ಬೆಳ್ಳಾರೆ: ಚರಂಡಿ ಸಮಸ್ಯೆ ನಿವಾರಣೆಯಾಗಲಿ
ಅವ್ಯವಸ್ಥೆಯಿಂದ ಕೂಡಿದ ಚರಂಡಿ
Team Udayavani, Apr 6, 2022, 10:09 AM IST
ಸುಳ್ಯ: ಸುಳ್ಯ ತಾಲೂಕಿನಲ್ಲಿ ಹೋಬಳಿ ಕೇಂದ್ರವಾಗುವ ಅರ್ಹತೆಯನ್ನು ಹೊಂದಿರುವ ಬೆಳ್ಳಾರೆ ಪೇಟೆಯಲ್ಲಿ ಚರಂಡಿ ಅವ್ಯವಸ್ಥೆಯಿಂದ ಕೂಡಿದೆ. ಚರಂಡಿಯಲ್ಲಿ ಮಲಿನ ನೀರು ಸಂಗ್ರಹಗೊಂಡು ರೋಗ ಭೀತಿ ಸೃಷ್ಟಿಯಾಗಿದೆ. ಬೆಳ್ಳಾರೆ ಪೇಟೆಯಲ್ಲಿ ವ್ಯವಸ್ಥಿತ ಚರಂಡಿ ಹಾಗೂ ಮಳೆಗಾಲಕ್ಕೂ ಮುನ್ನ ಚರಂಡಿ ದುರಸ್ತಿ ಆಗಬೇಕಿದೆ.
ಬೆಳ್ಳಾರೆ ಅಭಿವೃದ್ಧಿ ಹೊಂದುತ್ತಿರುವ ಪೇಟೆಯಾಗಿದೆ. ಪೇಟೆಯ ಮೇಲಿನ ಭಾಗದಿಂದ ಸುಬ್ರಹ್ಮಣ್ಯ ರಸ್ತೆ ಹಾಗೂ ಸುಳ್ಯ ರಸ್ತೆಯವರೆಗೂ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ.
ಪೇಟೆಯಲ್ಲಿ ಈ ಹಿಂದೆ ಚರಂಡಿಗಳನ್ನು ನಿರ್ಮಿಸಲಾಗಿದ್ದರೂ ಅದರಲ್ಲಿ ಈಗ ಗಿಡ-ಗಂಟಿಗಳು ಬೆಳೆದುಕೊಂಡಿದೆ. ಇನ್ನು ಕೆಲವೆಡೆ ಮಣ್ಣು ತುಂಬಿಕೊಂಡು ಚರಂಡಿ ಮುಚ್ಚಿ ಹೋಗಿವೆ. ನೀರು ಸೇರುವಲ್ಲೂ ಚರಂಡಿ ಮುಚ್ಚಿದ ಸ್ಥಿತಿಯಲ್ಲಿದೆ.
ಮಲಿನ ನೀರು ಸಂಗ್ರಹ
ಕೆಳಗಿನ ಪೇಟೆಯ ಸುಬ್ರಹ್ಮಣ್ಯ ರಸ್ತೆಯಲ್ಲಿರುವ ಚರಂಡಿಯ ಕೆಲವೆಡೆ ಮಲಿನ ನೀರು ಸಂಗ್ರಹಗೊಂಡಿದ್ದು,ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಯಾಗಿದೆ. ಜೋರು ಮಳೆ ಬಂದಲ್ಲಿ ಮಳೆ ನೀರು ಚರಂಡಿಯಲ್ಲಿ ತುಂಬಿ ರಸ್ತೆಯ ಮೇಲೂ ಕಲ್ಮಶ ನೀರು ಹರಿಯುತ್ತದೆ.
ಅಪಾಯಕಾರಿ
ಪೇಟೆಯ ಅವ್ಯವಸ್ಥಿತ ಚರಂಡಿಯಿಂದಾಗಿ ಮಳೆ ನೀರು ರಸ್ತೆಯಲ್ಲೇ ಹರಿದು ಮಣ್ಣು ನಿಂತಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ರಸ್ತೆಯ ಎರಡೂ ಬದಿಯಲ್ಲೂ ಸಮರ್ಪಕ ಚರಂಡಿ ವ್ಯವಸ್ಥೆ ಅಗತ್ಯ ಎಂದು ಬೇಡಿಕೆ ಇಡುತ್ತಾರೆ ಸ್ಥಳೀಯರು.
ರಸ್ತೆಗೆ ನೀರು ನುಗ್ಗುವ ಆತಂಕ
ಮೊನ್ನೆ ಸುರಿದ ಮೊದಲ ಮಳೆಗೆ ನೀರು ಚರಂಡಿ ಬಿಟ್ಟು ರಸ್ತೆಯಲ್ಲೇ ಹರಿದಿದೆ. ಮಳೆಗಾಲಕ್ಕೆ ಮೊದಲು ವರ್ಷಂಪ್ರತಿ ಚರಂಡಿ ದುರಸ್ತಿ ಮಾಡಬೇಕೆಂಬ ಬೇಡಿಕೆ ಇದ್ದರೂ ಈಡೇರಿಲ್ಲ ಎಂಬ ದೂರು ವ್ಯಕ್ತವಾಗಿದೆ. ಇಲ್ಲಿನ ಚರಂಡಿ ದುರಸ್ತಿಗೆ ಗ್ರಾಮಸಭೆಯಲ್ಲೂ ಆಗ್ರಹ ವ್ಯಕ್ತವಾಗಿತ್ತು. ಶೀಘ್ರ ಚರಂಡಿ ವ್ಯವಸ್ಥಿತವಾಗಿ ದುರಸ್ತಿಯಾಗದಿದ್ದರೆ ಮಳೆಗಾಲದಲ್ಲಿ ರಸ್ತೆಗೆ ನೀರು ನುಗ್ಗುವ ಆತಂಕವಿದೆ. ಮಾತ್ರವಲ್ಲ ಜತೆಗೆ ಕೊಳಚೆ ನೀರು ರಸ್ತೆಯಲ್ಲೇ ಹರಿಯಲಿದೆ.