ಪ್ಲಾಸ್ಟಿಕ್ ನಿರ್ಮೂಲನೆಗೆ ಬೇಬಿ ಬ್ಯಾಂಬೂ ಸ್ಟ್ರಾ
ದೇಶದಲ್ಲೇ ಮೊದಲ ಪ್ರಯೋಗ ಮರುಬಳಕೆ ಜತೆಗೆ ಪರಿಸರ ಸ್ನೇಹಿ
Team Udayavani, Oct 12, 2019, 5:54 AM IST
ಬೆಳ್ತಂಗಡಿ: ಪ್ಲಾಸ್ಟಿಕ್ ಮುಕ್ತ ದೇಶ ಕಟ್ಟುವ ಕೇಂದ್ರ ಸರಕಾರದ ಚಿಂತನೆಗೆ ಪೂರಕವಾಗಿ ಕೆಲಸ ಮಾಡಲು ಬೆಳ್ತಂಗಡಿಯ ಅಳದಂಗಡಿ ನಿವಾಸಿ ನಮೋಕಾರ್ ಜೈನ್ ಮತ್ತು ಬೆಂಗಳೂರಿನ ಕಿಟ್ಟಿರಾಜ್ ವಿಶೇಷ ದಾರಿಯೊಂದನ್ನು ಕಂಡುಕೊಂಡಿದ್ದಾರೆ.
ಮೊದಲ ಹಂತವಾಗಿ “ಬೇಬಿ ಬ್ಯಾಂಬೂ’ ತಳಿಯ ಬಿದಿರಿನ ಸ್ಟ್ರಾ ಹಾಗೂ ಬಾಟಲಿಯನ್ನು ಪರಿಚಯಿಸಲು ಹೊರಟಿದ್ದಾರೆ. ಬಿದಿರು ನಾಶದಿಂದ ಪರಿಸರಕ್ಕೆ ಹಾನಿಯಾಗಬಾರದು ಎಂಬ ಸದಾಶಯವನ್ನೂ ಹೊಂದಿದ್ದು, ಅದಕ್ಕಾಗಿಯೇ ಸ್ವತಃ ಬಿದಿರು ಬೆಳೆಯುತ್ತಿದ್ದಾರೆ.
ಬೇಬಿ ಬ್ಯಾಂಬೂ
ಈ ಯುವಕರಿಬ್ಬರೂ ಯುವ ಬ್ರಿಗೇಡ್ ಸದಸ್ಯರು. ಕೊಳ್ಳೆಗಾಲ ಸಮೀಪ ಸ್ವತ್ಛತೆ ಕಾರ್ಯದ ವೇಳೆ ಕಿಟ್ಟಿರಾಜ್ ಕಣ್ಣಿಗೆ ಬಿದಿರಿನ ಗಿಡವೊಂದು ಬಿದ್ದಿದ್ದು ಅದರಲ್ಲಿ ಸ್ಟ್ರಾ ತಯಾರಿಸುವ ಆಲೋಚನೆ ಹೊಳೆದಿತ್ತು. ತನ್ನಿಂದಾಗಿ ಪರಿಸರ ನಾಶವಾಗಬಾರದೆಂಬ ಉದ್ದೇಶದಿಂದ ಕೊಳ್ಳೆಗಾಲದ 3 ಎಕ್ರೆಯಲ್ಲಿ ಸ್ವತಃ ಈ ಬಿದಿರನ್ನು ಬೆಳೆಯುತ್ತಿದ್ದಾರೆ. 6ರಿಂದ 8 ಅಡಿ ಬೆಳೆಯುವ ಈ ತಳಿಯ ಹೆಸರು ಬೇಬಿ ಬ್ಯಾಂಬೂ. ಇದು ಅಲ್ಪ ಪ್ರಮಾಣದ ತೇವಾಂಶ ಹೀರಿ ಬದುಕಬಲ್ಲದು. ರೆಂಬೆಗಳು ಟೊಳ್ಳಾಗಿರುವುದರಿಂದ ನೈಸರ್ಗಿಕ ಸ್ಟ್ರಾ ಆಗಿ ಬಳಸಬಹುದು. ಕಾಂಡದಿಂದ ನೀರಿನ ಬಾಟಲಿಗಳನ್ನು ತಯಾರಿಸುವ ಚಿಂತನೆಯೂ ಇದೆ.
ಒಂದು ಸ್ಟ್ರಾ 20 ಬಾರಿ ಬಳಕೆ
ಸ್ಟ್ರಾವನ್ನು ಬಳಸಿದ ಬಳಿಕ ಉಪ್ಪು ಹಾಗೂ ಬಿಸಿ ನೀರಿನಲ್ಲಿ ಅದ್ದಿ ಸಂಸ್ಕರಿಸಿ 10ರಿಂದ 20 ಬಾರಿ ಉಪಯೋಗಿಸಬಹುದು. ರಾಜಸ್ಥಾನ, ಹೈದರಾಬಾದ್, ಅಸ್ಸಾಂ ಸಹಿತ ಪ್ರಮುಖ ನಗರಗಳ ಹೊಟೇಲ್
ಗಳಿಂದ ಬಿದಿರಿನ ಸ್ಟ್ರಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಜನಸಾಮಾನ್ಯರಿಗೆ ಪರಿಚಯಿಸಿ ಪ್ಲಾಸ್ಟಿಕ್ ಮುಕ್ತ ಚಿಂತನೆ ಹುಟ್ಟುಹಾಕುವುದು ಇವರ ಚಿಂತನೆ. ಮರುಬಳಕೆಯ ಸ್ಟ್ರಾ ಒಂದಕ್ಕೆ 2 ರೂಪಾಯಿ ಇದ್ದು, ಇದರ ಸಂಸ್ಕರಣೆಗೆ ಸೂಕ್ತ ಯಂತ್ರೋಪಕರಣ ಸಿದ್ಧಪಡಿಸಲಾಗುತ್ತಿದೆ.
ಬೆಳ್ತಂಗಡಿಯಲ್ಲಿ ಮಾರುಕಟ್ಟೆಗೆ
ಪ್ಲಾಸ್ಟಿಕ್ ಮುಕ್ತ ನಗರವಾಗಿಸಲು ಬೆಳ್ತಂಗಡಿ ಪಟ್ಟಣ ಪಂಚಾಯತ್ ಶ್ರಮಿಸುತ್ತಿದ್ದು, ಪೂರಕವಾಗಿ ನಮೋಕಾರ್ ಜೈನ್ ಅವರು ಬೆಳ್ತಂಗಡಿ ಬಸ್ ನಿಲ್ದಾಣ ಸಮೀಪದ ತಮ್ಮ ಸ್ಟಾಲ್ನಲ್ಲಿ ಬಿದಿರಿನ ಸ್ಟ್ರಾವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಮುಂದಿನ ದಿನಗಳಲ್ಲಿ 20 ರೂಪಾಯಿಗೆ ಬಿದಿರಿನ ಬಾಟಲಿ, ಬ್ರೆಶ್ ಸಹಿತ ಇತರ ವಸ್ತುಗಳನ್ನು ಪರಿಚಯಿಸುವ ಯೋಜನೆಯನ್ನು ಈ ಯುವಕರು ಹೊಂದಿದ್ದಾರೆ. ಈ ಯೋಜನೆಯು ಬಿದಿರು ಬೆಳೆಯುವ ಮೂಲಕ ರೈತರಿಗೆ ಉತ್ತಮ ಆದಾಯ ಮೂಲವೂ ಆಗಬಲ್ಲುದು. ಈ ಹಿಂದೆ ಬೆಳ್ತಂಗಡಿ ತಾಲೂಕಿನ ಬಳಂಜದವರಾದ ಅಶ್ವತ್ಥ್ ಹೆಗ್ಡೆ ಎನ್ವಿ ಗ್ರೀನ್ ಜೈವಿಕ ಕೈಚೀಲ ಪರಿಚಯಿಸಿ ಜನಮನ್ನಣೆಗೆ ಪಾತ್ರರಾಗಿದ್ದರು.
ಬದಲಿ ವ್ಯವಸ್ಥೆ ಹುಟ್ಟುಹಾಕದೆ ಪ್ಲಾಸ್ಟಿಕ್ ಮುಕ್ತ ದೇಶ ಎಂಬ ಕಲ್ಪನೆ ಈಡೇರಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಇದು; ಎಲ್ಲರ ಸಹಕಾರ ಅಗತ್ಯ.
– ನಮೋಕಾರ್ ಜೈನ್, ಬೆಳ್ತಂಗಡಿ
ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಳವೆಯಿಂದಲೇ ಚಿಂತನೆ ಮೂಡಬೇಕಿದೆ.
ಕೊಳ್ಳೆಗಾಲದಲ್ಲಿ ಆರಂಭವಾದ ಬಿದಿರಿನ ಸ್ಟ್ರಾ ದೇಶ ವಿದೇಶಗಳಲ್ಲಿ ಪರಿಚಯಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಕನಸು ಕಂಡಿದ್ದೇವೆ.
– ಕಿಟ್ಟಿರಾಜ್, ಬೆಂಗಳೂರು
– ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ