ಬೆಳ್ತಂಗಡಿ: ಲೈನ್ಮನ್ನ ಕಡಿದು ಕೊಲೆ
Team Udayavani, Jun 3, 2017, 12:15 PM IST
ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಸಮೀಪ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಲಾಗಿದೆ.
ಮೂಲತಃ ಮೂಡಿಗೆರೆ ನಿವಾಸಿ ಬೆಳ್ತಂಗಡಿಯ ಸಂತೆಕಟ್ಟೆ ಬಳಿ ಬಾಡಿಗೆ ಮನೆಯಲ್ಲಿದ್ದ ಬಿಎಸ್ಎನ್ಎಲ್ನ ಲೆ„ನ್ಮನ್ ತಿಮ್ಮಪ್ಪ ಪೂಜಾರಿ (52) ಕೊಲೆಗೀಡಾದವರು. ಇವರ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ (20) ಕೊಲೆ ಆರೋಪಿ.
ತಿಮ್ಮಪ್ಪ ಪೂಜಾರಿ ಪತ್ನಿ ಚಂಪಾವತಿ, ಪುತ್ರ ಖುಷಿತ್ (12), ಪುತ್ರಿ ತನ್ವಿ (9) ಅವರನ್ನು ಅಗಲಿದ್ದಾರೆ. ಕೆಲವು ಸಮಯದಿಂದ ಇವರು ಬಾಡಿಗೆ ಮನೆಯಲ್ಲಿದ್ದು ಬಿಎಸ್ಎನ್ಎಲ್ನಲ್ಲಿ ಉದ್ಯೋಗಿಯಾಗಿದ್ದರು.
ಪಕ್ಕದ ಮನೆಯಲ್ಲಿ ಚಂದ್ರಶೇಖರ್ ತನ್ನ ತಾಯಿಯ ಜತೆಗೆ ವಾಸವಿದ್ದು ಉಜಿರೆ ಕಾಲೇಜಿಗೆ ಹೋಗಿ ಬಿಬಿಎಂ ಎರಡನೆ ವರ್ಷದ ವಿದ್ಯಾರ್ಥಿಯಾಗಿದ್ದ.
ಶುಕ್ರವಾರ ರಾತ್ರಿ 8ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ತಿಮ್ಮಪ್ಪ ಪೂಜಾರಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿದ ಚಂದ್ರಶೇಖರ್ ಯಾವುದೋ ವಿಚಾರದಲ್ಲಿ ಜಗಳ ಆರಂಭಿಸಿ ಅನಂತರ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇಬ್ಬರದ್ದೂ ಒಂದೇ ಕಟ್ಟಡದಲ್ಲಿರುವ ಬಾಡಿಗೆ ಮನೆಗಳು. ಆದ್ದರಿಂದ ನೀರಿನ ವಿಚಾರದಲ್ಲಿ ಇವರ ಒಳಗೆ ಜಗಳ ಎಂದು ಹೇಳಲಾಗುತ್ತಿದೆ. ಈ ಮಧ್ಯೆಯೇ ಹೇಳಲಾಗದ ಕಾರಣಗಳಿದ್ದವು. ಇದು ಚಂದ್ರಶೇಖರ್ಗೆ ಅಸಹನೆ ಉಂಟು ಮಾಡಿದ್ದು ತಿಮ್ಮಪ್ಪ ಪೂಜಾರಿಯನ್ನು ಚಂದ್ರಶೇಖರ್ ಸಹಿಸದೇ ಕೊಲೆ ಮಾಡುವ ಹಂತ ತಲುಪಿದ್ದಾನೆ ಎನ್ನಲಾಗಿದೆ.
ಆರೋಪಿ ಸದ್ಯ ಬೆಳ್ತಂಗಡಿ ಪೊಲೀಸರ ವಶದಲ್ಲಿದ್ದಾನೆ. ತನಿಖೆಯ ಬಳಿಕ ಸ್ಪಷ್ಟ ಕಾರಣ ತಿಳಿದು ಬರಲಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ, ಡಿವೈಎಸ್ಪಿ ಮೊದಲಾದವರು ಭೇಟಿ ನೀಡಿದ್ದಾರೆ.
ಘಟನೆಗೆ ಸ್ವಲ್ಪ ಹೊತ್ತು ಮುಂಚೆ ಆರೋಪಿ ಸ್ಥಳೀಯ ಬೇಕರಿಯಿಂದ ಬ್ರೆಡ್ ಖರೀದಿಸಿ ಮನೆಯಲ್ಲಿ ಅಮ್ಮ ಇಲ್ಲ ಎಂದು ಹೇಳಿದ್ದ. ಸಂತೆಕಟ್ಟೆಯಲ್ಲಿ ತಿಮ್ಮಪ್ಪ ಅವರು ಬರುವುದನ್ನು ಹೊಂಚು ಹಾಕಿ ಕಾಯುತ್ತಿದ್ದ ಎಂದು ಕೆಲವರು ಹೇಳುತ್ತಾರೆ. ಘಟನೆ ನಡೆದಲ್ಲಿ ಮನೆಗಳು, ಅಂಗಡಿಗಳು ಇದ್ದು ಜನ ಸಂಚಾರದ ಪ್ರದೇಶವೇ ಆಗಿದೆ.