ಬೆಳ್ತಂಗಡಿ ಜಂಕ್ಷನ್: ಅಭಿವೃದ್ಧಿಯಾದರೆ ಇಡೀ ತಾಲೂಕಿಗೆ ಅನುಕೂಲ
Team Udayavani, Aug 11, 2018, 1:25 AM IST
ತಾ|ನ ಪ್ರಮುಖ ಜಂಕ್ಷನ್ ನಲ್ಲಿ ಅಭಿವೃದ್ಧಿಯ ಅಧ್ಯಾಯ ಶೀಘ್ರ ಆರಂಭವಾಗದಿದ್ದರೆ ಪರಿಣಾಮ ಇಡೀ ತಾ|ನ ಮೇಲೆ ಬೀಳುವುದು ಖಚಿತ. ಅದಕ್ಕೆ ಸ್ಥಳೀಯಾಡಳಿತ ಸಿದ್ಧವಾಗಬೇಕು.
ಬೆಳ್ತಂಗಡಿ: ತಾಲೂಕಿನ ಬಸ್ಸುನಿಲ್ದಾಣದ ಜಂಕ್ಷನ್ ಪ್ರದೇಶ ಇಡೀ ತಾಲೂಕಿನ ಜನರಿಗೆ ಸಂಪರ್ಕ ಕಲ್ಪಿಸುವ ಕೇಂದ್ರಬಿಂದು. ಹತ್ತಿರಕ್ಕೆ ಹೋಗುವ ಎಲ್ಲ ಊರಿನ ಬಸ್ಸುಗಳೂ ಈ ಜಂಕ್ಷನ್ನ್ನು ಹಾದು ಹೋಗಲೇಬೇಕು. ಹಾಗಾಗಿ ದಿನವಿಡೀ (ರಾತ್ರಿ ಹೊರತು ಪಡಿಸಿ) ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಸುತ್ತಲಿನ ಆರ್ಥಿಕ ಚಟುವಟಿಕೆಗೂ ಬಹಳ ಪ್ರಮುಖವಾಗಿರುವ ಈ ಜಂಕ್ಷನ್ ನ ಅಭಿವೃದ್ಧಿ ಕುರಿತು ನಾಲ್ಕು ಮಾತು ಹೇಳಲೇಬೇಕು. ಇಲ್ಲಿರುವ ಸೌಲಭ್ಯಗಳನ್ನು ಪಟ್ಟಿ ಮಾಡಿ ಹೇಳುವುದಕ್ಕಿಂತ ಇರುವಷ್ಟೂ ಸೌಲಭ್ಯಗಳನ್ನು ಒತ್ತಟ್ಟಿನಲ್ಲಿ ಚೆಂದಗೊಳಿಸಲು ಸಾಧ್ಯವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ತಾಲೂಕಿನ ಕೇಂದ್ರ ಪ್ರದೇಶವಾದ ಕಾರಣ, ಸನಿಹದಲ್ಲೇ ತಾಲೂಕು ಕಚೇರಿ, ನಗರಸಭಾ ಕಾರ್ಯಾಲಯ, ನ್ಯಾಯಾಲಯ, ತಾಲೂಕು ಪಂಚಾಯತ್, ಪೊಲೀಸ್ ಠಾಣೆ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ಇವೆ. ಆದ ಕಾರಣ ಜನದಟ್ಟಣೆ ಹಾಗೂ ವಾಹನ ಸಂಚಾರ ತುಸು ಹೆಚ್ಚು.
ಬಸ್ಸು ನಿಲ್ದಾಣ ಹೀಗಿದೆ
ಬಸ್ಸು ನಿಲ್ದಾಣ ಜಂಕ್ಷನ್ ಆದ ಕಾರಣ ಈಗಾಗಲೇ ಹೇಳಿದಂತೆ ಪ್ರಯಾಣಿಕರ ಸಂಖ್ಯೆ ಜಾಸ್ತಿ. ಆದರೆ ಈ ಪ್ರದೇಶ ಕಿರಿದಾಗಿರುವುದರಿಂದ ಸಾಕಷ್ಟು ಬಾರಿ ಅವ್ಯವಸ್ಥೆ ಎನಿಸುವುದುಂಟು. ಜನರಿಗೆ, ವಾಹನ ಸವಾರರಿಗೆ ಗೊಂದಲ ಉಂಟಾಗುವುದೂ ಉಂಟು. ಇಲ್ಲಿ ಪ್ರಯಾಣಿಕರಿಗೆ ನಿಲ್ಲುವ ವ್ಯವಸ್ಥೆಯಾಗಲಿ, ಬಸ್ಸುಗಳಿಗೆ ನಿಲ್ಲುವ ವ್ಯವಸ್ಥೆಯಾಗಲಿ ಸಮರ್ಪಕವಾಗಿರದಿದ್ದುದು ಈ ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಶೌಚಾಲಯ ವ್ಯವಸ್ಥೆ ಇದೆ ಎಂಬುದು ಸಣ್ಣದೊಂದು ಸಮಾಧಾನ. ಆದರೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಸ್ವತ್ಛತೆಗೆ ಬಸ್ ನಿಲ್ದಾಣದಲ್ಲಿ ಇನ್ನಷ್ಟು ಪ್ರಾಮುಖ್ಯ ನೀಡಬೇಕಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿಲ್ಲ. ಹಾಗಾಗಿ ಮಳೆ ಬಿಸಿಲಿಗೆ ನಿಲ್ದಾಣದ ಬದಿಯಲ್ಲೇ ನಿಲ್ಲಬೇಕು. ಸರಕಾರಿ ಆಸ್ಪತ್ರೆಗೆ ಸಂತೆಕಟ್ಟೆಯಲ್ಲಿರುವ ತಾಲೂಕು ಆಸ್ಪತ್ರೆಯನ್ನೇ ಆಶ್ರಯಿಸಬೇಕಿದೆ.
ಬಿ.ಸಿ.ರೋಡ್, ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮೊದಲಾದ ಪ್ರದೇಶಕ್ಕೆ ತೆರಳುವ ಬಸ್ಸುಗಳೂ ಈ ನಿಲ್ದಾಣಕ್ಕೆ ಆಗಮಿಸುತ್ತವೆ. ಬಿ.ಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿ ಇದೇ ಭಾಗದಲ್ಲಿ ಹಾದುಹೋಗುತ್ತಿದ್ದು, ಅಲ್ಲೇ ಪಕ್ಕದಲ್ಲಿ ಆಟೋ ರಿಕ್ಷಾ ನಿಲ್ದಾಣ, ಟೆಂಪೋಗಳು, ಜೀಪ್ಗ್ಳು, ಇತರ ವಾಹನಗಳೂ ನಿಲ್ಲುತ್ತಿವೆ. ಇದರಿಂದ ಸ್ಥಳಾವಕಾಶದ ಕೊರತೆ ಇದೆ. ಪಾರ್ಕಿಂಗ್ ಸಮಸ್ಯೆಯೂ ಕಾಡುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್ ಜಾಮ್ ಸಮಸ್ಯೆಯೂ ಇದೆ. ಇದಲ್ಲದೇ ಸರಕಾರಿ, ಖಾಸಗಿ ಬಸ್ಸುಗಳು ಒಂದೇ ಕಡೆ ನಿಲ್ಲುವಷ್ಟು ಜಾಗವಿಲ್ಲ, ಆದರೂ ನಿಲ್ಲಿಸಲಾಗುತ್ತಿರುವುದೂ ತೊಂದರೆಯಾಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ನೂರಾರು ವಿದ್ಯಾರ್ಥಿಗಳ ಓಡಾಟ
ಬೆಳ್ತಂಗಡಿ ಬಸ್ ನಿಲ್ದಾಣವನ್ನೇ ಬಳಸಿ ನೂರಾರು ಮಂದಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಉಜಿರೆ, ಪುತ್ತೂರು, ಮಂಗಳೂರು, ಮಡಂತ್ಯಾರು ಇತರ ಪ್ರದೇಶಗಳಿಗೆ ತೆರಳಲು ಇದೇ ಜಂಕ್ಷನ್ ನಲ್ಲಿ ಬಸ್ಸು ಬದಲಿಸಬೇಕು. ಪ್ರಯಾಣಿಕರ ಜತೆ ವಿದ್ಯಾರ್ಥಿಗಳೂ ಸೇರಿದರೆ ದಿನಕ್ಕೆ ಸಾವಿರಾರು ಮಂದಿ ಸಂಚರಿಸುತ್ತಿರುತ್ತಾರೆ. ಹಾಗಾಗಿ ಕಿಷ್ಕಿಂಧೆಯ ಸ್ವರೂಪಕ್ಕೆ ಹೊಸ ರೂಪ ನೀಡಬೇಕಿದೆ.
ಬಸ್ ನಿಲ್ದಾಣದಲ್ಲಿ ಬದಲಾವಣೆ
ಬಸ್ಸು ನಿಲ್ದಾಣದಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಸಿಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆಯಾಗಬೇಕು. ಜತೆಗೆ ಬಸ್ಸನ್ನು ಬಿಟ್ಟು ಇತರ ವಾಹನ ಪ್ರವೇಶಕ್ಕೆ ಅವಕಾಶ ನೀಡಬಾರದು. ರಿಕ್ಷಾಗಳನ್ನು ಉದ್ದಕ್ಕೆ ನಿಲ್ಲಿಸುವ ಬದಲು ಕ್ಯು ಸಿಸ್ಟಂ ಜಾರಿಗೆ ತರಬೇಕು. ಇದರ ಲಘು ವಾಹನಕ್ಕೆ ಕೊಂಚ ದೂರಕ್ಕೆ ವ್ಯವಸ್ಥೆ ಮಾಡಿದರೆ ಉತ್ತಮ.
– ಓಡಿಯಪ್ಪ ಗೌಡ, ಸಬ್ ಇನ್ಸ್ಪೆಕ್ಟರ್, ಸಂಚಾರಿ ಪೊಲೀಸ್ ಠಾಣೆ, ಬೆಳ್ತಂಗಡಿ
— ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ