ಮಂಗಳೂರು: ಬಾಂಬ್ ನಿಷ್ಕ್ರಿಯ ದಳದಿಂದ ಸ್ಪೋಟಕ ನಾಶ
Team Udayavani, Jan 20, 2020, 6:51 PM IST
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದ ಶಂಕಾಸ್ಪದ ಬ್ಯಾಗನ್ನು ಬಾಂಬ್ ಪ್ರತಿರೋಧಕ ವಾಹನದಲ್ಲಿರಿಸಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಕೆಂಜಾರು ಮೈದಾನಕ್ಕೆ ಬಹಳ ಜಾಗರೂಕತೆಯಿಂದ ಸಾಗಿಸಲಾಯಿತು.
ಬಳಿಕ ಮೈದಾನದ ಮಧ್ಯದಲ್ಲಿ 12 ಅಡಿ ಆಳದ ಹೊಂಡವನ್ನು ತೋಡಿ ಹೊಂಡದ ಸುತ್ತ ಮರಳಿನ ಗೋಣಿಗಳನ್ನು ಪೇರಿಸಿಡಲಾಯಿತು. ಆ ಬಳಿಕ ಬೆಂಗಳೂರಿನಿಂದ ಆಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಹೊಂಡದಲ್ಲಿ ಇರಿಸಿದ್ದ ಸ್ಪೋಟಕ ತುಂಬಿದ್ದ ಶಂಕಿತ ಬ್ಯಾಗಿಗೆ ವಯರ್ ಗಳನ್ನು ಸಂಪರ್ಕಿಸಿ ಡಿಟೋನೇಟರ್ ಬಳಸಿ ಅದನ್ನು ಸ್ಪೋಟಿಸುವ ಮೂಲಕ ಮಂಗಳೂರಿಗರು ನೆಮ್ಮದಿಯ ಉಸಿರು ಬಿಡುವಂತೆ ಮಾಡಿದರು.
ಇದೀಗ ಬಾಂಬ್ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಒಟ್ಟಿನಲ್ಲಿ ಇಂದು ಬೆಳಿಗ್ಗೆಯಿಂದ ಕರಾವಳಿಯ ಜನತೆಯಲ್ಲಿ ಭೀತಿ ಮೂಡಿಸಿದ್ದ ಸ್ಪೋಟಕ ಇದ್ದ ಅನಾಥ ಬ್ಯಾಗ್ ಪ್ರಕರಣಕ್ಕೆ ಒಂದು ಹಂತದ ಮುಕ್ತಿ ಸಿಕ್ಕಿದಂತಾಗಿದೆ.
ಆದರೆ ಇದನ್ನು ವಿಮಾನ ನಿಲ್ದಾಣದಲ್ಲಿ ಇರಿಸಿಹೋದವರು ಯಾರು ಎಂಬ ಬಗ್ಗೆ ಮಾತ್ರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶಂಕಿತ ವ್ಯಕ್ತಿಯ ಫೊಟೋವನ್ನು ಬಿಡುಗಡೆಗೊಳಿಸಿರುವ ಮಂಗಳೂರು ನಗರ ಪೊಲೀಸರು ಆತನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದಾರೆ.