ಅಡಿಕೆ ಬೆಳೆಗಾರರಿಗೆಜಿಎಸ್ಟಿ ಆತಂಕ ಬೇಡ: ಕ್ಯಾಂಪ್ಕೋ
Team Udayavani, Jul 7, 2017, 3:40 AM IST
ಮಂಗಳೂರು: ನೂತನ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಪದ್ಧತಿಯು ಜು. 1ರಿಂದ ಜಾರಿಗೊಂಡಿದ್ದು, ಕ್ಯಾಂಪ್ಕೋ ಅದನ್ನು ಮುಕ್ತವಾಗಿ ಸ್ವಾಗತಿಸಿದೆ. ಈ ನೂತನ ಪದ್ಧತಿಯ ಜಾರಿಗೆ ಬೇಕಾದ ಎಲ್ಲ ತಾಂತ್ರಿಕ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದ್ದು, ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಕೃಷಿಕರಿಂದ ಅಡಿಕೆಯ ನೇರ ಖರೀದಿಗೆ ವ್ಯವಸ್ಥೆಯನ್ನು ಜು. 3ರಿಂದಲೇ ಅನುಷ್ಠಾನಗೊಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಎಸ್ಟಿ ಅನುಷ್ಠಾನದ ನೂತನ ವ್ಯವಸ್ಥೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರದ ಕೆಲವು ಏಜೆಂಟ್ ಸೊಸೈಟಿಗಳಿಂದಾಗಿ ಅಡಿಕೆ ವಿಕ್ರಯಿಸಲು ಕೃಷಿಕರಿಗೆ ಅನಾನುಕೂಲವಾಗಿರುವುದಾಗಿ ವರದಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಆಯಾ ಸಹಕಾರಿ ಸಂಸ್ಥೆಗಳು ಖರೀದಿಗೆ ಬೇಕಾದ ತಾಂತ್ರಿಕ ವ್ಯವಸ್ಥೆಗಳನ್ನು ಸಿದ್ಧಗೊಳಿಸುವವರೆಗೆ ಕೃಷಿಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ತಮ್ಮ ಸನಿಹದ ಕ್ಯಾಂಪ್ಕೋ ಶಾಖೆಗಳಲ್ಲಿ ವಿಕ್ರಯಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ಕೃಷಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಆತಂಕಗೊಳ್ಳಬಾರದೆಂದು ಕಾಂಪ್ಕೋ ಪ್ರಕಟನೆ ತಿಳಿಸಿದೆ.