ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Team Udayavani, Nov 4, 2018, 11:11 AM IST
ಮಹಾನಗರ: ಜಿಲ್ಲೆಯಲ್ಲಿ ಪ್ರತೀ ವರ್ಷ ಎದುರಾಗುತ್ತಿರುವ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಬಿಜೆಪಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಭಜನೆ ಹಾಡಿ ವಿಶೇಷವಾಗಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಜಿಲ್ಲೆಯಲ್ಲಿ ಮರಳು ಸಮಸ್ಯೆಯಿಂದ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಕಟ್ಟಡ ಕಟ್ಟುವವರು ಕಣ್ಣೀರಿಡುತ್ತಿದ್ದಾರೆ. ಸೂಕ್ತ ಮರಳು ನೀತಿಯನ್ನು ರೂಪಿಸುವಲ್ಲಿ ಸರಕಾರ, ಜಿಲ್ಲಾಡಳಿತ ವಿಫಲವಾಗಿದೆ. ಮನೆ ಕಟ್ಟುವ ಬಡ ಜನರು 20-30 ಸಾವಿರ ರೂ. ನೀಡಿ ಮರಳು ಖರೀದಿಸುವ ಸ್ಥಿತಿ ಇದೆ. ಕರಾವಳಿ ಭಾಗದ ಶಾಸಕರು ವಿಧಾನ ಸಭೆಯಲ್ಲಿ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಆಗ್ರಹ ಮಾಡಿದ್ದರೂ ಸರಕಾರದಿಂದ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ ಎಂದರು.
ಸರಕಾರ ಮರಳು ನೀತಿ ಮಾಡಿ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕುತ್ತಿದ್ದರೆ ಮರಳು ಅಭಾವ ಉಂಟಾಗುತ್ತಿರಲಿಲ್ಲ. ಇದಕ್ಕೆ ಈ ಹಿಂದಿನ ಸರಕಾರದ ಪ್ರಭಾವಿ ಸಚಿವರುಗಳು ಕಾರಣ. ಅವರ ಸಹಚರರು ಕೇರಳ, ಬೆಂಗಳೂರು ಮೊದಲಾದ ಕಡೆಗೆ ಬೇಕಾಬಿಟ್ಟಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಿದ ಪರಿಣಾಮ ಇಂದು ಮರಳು ಅಭಾವ ಸೃಷ್ಟಿಯಾಗಿದೆ ಎಂದರು. ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರ್, ಪ್ರೇಮಾನಂದ ಶೆಟ್ಟಿ, ಪೂಜಾ ಪೈ, ಭಾಸ್ಕರಚಂದ್ರ ಶೆಟ್ಟಿ, ಸಂಧ್ಯಾ ಎಸ್., ಪ್ರಭಾರಾಣಿ, ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.