ಕೇರಳ ಮಾದರಿ ಬೆಂಬಲ ಬೆಲೆಗೆ ಯತ್ನ
ರಬ್ಬರ್ ಬೆಳೆಗಾರರ ಸಮಾವೇಶದಲ್ಲಿ ಡಾ| ಕೆ.ಎನ್. ರಾಘವನ್
Team Udayavani, Oct 19, 2019, 4:00 AM IST
ಮಂಗಳೂರು: ಕೇರಳದಂತೆ ಕರ್ನಾಟಕದಲ್ಲಿಯೂ ರಬ್ಬರ್ ಬೆಳೆಗಾರರಿಗೆ ಕೆ.ಜಿ.ಗೆ 150 ರೂ. ಬೆಂಬಲ ಬೆಲೆ ನೀಡಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ರಬ್ಬರ್ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಕೆ.ಎನ್. ರಾಘವನ್ ಹೇಳಿದ್ದಾರೆ.
ಅಖೀಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘವು ಉಜಿರೆ, ಗುತ್ತಿಗಾರು, ಪುತ್ತೂರಿನ ರಬ್ಬರ್ ಉತ್ಪಾದಕರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳು ಹಾಗೂ ರಬ್ಬರ್ ಮಂಡಳಿ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಆರ್ಥಿಕತೆಯ ಪ್ರಭಾವದಿಂದ ನಮ್ಮ ದೇಶದಲ್ಲಿಯೂ ಪ್ರಸ್ತುತ ರಬ್ಬರ್ ಬೆಲೆ ಕುಸಿದಿದೆ. ಇದು ಸಹಜವಾಗಿದ್ದು, ಬೆಳೆಗಾರರು ಆತಂಕ ಗೊಳ್ಳುವ ಅಗತ್ಯವಿಲ್ಲ ಎಂದರು.
ರಬ್ಬರ್ ಕೊರತೆ
ರಬ್ಬರ್ನ ಬೆಲೆ ಕುಸಿದಿದೆ ಎಂಬ ಕಾರಣಕ್ಕೆ ಟ್ಯಾಪಿಂಗ್ ಮಾಡದೆ ಇರುವುದು ಸರಿಯಲ್ಲ. ವಾರಕ್ಕೊಮ್ಮೆ ಟ್ಯಾಪಿಂಗ್ನಿಂದ ಮರಕ್ಕೂ ಒಳ್ಳೆಯದು. ಕಳೆದ ವರ್ಷ ದೇಶದಲ್ಲಿ 12.10 ಲಕ್ಷ ಟನ್ ರಬ್ಬರ್ಗೆ ಬೇಡಿಕೆ ಇತ್ತು. ಆದರೆ ಸುಮಾರು 6.15 ಲಕ್ಷ ಟನ್ ಮಾತ್ರ ಪೂರೈಕೆಯಾಗಿತ್ತು. ಉತ್ಪಾದನೆ ಹೆಚ್ಚಳ, ವೆಚ್ಚ ಕಡಿತಕ್ಕೆ ಗಮನ ನೀಡಬೇಕಾಗಿದೆ ಎಂದು ಹೇಳಿದರು.
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಈ ಭಾಗದ ಬೆಳೆಗಾರರಿಗೆ ಅನುಕೂಲವಾಗ ಬೇಕೆಂಬ ಉದ್ದೇಶ ದಿಂದ ಪಡುಬಿದ್ರಿಯಲ್ಲಿ ಟಯರ್ ಕಂಪೆನಿ ಆರಂಭಗೊಳ್ಳಲಿದೆ ಎಂದರು.
ಜಂಟಿ ರಬ್ಬರ್ ಉತ್ಪಾದನ ಆಯುಕ್ತ ಸಾಬು, ರಬ್ಬರ್ ಮಂಡಳಿಯ ಡಿಡಿಪಿ ಆ್ಯಂಡ್ ಪಿಆರ್ ಎಂ.ಜಿ. ಸತೀಶ್ಚಂದ್ರನ್ ನಾಯರ್, ಉಜಿರೆ ಆರ್ಜಿಎಂಪಿಸಿ ಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಾಂಞಗಾಡ್ ರಬ್ಬರ್ನ ವ್ಯವಸ್ಥಾಪಕ ನಿರ್ದೇಶಕ ಪವಿತ್ರನ್ ನಂಬಿಯಾರ್, ರಬ್ಬರ್ ಮಂಡಳಿ ಅಭಿವೃದ್ಧಿ ಅಧಿಕಾರಿ ಎಸ್. ಬಾಲಕೃಷ್ಣ ಉಪಸ್ಥಿತರಿದ್ದರು.
“ಕೃಪಾ’ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಪ್ರಸ್ತಾವನೆಗೈದರು.ಉಪಾಧ್ಯಕ್ಷ ಸವಣೂರು ಸೀತಾರಾಮ ರೈ ಅವರು ಸ್ವಾಗತಿಸಿದರು.