ಅಪಾರ್ಟ್ಮೆಂಟ್ನ ತ್ಯಾಜ್ಯ ನೀರು ಪರಂಬೋಕು ತೋಡಿಗೆ
Team Udayavani, May 25, 2018, 10:39 AM IST
ಮೂಡಬಿದಿರೆ : ಅಪಾರ್ಟ್ ಮೆಂಟಿನಿಂದ ತ್ಯಾಜ್ಯ ನೀರನ್ನು ನೇರವಾಗಿ ಪರಂಬೋಕು ತೋಡಿಗೆ ಬಿಡುತ್ತಿರುವ
ಹಿನ್ನೆಲೆಯಲ್ಲಿ ಮೂಡಬಿದಿರೆ ಪುರಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಾರ್ಟ್ಮೆಂಟಿನ
ಪೈಪ್ಗ್ಳನ್ನು ಕಟ್ ಮಾಡಿದ ಘಟನೆ ಬುಧವಾರ ಆಲಂಗಾರಿನಲ್ಲಿ ನಡೆದಿದೆ.
ಆಲಂಗಾರಿನ ಪದ್ಮರಾಜ ನಗರದಲ್ಲಿರುವ ಶ್ರೀದೇವಿಕೃಪಾ ಅಪಾರ್ಟ್ಮೆಂಟಿನಿಂದ ಕೆಲವು ಸಮಯಗಳಿಂದ ತ್ಯಾಜ್ಯ ನೀರು ಪರಂಬೋಕು ತೋಡನ್ನು ಸೇರುತ್ತಿದ್ದು ಈ ಬಗ್ಗೆ ಹೆಲೆನ್ ಹೆಲೆನ್ ಕಾಡ್ರಸ್ ಎಂಬವರು ಕೆಲವು ದಿನಗಳ ಹಿಂದೆ ಮೂಡಬಿದಿರೆ ಪುರಸಭೆಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪುರಸಭಾಧಿಕಾರಿಗಳು ಅಪಾರ್ಟ್ಮೆಂಟಿನ ಮೂಲ ಮಾಲಕರಿಗೆ 2 ಬಾರಿ ನೋಟಿಸ್ ಜಾರಿಗೊಳಿಸಿದ್ದರು.
ಆದರೆ ಪುರಸಭೆಯ ನೋಟಿಸ್ಗೆ ಸರಿಯಾಗಿ ಸ್ಪಂದಿಸದೆ ಮತ್ತೆ ತ್ಯಾಜ್ಯ ನೀರನ್ನು ತೋಡಿಗೆ ಬಿಡುತ್ತಿರುವುದರಿಂದ ಪೊಲೀಸರ ಸಮ್ಮುಖದಲ್ಲಿ ಪೈಪ್ಗಳನ್ನು ಕಟ್ಮಾಡಿ ಸಿಮೆಂಟಿನಿಂದ ಮುಚ್ಚಲಾಗಿದೆ. ಈ ಸಂದರ್ಭ ಪುರಸಭಾ
ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಪುರಸಭಾ ಕಂದಾಯ ಅಧಿಕಾರಿ ಧನಂಜಯ, ಪರಿಸರ ಅಭಿಯಂತ ಶಿಲ್ಪಾ, ಸಿಬಂದಿ ಸುಧೀಶ್ ಹೆಗ್ಡೆ ಮತ್ತಿತರರಿದ್ದರು.