೆಂಟಿಯಡ್ಕದ ಯುವಕನ ಆತ್ಮಹತ್ಯೆ ಪ್ರಕರಣ ಕುತೂಹಲ ತಿರುವು ಪಡೆದುಕೊಂಡಿದೆ.
ಯುವಕನನ್ನು ಮದುವೆಯಾಗಲು ಬೇರೊಂದು ಹುಡುಗಿ ಮನೆಯವರು ದಿಢೀರ್ ದಿಬ್ಬಣ ಸಮೇತರಾಗಿ ಬಂದ ಸಂದರ್ಭ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂದಿದ್ದು, ದಿಬ್ಬಣ ಹಿಂದಕ್ಕೆ ಹೋಗಿದೆ.
ಹೊಸ ಮನೆಯಲ್ಲಿ ಆತ್ಮಹತ್ಯೆ
ರವಿರಾಜ್ ಅವರನ್ನು ವಿವಾಹವಾ ಗಲೆಂದು ರವಿವಾರ ಕುಂದಾಪುರದಿಂದ ಬೇರೊಂದು ಹುಡುಗಿಯ ದಿಬ್ಬಣ ದಿಢೀರ್ ಆಗಿ ಆಗಮಿಸಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ಕುಟುಂಬಸ್ಥರು ರವಿರಾಜ್ ಅವರಿಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭ ಅವರು ನೆಟ್ಟಣಿಗೆ ಮುಟ್ನೂರು ಗ್ರಾಮದ ಮುಂಡ್ಯಕರೆಂಟಿಯಡ್ಕದಲ್ಲಿ ತನ್ನ ಸಹೋದರ ನಿರ್ಮಿಸಿದ್ದ ಇನ್ನೂ ಗ್ರಹಪ್ರವೇಶ ನಡೆಯದ ನೂತನ ಮನೆಯ ಬಚ್ಚಲು ಕೋಣೆಯಲ್ಲಿ ವೆಂಟಿಲೇಟರ್ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು
ಹೆದರಿ ಜೀವವನ್ನೇ ಕಳೆದುಕೊಂಡರೇ?
ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯು ತ್ತಿದ್ದಂತೆಯೇ ಕುಂದಾಪುರದಿಂದ ಬಂದಿದ್ದ ಮದುವೆ ದಿಬ್ಬಣ ಹಿಂದಿರುಗಿ ಹೋಗಿದೆ. ರವಿರಾಜ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ ಕುಂದಾಪುರದ ಹುಡುಗಿಯೊಂದಿಗೆ ಪ್ರೇಮಾಂಕುರವಾಗಿರುವ ಸಾಧ್ಯತೆ ಇದೆ. ಈ ವಿಚಾರ ತಿಳಿದೋ ಅಥವಾ ತಿಳಿಯದೆಯೋ ಯುವಕನ ಮನೆಯವರು ಬೇರೆ ಹುಡುಗಿಯ ಜತೆಗೆ ವಿವಾಹ ನಿಶ್ಚಿತಾರ್ಥಕ್ಕೆ ಮುಂದಾಗಿರಬಹುದು. ಈ ವಿಚಾರ ಕುಂದಾಪುರದ ಯುವತಿಯ ಕಡೆಯವರಿಗೆ ತಿಳಿದು ಯುವತಿ ರವಿರಾಜ್ ಅವರನ್ನೇ ಮದುವೆ ಯಾಗುವುದೆಂದು ನಿರ್ಧರಿಸಿ ಕುಂದಾಪುರದಿಂದ ದಿಬ್ಬಣ ಸಮೇತ ಬಂದಂತಿದೆ. ಇದರಿಂದ ದಿಕ್ಕು ತೋಚದಂತಾದ ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
“ಮಳೆ ಬರುತ್ತಿದೆ, ಮನೆಗೆ ನಾಳೆ ಬರುತ್ತೇನೆ’
ಸುಳ್ಯಪದವು ಶಬರಿ ನಗರ ನಿವಾಸಿ ರವಿರಾಜ್ ಪೂಜಾರಿ (31) ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ರವಿರಾಜ್ ಅವರಿಗೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದು, ವಿಟ್ಲ ಸಮೀಪದ ಹುಡುಗಿಯನ್ನು ನೋಡಿದ್ದರು. ಮಾತ್ರವಲ್ಲದೆ ನ. 25ರಂದು ವಿವಾಹ ನಿಶ್ಚಿತಾರ್ಥಕ್ಕೆ ದಿನ ನಿಗದಿಪಡಿಸಿಕೊಂಡಿದ್ದರು. ನಿಶ್ಚಿತಾರ್ಥಕ್ಕಾಗಿ ರವಿರಾಜ್ ಬೆಂಗಳೂರಿನಿಂದ ನ. 19ರಂದು ಊರಿಗೆ ಆಗಮಿಸಿದ್ದರು. ನ. 20ರಂದು ಮನೆಯವರಿಗೆ “ಪುತ್ತೂರಿನಲ್ಲಿರುವ ಸ್ನೇಹಿತನ ಮನೆಗೆ ಹೋಗಿ ನಾಳೆ ಸಂಜೆ ಬರುತ್ತೇನೆ’ ಎಂದು ಹೇಳಿ ಮನೆಯಿಂದ ತೆರಳಿದ್ದರು. ಅಂದು ರಾತ್ರಿ ತನ್ನ ಮನೆಗೆ ಮೊಬೈಲ್ ಕರೆ ಮಾಡಿ “ಮಳೆ ಬರುತ್ತಿದೆ, ಮನೆಗೆ ನಾನು ನಾಳೆ ಬರುತ್ತೇನೆ’ ಎಂದಿದ್ದರು.