ನೆರೆ ಸಂತ್ರಸ್ತ ಕುಟುಂಬಗಳಿಗೆ ವಿಹಿಂಪ, ಬಜರಂಗದಳ ನೆರವು
Team Udayavani, Aug 31, 2018, 12:48 PM IST
ನಗರ : ಕೊಡಗಿನ ಮಹಾ ಮಳೆಗೆ ರಸ್ತೆ ಸಂಪರ್ಕ ಕಡಿದು ಹೋಗಿ ಸರಕಾರ ಅಥವಾ ಯಾವುದೇ ಸಂಸ್ಥೆಗಳಿಂದ ಪರಿಹಾರ ಸಾಮಗ್ರಿಗಳು ಸಿಗದ ಮಡಿಕೇರಿ ಸಮೀಪದ ಕಾಂಡನಕೂಲ್ಲಿ ಗ್ರಾಮದಲ್ಲಿ ಇರುವ 35 ಕುಟುಂಬಗಳಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರಿನ ಕಾರ್ಯಕರ್ತರು ನೆರವಾಗಿದ್ದಾರೆ. ಹದಗೆಟ್ಟ ದುರ್ಗಮ ರಸ್ತೆಯಲ್ಲಿ ಸ್ಥಳೀಯ ಬಜರಂಗದಳದ ಕಾರ್ಯಕರ್ತರ ಸಹಕಾರದೂಂದಿಗೆ ಪುತ್ತೂರಿನ ಕಾರ್ಯಕರ್ತರು ಸಾಗಿ ಸಂತ್ರಸ್ತರಿಗೆ ಆಹಾರ ವಸ್ತುಗಳನ್ನು, ದಿನ ನಿತ್ಯದ ಅಗತ್ಯ ವಸ್ತುಗಳನ್ನು ನೀಡಲಾಯಿತು ಹಾಗೂ ಮಡಿಕೇರಿ ಸಮೀಪದ ಹೆಬ್ಬಟ್ಟಗಿರಿ ಗ್ರಾಮದ 25 ರಷ್ಟು ಕುಟುಂಬಕ್ಕೂ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು.
ಇದರಲ್ಲಿ 50 ರಷ್ಟು ಕುಟುಂಬಕ್ಕೆ ಬೇಕಾಗುವ ಅಗತ್ಯ ದಿನಸಿ, ದಿನ ಬಳಕೆಯ ಸಾಮಗ್ರಿಗಳನ್ನು ಪುತ್ತೂರಿನ ವರದರಾಜ್ ಬಜಾರ್ನ ವೆಂಕಟರಮಣ ನಾಯಕ್ ಅವರು ಒದಗಿಸಿ ಸಂಘಟನೆಯ ಕಾರ್ಯಕ್ಕೆ ಕೈ ಜೋಡಿಸಿ ಸಹಕರಿಸಿದರು. ಪುತ್ತೂರಿನ ಹಿಂದೂ ಸಮಾಜ ಬಾಂಧವರು ಸಂಘಟನೆಯ ಕರೆಗೆ ಓಗೊಟ್ಟು ನೀಡಿದ ಸಹಾಯ ಸಾಮಗ್ರಿಗಳನ್ನು,ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲಾಯಿತು.
ಬಜರಂಗದಳದ ಪ್ರಾಂತ ಸಂಚಾಲಕ್ ಸುನೀಲ್ ಕೆ. ಆರ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ್ ಶ್ರೀಧರ್ ತೆಂಕಿಲ, ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಧನ್ಯ ಕುಮಾರ್ ಬೆಳಂದೂರು, ಪುತ್ತೂರು ಪ್ರಖಂಡ ಸುರಕ್ಷಾ ಪ್ರಮುಖ್ ಜಯಂತ ಕುಂಜೂರು ಪಂಜ, ಪ್ರಜ್ವಲ್ ಬನ್ನೂರು, ಮಿಥುನ್ ತೆಂಕಿಲ, ಕಾರ್ಯಕರ್ತರಾದ ಅಜೀತ್, ಕಾರ್ತಿಕ್ ಕರ್ಕುಂಜ ಉಪಸ್ಥಿತರಿದ್ದರು.