ಬೆಳ್ತಂಗಡಿ: ಉಜಿರೆಯಲ್ಲಿ ಡೆಂಗ್ಯೂ ಉತ್ಪತ್ತಿ ಕೇಂದ್ರ!
Team Udayavani, Aug 22, 2018, 12:02 PM IST
ಬೆಳ್ತಂಗಡಿ: ಉಜಿರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪರಿಸರ ಈಗ ತ್ಯಾಜ್ಯ ರಾಶಿಯಿಂದ ಕೂಡಿದ್ದು, ಡೆಂಗ್ಯೂ ರೋಗ ಉತ್ಪತ್ತಿ ಮಾಡುವ ತಾಣವಾಗಿ ಪರಿಣಮಿಸಿದೆ. ಸ್ಥಳೀಯ ಸಾಕಷ್ಟು ಮಂದಿಗೆ ಪ್ರಸ್ತುತ ಡೆಂಗ್ಯೂಗೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಉಪಯೋಗಿಸಿದ ನೀರಿನ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ, ಸೀಯಾಳದ ಚಿಪ್ಪು ಮೊದಲಾದ ವಸ್ತುಗಳನ್ನು ಅಲ್ಲೇ ಬಿಸಾಡುವುದರಿಂದ ಉಜಿರೆಯ ಅಂದಗೆಡುವ ಜತೆಗೆ ಜನರ ಆರೋಗ್ಯವನ್ನೂ ಕೆಡಿಸುತ್ತಿದೆ. ಇದು ತ್ಯಾಜ್ಯ ಡಂಪಿಂಗ್ ಯಾರ್ಡ್ನಂತಾಗಿದ್ದು, ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ.
ಕೆಲವು ಹೋಟೆಲ್ ಹಾಗೂ ವಸತಿ ಗೃಹಗಳ ಹಿಂಬದಿಯಲ್ಲಿಯೂ ಈ ರೀತಿಯ ಸ್ಥಿತಿಯಿದ್ದು, ಸ್ಥಳೀಯಾಡಳಿತ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಲೇವಾರಿಗೆ ಸೂಚನೆ
ಉಜಿರೆ ಗ್ರಾಮ ಪಂಚಾಯತ್ನಿಂದ ಮನೆ, ಅಂಗಡಿ, ಕಚೇರಿಗಳಿಂದ ನಿತ್ಯ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದ್ದು, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತ್ಯಾಜ್ಯದ ಕುರಿತು ಗಮನಕ್ಕೆ ಬಂದಿದ್ದು, ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಒಳಗಡೆ ಕಸದ ಬುಟ್ಟಿಯನ್ನಿರಿಸಿ ಅದರಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವಂತೆ ತಿಳಿಸಲಾಗಿದೆ ಎಂದು ಉಜಿರೆ ಗ್ರಾಮ ಪಂಚಾಯತ್ ಪಿಡಿಒ ಗಾಯತ್ರಿ ಪಿ. ತಿಳಿಸಿದ್ದಾರೆ.