ಬಡಮನೆ ಗುಡ್ಡ ಕುಸಿತ ಪ್ರಕರಣ:ಮುಂದುವರಿದ ಮಣ್ಣಿನಡಿ ಸಿಲುಕಿದ ವಿದ್ಯಾರ್ಥಿ ತೆರವು ಕಾರ್ಯಾಚರಣೆ
Team Udayavani, Jan 26, 2021, 4:31 PM IST
ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತದಲ್ಲಿ ಗುಡ್ಡ ಕುಸಿತದಿಂದ ಉಜಿರೆಯ ವಿದ್ಯಾರ್ಥಿಯೋರ್ವ ಮಣ್ಣಿನಡಿ ಸಿಲುಕಿದ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ಕಾರ್ಯಾಚರಣೆ ಮುಂದುವರೆದಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ಕೃಷ್ಣಯ್ಯ ವಾಸುದೇವ ಶೆಟ್ಟಿ ಅವರ ಪುತ್ರ ಉಜಿರೆ ಎಸ್ ಡಿಎಂ ಕಾಲೇಜು ದ್ವಿತೀಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ (21) ಮಣ್ಣಿನಡಿ ಸಿಲುಕಿದ್ದು, ತೆರವಿಗೆ ಎಸ್ ಡಿಆರ್ ಎಫ್, ಪೊಲೀಸ್, ಅಗ್ನಿಶಾಮಕದಳ, ಶ್ರೀ.ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ ಸತತ ಕಾರ್ಯಾಚರಣೆಯಲ್ಲಿ ಹರಸಾಹಸ ಪಟ್ಟಿದೆ.
ಇದನ್ನೂ ಓದಿ:ದೆಹಲಿ: ಹಿಂಸಾರೂಪಕ್ಕೆ ತಿರುಗಿದ ರೈತರ ಪ್ರತಿಭಟನೆ; ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಸಾವು
ದಿಡುಪೆ ಕಜಕೆಯಿಂದ 12 ಕಿ.ಮೀ ದೂರದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ಜಲಪಾತವಾಗಿದ್ದು, ದುರ್ಗಮ ಹಾದಿಯಲ್ಲಿ ಜೆಸಿಬಿ, ಕ್ರೇನ್ ಸಾಗಲು ಸಾಧ್ಯವಾಗದಿರುವುದರಿಂದ ಸ್ಥಳೀಯರ ಸಹಾಯದಿಂದ ಮಾನವ ಶ್ರಮದಿಂದ ತೆರವುಕಾರ್ಯ ಮುಂದುವರಿದಿದೆ.
15 ಅಡಿ ಆಳದಲ್ಲಿ ಬೃಹದಾಕಾರದ ಕಲ್ಲು, ಬಂಡೆ, ಮಣ್ಣಿನಡಿ ಸನತ್ ಶೆಟ್ಟಿ ಸಿಲುಕಿದ್ದು, ಕಾರ್ಯಾಚರಣೆ ಬಲು ತ್ರಾಸದಾಯಕವಾಗಿದೆ.
ಈತನ ಜತೆಗಿದ್ದ ಸ್ನೇಹಿತರಾದ ಆದಿತ್ಯ ಹಾಗೂ ಸೌರಬ್ ಸಹಿತ ಇತರರು ಪ್ರಾಣಪಾಯದಿಂದ ಪಾರಾಗಿದ್ದು, ಸೌರಬ್ ಗೆ ಸಣ್ಣಪುಟ್ಟ ಗಾಯವಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ, ಭಯೋತ್ಪಾದಕರು : ಬಿ ಸಿ ಪಾಟೀಲ್
ಘಟನೆ ವಿವರ
ಉಜಿರೆ ನಿವಾಸಿಯಾಗಿರುವ ಸನತ್ ಶೆಟ್ಟಿ ಸಹಿತ ಮೂವರು ಕ್ರಿಕೆಟ್ ಪಂದ್ಯಾಟವಾಡಲು ಸಂಸೆಯಲ್ಲಿರುವ ತನ್ನ ಸ್ನೇಹಿತನಾದ ಆದಿತ್ಯ ಮನೆಗೆ ರವಿವಾರ ತೆರಳಿದ್ದರು. ರವಿವಾರ ಅಲ್ಲೇ ತಂಗಿದ್ದು, ಸೋಮವಾರ ಮಧ್ಯಾಹ್ನ ಜಲಪಾತ ವೀಕ್ಷಿಸಿ ಉಜಿರೆ ಮರಳುವವರಿದ್ದರು. ಹಿಂದಿರುಗುವ ವೇಳೆ ಜಲಪಾತದಂಚಿನಲ್ಲಿದ್ದ ಗುಡ್ಡ ಕುಸಿತವಾಗಿ ಸನತ್ ಶೆಟ್ಟಿಮೇಲೆ ಬಿದ್ದಿದೆ.
ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ಮಲವಂತಿಗೆ ಗ್ರಾಮಕರಣಿಕ ರಾಘವೇಂದ್ರ, ಸಹಾಯಕ ಮಂಜುನಾಥ್, ಗ್ರಾ.ಪಂ. ಸದಸ್ಯ ಪ್ರಕಾಶ್ ಕುಮಾರ್ ಜೈನ್, ಎ.ಎಸ್.ಐ ತಿಲಕ್, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಆರ್.ಐ. ಪ್ರತೀಕ್ಷ್, ಎನ್.ಡಿ.ಆರ್.ಎಫ್., ಶ್ರೀಂಗೇರಿ ಅಗ್ನಿಶಾಮಕದಳ ಭೇಟಿ ನೀಡಿದೆ.