ಶ್ರೀ ಕ್ಷೇತ್ರ ಧರ್ಮಸ್ಥಳ :21ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಚಾಲನೆ
Team Udayavani, Sep 16, 2019, 12:05 PM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಸೋಮವಾರ 21ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಹಿರಿಯ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸೂರ್ಯನಾರಾಯಣ ಉಪಾಧ್ಯಾಯರು, ಧರ್ಮದ ತಳಹದಿ, ಭಗವಂತನ ಅಸ್ತಿತ್ವದ ಮೇಲೆ ನಿಂತಿರುವ ಸಂಸ್ಕೃತಿ ನಮ್ಮದು. ಭಜನೆಯಿಂದ ಬದುಕಿನ ಸಾರ್ಥಕತೆ, ದೇವರ ಅನುಗ್ರಹಕ್ಕಾಗಿ ಭಜನಾ ಸಂಸ್ಕೃತಿ ಮೆರೆಯಲಿ ಎಂದರು.
ಆಧ್ಯಾತ್ಮ ಚಿಂತನೆ ಬೆಳೆಸುವ ದೃಷ್ಟಿಯಿಂದ ಡಾ.ಡಿ ವಿರೇಂದ್ರ ಹೆಗ್ಗಡೆಯವರು ಹಮ್ಮಿಕೊಂಡ ಭಜನಾ ತರಬೇರಿ ಕಮ್ಮಟ ಇಂದು ಕ್ರಾಂತಿಯಾಗಿ 21ನೇ ವರ್ಷಕ್ಕೆ ಕಾಲಿಟ್ಟಿದೆ. ಯೋಜನೆ ಪ್ರಾಮಾಣಿಕವಾಗಿದ್ದಲ್ಲಿ, ನಿಸ್ವಾರ್ಥ ಸೇವೆಯ ಸಂಕಲ್ಪವಿದ್ದಲ್ಲಿ ಅದು ಯಶಸ್ಸು ಪಡೆಯುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಡಾ. ಹೆಗ್ಗಡೆ ಕಾರ್ಯಯೋಜನೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಮಾಣಿಲ ಶ್ರೀಧಾಮದ ಮೋಹನ ದಾಸ ಸ್ವಾಮೀಜಿ, ಭಜನಾ ಪರಿಷತ್ ಉಪಾಧ್ಯಕ್ಷರಾದ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಉಪಸ್ಥಿತರಿದ್ದರು.