ಸೇನೆಗೆ ಸೇರಲು ಜಿಲ್ಲಾಧಿಕಾರಿ ಕರೆ
ಸೇನಾ ನೇಮಕಾತಿಗೆ ದ.ಕ. ಜಿಲ್ಲೆಯಿಂದ ಕಡಿಮೆ ನೋಂದಣಿ!
Team Udayavani, Mar 4, 2020, 12:27 AM IST
ಮಂಗಳೂರು: ಉಡುಪಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎ. 4ರಿಂದ 14ರ ವರೆಗೆ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಗೆ ಈವರೆಗೆ ಒಟ್ಟು 18,000 ಮಂದಿ ನೋಂದಣಿ ಮಾಡಿಕೊಂಡಿದ್ದು, ದಕ್ಷಿಣ ಕನ್ನಡದಿಂದ ಕೇವಲ 300 ಮಂದಿ ಮಾತ್ರ ನೋಂದಾಯಿಸಿದ್ದಾರೆ. ಹೀಗಾಗಿ ಸೇನೆಗೆ ಸೇರಲು ಆಸಕ್ತಿ ಇರುವವರು ನೋಂದಣಿ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇನಾ ನೇಮಕಾತಿ ರ್ಯಾಲಿಗೆ ಫೆ. 16ರಿಂದ ನೋಂದಣಿ ನಡೆಯುತ್ತಿದೆ. ದ.ಕ. ಜಿಲ್ಲೆ ಸೇರಿದಂತೆ 11 ಜಿಲ್ಲೆಗಳ ಯುವಕರನ್ನು ಈ ರ್ಯಾಲಿಯಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ. ಆದರೆ ದ.ಕ., ಉಡುಪಿ, ಶಿವಮೊಗ್ಗ ಜಿಲ್ಲೆಗಳಿಂದ ಅತಿ ಕಡಿಮೆ ನೋಂದಣಿಯಾಗಿದ್ದು, ಹೆಚ್ಚಿನ ಸಂಖ್ಯೆಯ ಯುವಕರು ಸೇನೆ ಸೇರಲು ಮುಂದಾಗಬೇಕು ಎಂದರು. ದ.ಕ. ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರುವಂತಾಗಲು ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸುವ ನಿಟ್ಟಿನಲ್ಲಿ ಸೇನೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಿವಿಧ ಹುದ್ದೆಗಳು
ಉಡುಪಿಯ ಸೇನಾ ನೇಮಕಾತಿ ರ್ಯಾಲಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಲು ಮಾ. 20ರ ವರೆಗೆ ಅವಕಾಶವಿದೆ. 17-21 ವರ್ಷದೊಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್ ಜನರಲ್ ಡ್ನೂಟಿ (ಆಲ್ ಆಮ್ಸ್ì), ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟೆಕ್ ನರ್ಸಿಂಗ್ ಅಸಿಸ್ಟೆಂಟ್/ ನರ್ಸಿಂಗ್ ಸಹಾಯಕ ಪಶುವೈದ್ಯ, ಸೋಲ್ಜರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ (ಆಲ್ ಆಮ್ಸ್ì), 10ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟ್ರೇಡ್ಸನ್ (ಆಲ್ ಆರ್ಮ್ಸ್), ಮತ್ತು 8ನೇ ತರಗತಿ ಪಾಸ್ ಆದವರಿಗೆ ಸೋಲ್ಜರ್ ಟ್ರೇಡ್ಸನ್ (ಆಲ್ ಆಮ್ಸ್) ಹುದ್ದೆಗಳು ಲಭ್ಯ ಇವೆ. www.joinindianarmy.nic.in ನಲ್ಲಿ ಹೆಸರು ನೋಂದಾಯಿಸಬಹುದು.
ಉತ್ತಮ ವೇತನ
ಸೇನೆಯ ಅಸಿಸ್ಟೆಂಟ್ ರಿಕ್ರೂಟ್ಮೆಂಟ್ ಅಧಿಕಾರಿ ಕರ್ನಲ್ ಎಫ್.ಪಿ. ದುಬಾಶ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿರುವುದರಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಯಾಕೆ ಹೋಗಬೇಕು ಎನ್ನುವ ಮನೋಭಾವನೆಯೂ ಸೇನಾ ಸೇರ್ಪಡೆ ನಿರಾಸಕ್ತಿಗೆ ಕಾರಣವಾಗಿರಬಹುದು. ಆದರೆ ಸೇನೆಯಲ್ಲಿ ಈಗ ಆಕರ್ಷಕ ವೇತನ ನೀಡಲಾಗುತ್ತಿದೆ. 10ನೇ ತರಗತಿ ವಿದ್ಯಾರ್ಹತೆ ಹೊಂದಿ ರ್ಯಾಲಿಯಲ್ಲಿ ಆಯ್ಕೆಯಾದವರಿಗೆ ತರಬೇತಿ ಅವಧಿಯಲ್ಲೇ ಮಾಸಿಕ 32,000 ರೂ. ವೇತನ ನೀಡಲಾಗುತ್ತದೆ. ಬಳಿಕ ವೇತನ ಹೆಚ್ಚಲಿದೆ ಎಂದರು.