ಮಂಗಳೂರು: ಬೈಕ್ ಸ್ಕಿಡ್ ಆಗಿ ಬಾರ್ ಮ್ಯಾನೇಜರ್ ಸಾವು, ಸಹ ಸವಾರ ಗಂಭೀರ
Team Udayavani, Sep 19, 2022, 3:33 PM IST
ಮಂಗಳೂರು : ನಗರದ ಜೆಪ್ಪಿನ ಮೊಗರಿಲ್ಲಿ ಸೋಮವಾರ ಬೆಳಗಿನ ಜಾವ ಬೈಕ್ ಸ್ಕಿಡ್ ಆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ತೊಕ್ಕೊಟ್ಟು ಅಂಬಿಕಾ ರಸ್ತೆಯಲ್ಲಿರುವ ಬಾರ್ ನಲ್ಲಿ ಮ್ಯಾನೇಜರ್ ಆಗಿದ್ದ ಚಿಕ್ಕಮಗಳೂರಿನ ನಿವಾಸಿ ಪ್ರತಾಪ್ ಶೆಟ್ಟಿ (32) ಎಂದು ಗುರುತಿಸಲಾಗಿದೆ. ಸಹ ಸವಾರ ಚಿಕ್ಕಮಗಳೂರು ಮೂಲದ ಅವರ ಸಂಬಂಧಿ ಅಭಿ ಶೆಟ್ಟಿ (22) ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಭಿ ಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಭಿ ಕೂಡ ಅದೇ ಬಾರ್ನಲ್ಲಿ ಕೌಂಟರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇಬ್ಬರು ಕೆಲಸ ಮುಗಿಸಿ ಫರಂಗಿಪೇಟೆಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ವಾಪಸಾಗುತ್ತಿದ್ದಾಗ ಬೈಕ್ನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.