ದ.ಕ.: 28 ವರ್ಷಗಳಿಂದ ಕಾಂಗ್ರೆಸ್ಗೆ ಸೋಲಿನ ಅನುಭವ
1951ರಿಂದ ಆರಂಭವಾಗಿದ್ದ ಗೆಲುವಿನ ಓಟಕ್ಕೆ 1991ರಲ್ಲಿ ತಡೆ
Team Udayavani, May 24, 2019, 6:10 AM IST
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ
1991ರಿಂದ ಇಲ್ಲಿಯ ವರೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ
ಕಾಂಗ್ರೆಸ್ಗೆ ಗೆಲುವು ಕೈಗೆಟಕಿಲ್ಲ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 1951ರಿಂದ ನಿರಂತರ ಒಂಬತ್ತು ಬಾರಿ ಗೆಲುವು ಕಂಡಿತ್ತು. ಈ ವಿಜಯದ ಓಟಕ್ಕೆ ತಡೆ
ಎದುರಾದದ್ದು 1991ರ ಚುನಾವಣೆಯಲ್ಲಿ. ಆ ಬಳಿಕ ಈ ಕ್ಷೇತ್ರವನ್ನು ಕಾಂಗ್ರೆಸ್ಪಕ್ಷಕ್ಕೆ ಬಿಟ್ಟುಕೊಡದ ಬಿಜೆಪಿಯು ಮುಂದಿನ ಎಲ್ಲ ಎಂಟು ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ.
1991ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಮುರಿದದ್ದು ಬಿಜೆಪಿಯ ಧನಂಜಯ ಕುಮಾರ್. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದವರು ಜನಾರ್ದನ ಪೂಜಾರಿ.
1996ರಲ್ಲಿ ಮತ್ತೆ ಧನಂಜಯ ಕುಮಾರ್ ವಿರುದ್ಧ ಪೂಜಾರಿ ಸೋಲು ಅನುಭವಿಸುವಂತಾಯಿತು. 1998ರಲ್ಲಿ ಇದು ಪುನರಾವರ್ತನೆ ಯಾಯಿತು. 1999ರಲ್ಲಿ ಧನಂಜಯ ಕುಮಾರ್ ಅವರು ಕಾಂಗ್ರೆಸ್ನ ವೀರಪ್ಪ ಮೊಲಿ ವಿರುದ್ಧ ಗೆದ್ದರು.
2004ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಡಿ.ವಿ. ಸದಾನಂದ ಗೌಡ
ಅವರು ವೀರಪ್ಪ ಮೊಲಿ ಅವರನ್ನು ಸೋಲಿಸಿದರು. 2009ರಲ್ಲಿ ಮತ್ತೆ ಜನಾರ್ದನ ಪೂಜಾರಿ ಸ್ಪರ್ಧಿಸಿದಾಗ, ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲು ಅಭ್ಯರ್ಥಿಯಾಗಿ ಗೆದ್ದರು. ಈ ಗೆಲುವು 2014ರಲ್ಲಿ ಮರುಕಳಿಸಿತು.
ಈ ಬಾರಿ ಮತ್ತದೇ ಫಲಿತಾಂಶದ ಇತಿಹಾಸ ಮರುಕಳಿಸಿದ್ದು, ಕಾಂಗ್ರೆಸ್
ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಬಿಜೆಪಿಯ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ಸೋಲನುಭವಿಸಿದ್ದಾರೆ.