ಸ್ಮಾರ್ಟ್ ರಸ್ತೆ ನಿರ್ಮಿಸಿ: ಶಶಿಕಾಂತ್ ಸೆಂಥಿಲ್
Team Udayavani, May 10, 2019, 6:00 AM IST
ಮಹಾನಗರ: ಸ್ಮಾರ್ಟ್ ಸಿಟಿ ಯೋಜನೆಯಡಿ ಏಳು ಪ್ಯಾಕೇಜ್ಗಳಲ್ಲಿ ನಗರದ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯ ಜತೆಗೆ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಿ; ಅಧಿಕಾರಿಗಳು ಈ ನಿಟ್ಟಿನಲ್ಲಿ ವಿನೂತನವಾಗಿ ಚಿಂತಿಸಿ ಕಾರ್ಯಾನುಷ್ಠಾನ ಮಾಡಿ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಗಳನ್ನು ನಿರ್ಮಿಸುವಾಗ ವಿನೂತನವಾಗಿ ಚಿಂತಿಸಿ; ಮತ್ತೆ ವಿವಿಧ ಇಲಾಖೆಗಳ ಅಧಿಕಾ ರಿಗಳು ರಸ್ತೆ ನಿರ್ಮಾಣದ ಬಳಿಕ ಅಗೆದು ನಿರ್ಮಾಣಕ್ಕೆ ಹಿನ್ನಡೆಯನ್ನು ಮಾಡದೆ ಸಮಗ್ರ ಅಭಿವೃದ್ಧಿಯ ಜತೆಗೆ ನಗರಾಭಿವೃದ್ಧಿಗೆ ನಿಮ್ಮ ಕೊಡುಗೆಯನ್ನು ನೀಡಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ನಿರ್ಮಾಣದ ಬಳಿಕ ರಸ್ತೆಗಳನ್ನು ಅಗೆಯಲು ಅವಕಾಶ ನೀಡದಿರಿ; ಮುನ್ನವೇ ಮೆಸ್ಕಾಂ, ಕೆಯುಐಡಿಎಫ್ಸಿ ಮತ್ತು ಕೆಪಿಟಿಸಿಎಲ್, ನೀರು ಸರಬರಾಜು, ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನಿರ್ಮಾಣಗೊಳ್ಳುವ ಪ್ರದೇಶಗಳಲ್ಲಿ ತಮ್ಮ ಇಲಾಖಾ ವ್ಯಾಪ್ತಿಯ ಕಾಮಗಾರಿಗಳಿದ್ದರೆ ಮೊದಲೇ ಪರಿಶೀಲಿಸಿ, ಸ್ಮಾರ್ಟ್ ಸಿಟಿ ಲಿ.ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಗ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಒಂದೇ ಕಾಮಗಾರಿಯನ್ನು ವಿವಿಧ ಸಂಸ್ಥೆಗಳು ಹಲವು ಬಾರಿ ಮಾಡುವುದು; ಕಾಮಗಾರಿ ಮುಗಿದ ಬಳಿಕ ಮತ್ತೆ ಅಗೆಯುವುದಕ್ಕೆ ಅವಕಾಶ ನೀಡದೆ ಸಮ ನ್ವಯದಿಂದ ಕರ್ತವ್ಯ ನಿರ್ವಹಿಸಿ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳುವ ರಸ್ತೆಗಳು ಜನಸ್ನೇಹಿ ಯಾಗಿರ ಬೇಕೇ ಹೊರತು ವಾಹನ ಸ್ನೇಹಿ ಆಗಿರಬಾರದು; ಫುಟ್ಪಾತ್ಗಳಲ್ಲಿ ಪಾರ್ಕಿಂ ಗ್ಗೆ ಅವಕಾಶ ನೀಡಬಾರದು. ಪಾದಚಾರಿ ಸುರಕ್ಷೆಗೆ ಆದ್ಯತೆ ನೀಡಬೇಕೆಂದರು.
ಯಾವ ರಸ್ತೆಗಳಲ್ಲಿ ನಿರ್ಮಾಣಕ್ಕೆ ಮುನ್ನ ಬಿಎಸ್ಎನ್ಎಲ್, ಮೆಸ್ಕಾಂ ಎಂಜಿನಿ ಯರ್ಗಳು ತಮ್ಮ ಕೇಬಲ್ಗಳನ್ನು ಅಳವಡಿಸಲಿದ್ದಾರೆ ಎಂಬ ಮಾಹಿತಿಯನ್ನು ಕೆಎಂಝಡ್ ಫಾರ್ಮಾಟ್ನಲ್ಲಿ ಸಲ್ಲಿಸಿ ಎಂದು ಸೂಚಿಸಿದರು.
ವರದಿ ನೀಡಿ
ಪಾಲಿಕೆ ವತಿಯಿಂದ ಮೇ ಅಂತ್ಯದೊಳಗೆ ಸಂಪೂರ್ಣಗೊಳಿಸುವ ರಸ್ತೆ ಕಾಮಗಾರಿಗಳನ್ನು ಸಮಯ ಮಿತಿಯೊಳಗೆ ಮುಗಿಸಿ, ಮುಂದಿನ ಸ್ಮಾರ್ಟ್ ಸಿಟಿ ಸಭೆಗಿಂತ ಮುಂಚಿತವಾಗಿ ಅಂತರ್ ಇಲಾಖೆ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ವರದಿ ನೀಡಿ ಎಂದು ಸಲಹೆ ಮಾಡಿದರು.
ಕಾಮಗಾರಿ ಪೂರ್ಣಗೊಳಿಸಿ
ಪಾಲಿಕೆ ಅಭಿವೃದ್ಧಿಪಡಿಸಿದ, ಪಡಿಸುತ್ತಿರುವ ಕೆಲಸಗಳ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು, ಮಂಗಳಾದೇವಿ ರಸ್ತೆ, ಭವಂತಿ ರಸ್ತೆಯಲ್ಲಿರುವ ಬಾಕಿ ಇರಿಸಿ ರುವ ಕಾಮಗಾರಿಯನ್ನು ಟಿಡಿಆರ್ ಮೂಲಕ ಅಥವಾ ಮಾತುಕತೆ ಮೂಲಕ ಬಗೆಹರಿಸಿ ಸಂಪೂರ್ಣಗೊಳಿಸಲು ಸೂಚನೆ ನೀಡಿದರು. ಕಂಕನಾಡಿ ಮಾರ್ಕೆಟ್ ಬಳಿ ಬಸ್ ನಿಲ್ಲಿಸುವ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಆರ್ಟಿಒ ಮೂಲಕ ಬಗೆಹರಿಸಲು ಮನಪಾ ಅಧಿಕಾರಿಗಳಿಗೆ ಸೂಚಿಸಿದರು.