ದೇಗುಲಕ್ಕೆ ಸೀಯಾಳ ಪೂರೈಕೆ ಸಂಬಂಧಿಸಿ ವಿವಾದ, ಪೊಲೀಸ್ ದೌರ್ಜನ್ಯ ಆರೋಪ; ಪ್ರತಿಭಟನೆ
Team Udayavani, Apr 25, 2022, 7:25 AM IST
ಬಜಪೆ : ಹೊರಗಿನವರು ನೀಡಿದ ಸೂಚನೆ ಮೇರೆಗೆ ಕಟೀಲು ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ಸೀಯಾಳ ಹಾಕಿದ್ದನ್ನು ಪ್ರಶ್ನಿಸಿದ ಶ್ರೀರಾಮ ಸೇನೆಯ ಮಹೇಶ ಅವರನ್ನು ಠಾಣೆಗೆ ಕರೆದೊಯ್ದ ಮತ್ತು ವಿಷಯ ತಿಳಿದು ಠಾಣೆಗೆ ತೆರಳಿದ ದಿನೇಶ್ ಹಾಗೂ ದುರ್ಗಾಚರಣ್ ಮೇಲೆ ಬಜಪೆ ಪೊಲೀಸರು ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
ಮಹೇಶ್ ಹಾಗೂ ದಿನೇಶ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾದರೆ, ದುರ್ಗಾಚರಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವ್ಯಕ್ತಿಯೋರ್ವರು ನೀಡಿದ ಆರ್ಡರ್ನಂತೆ ಶನಿವಾರ ಮುಸ್ಲಿಂ ವ್ಯಕ್ತಿ ಸೀಯಾಳ ತಂದು ದೇವಸ್ಥಾನಕ್ಕೆ ಒಪ್ಪಿಸಿದ ಸಂದರ್ಭ ಇದನ್ನು ಮಹೇಶ ಪ್ರಶ್ನಿಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ಬಳಿಕ ಮಹೇಶನನ್ನು ಠಾಣೆಗೆ ಕರೆಸಲಾಗಿತ್ತು.
ಮೂರು ದಿನಗಳ ಗಡುವು
ಸಂಘಟನೆಯ ಮೂವರ ಮೇಲೆ ದೌರ್ಜನ್ಯವೆಸಗಿದ್ದನ್ನು ಪ್ರತಿಭಟಿಸಿ ಬಜಪೆ ಪೊಲೀಸ್ ಠಾಣೆಯ ಎದುರು ರವಿವಾರದಂದು ಸಂಜೆ ಸಂಘ ಪರಿವಾರದಿಂದ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಪ್ರತಿಭಟನೆಯಲ್ಲಿ ಮಾತನಾಡಿ, ಯಾವ ತಪ್ಪು ಮಾಡಿದ್ದಕ್ಕೆ ಅವರನ್ನು ಹೊಡೆಯಲಾಗಿದೆ. ರಕ್ಷಣೆ ಮಾಡುವವರ ಬಾಯಿಯಿಂದಲೇ ಮಾತೆ, ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳು ಬಂದರೂ ಧ್ವನಿಯೇ ಎತ್ತುವುದಿಲ್ಲ. ಸುಮ್ಮನೆ ಕೂರುತ್ತೇವೆ ಎಂಬ ಭಾವನೆ ಬೇಡ ಎಂದು ಹೇಳಿದರು.
ದೌರ್ಜನ್ಯವೆಸಗಿದ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರ ನಾಲ್ವರು ಪೊಲೀಸ್ ಸಿಬಂದಿ ವಿರುದ್ಧ ಮೂರು ದಿನದೊಳಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘ ಪರಿವಾರದ ಪ್ರಮುಖರು ಎಸಿಪಿ ಮಹೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸುಮಾರು 200 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಸಿಪಿ ಮಹೇಶ್ ಕುಮಾರ್ ಮಾತನಾಡಿ, ಸತ್ಯಾಸತ್ಯತೆಯ ಬಗ್ಗೆ ವರದಿಯನ್ನು ಪೊಲೀಸ್ ಕಮಿಷನ್ರಿಗೆ ಸಲ್ಲಿಸುತ್ತೇವೆ. ಕೂಲಂಕಷವಾಗಿ ವಿಚಾರಣೆ ನಡೆಸಿ, ಎಲ್ಲ ಸಾಕ್ಷಿಗಳ ಪರಿಶೀಲನೆ ಮಾಡಿ ವರದಿ ನೀಡಲಾಗುವುದು ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ್ ಕಟೀಲು, ಸಂಘದ ಪ್ರಮುಖರಾದ ನಾಗೇಶ್ ಉಳ್ಳಾಲ, ಬಿಜೆಪಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ, ಸೋಂದ ಭಾಸ್ಕರ್ ಭಟ್ ಉಪಸ್ಥಿತರಿದ್ದರು.