‘ಮುತ್ತು ರತ್ನದ ಪೇಟೆ’ ಹಾಡಿಗೆ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ
Team Udayavani, Apr 14, 2018, 9:30 AM IST
ಮಂಗಳೂರು: ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಕನ್ನಡ ಸಿನೆಮಾದ ಹಾಡಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ.
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಇದರಲ್ಲಿ ‘ಮಾರ್ಚ್ 22’ ಚಿತ್ರದ ‘ಮುತ್ತು ರತ್ನದ ಪೇಟೆ, ಛಿದ್ರವಾಯಿತೇ ಕೋಟೆ’ ಹಾಡಿನ ರಚನೆಗೆ ಗೀತಾ ರಚನೆಕಾರ ಪ್ರಹ್ಲಾದ್ ಅವರಿಗೆ ಅತ್ಯುತ್ತಮ ಗೀತರಚನೆ ಪ್ರಶಸ್ತಿ ಲಭಿಸಿದೆ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್ ಶೆಟ್ಟಿ ಅವರು ಈ ಹಾಡಿನಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ಕೈಲಾಶ್ ಖೇರ್ ಈ ಹಾಡನ್ನು ಹಾಡಿದ್ದಾರೆ.
‘ಮಾರ್ಚ್ 22’ ಸಿನೆಮಾದ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ. ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿಯ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದರೂ, ಧರ್ಮಗಳ ನಡುವೆ ಕೆಲವೊಮ್ಮೆ ಧಕ್ಕೆ ಬಂದಿರುವುದು ಕೂಡ ಸತ್ಯ. ಇದೇ ಕಥೆಯಾಧಾರಿತವಾಗಿ ಸಿನೆಮಾ ಮೂಡಿಬಂದಿದೆ.