ಬುಲೆಟ್ ಟ್ಯಾಂಕರ್ನಿಂದ ಅನಿಲ ಸೋರಿಕೆ: ವ್ಯಾಪಕ ಕಾರ್ಯಾಚರಣೆ
Team Udayavani, Mar 31, 2017, 9:37 AM IST
ಸುರತ್ಕಲ್: ಇಲ್ಲಿನ ಬಾಳ ಗ್ರಾಮದಲ್ಲಿರುವ ಎಚ್ಪಿಸಿಎಲ್ ಸ್ಥಾವರದ ಮುಂಭಾಗ ಗುರುವಾರ ರಾತ್ರಿ ಅನಿಲ ತುಂಬಿಕೊಂಡು ನಿಂತಿದ್ದ ಬುಲೆಟ್ ಟ್ಯಾಂಕರ್ ಒಂದರಿಂದ ಅನಿಲ ಸೋರಿಕೆ ಉಂಟಾಗಿದ್ದು ತೈಲ ಕಂಪನಿಗಳ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ.
ಎಚ್ಪಿಸಿಎಲ್ ಘಟಕದಿಂದ ಗ್ಯಾಸ್ ತುಂಬಿಕೊಂಡು ಬಂದ ಬುಲೆಟ್ ಟ್ಯಾಂಕರ್ ಕಾನಾ ಎಚ್ಪಿಸಿಎಲ್ ಸ್ಥಾವರದ ಹೊರ ಭಾಗದಲ್ಲಿ ಗುರುವಾರ ಸಂಜೆ ನಿಲ್ಲಿಸಲಾಗಿತ್ತು. ಸಂಜೆ 7.15ರ ಸುಮಾರಿಗೆ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯ ವಾಸನೆ ಗಮನಿಸಿದ ಚಾಲಕರು ತಪಾಸಣೆ ಆರಂಭಿಸಿದರು. ಈ ಹಂತದಲ್ಲಿ ಒಂದು ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುವುದು ಗೊತ್ತಾಯಿತು. ತತ್ಕ್ಷಣವೇ ಎಚ್ಚೆತ್ತುಕೊಂಡ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲಿಂದ ಕೂಡಲೇ ಎಂಆರ್ಪಿಎಲ್, ಎಚ್ಪಿಸಿಎಲ್, ಟೋಟಲ್ ಗ್ಯಾಸ್ ಘಟಕಗಳಿಗೆ ತುರ್ತು ಸಂದೇಶ ನೀಡಿ ಕಾರ್ಯಾಚರಣೆಗೆ ಧಾವಿಸುವಂತೆ ಸೂಚಿಸಲಾಯಿತು.
ಎಚ್ಪಿಸಿಎಲ್ನ ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಗೋವಾಗೆ ತೆರಳಿರುವುದಧಿರಿಂದ ತೋಕೂರು ಪ್ರದೇಶದಲ್ಲಿರುವ ಟೋಟಲ್ ಗ್ಯಾಸ್ ಕಂಪೆನಿಯಿಂದ ವಾಹನ ತರಿಸಿ ಖಾಲಿ ಟ್ಯಾಂಕರ್ಗೆ ಅನಿಲ ವರ್ಗಾಯಿಸುವ ಕೆಲಸ ಆರಂಭಿಸಲಾಯಿತು. ರಾತ್ರಿ ವೇಳೆಗೆ ಬಹುತೇಕ ಗ್ಯಾಸ್ ಖಾಲಿ ಮಾಡಲಾಯಿತು. ಈ ವಾಹನ ಇದ್ದುದರಿಂದ ಸಂಭಾವ್ಯ ದೊಡ್ಡ ಅನಾಹುತ ತಪ್ಪಿತು.
ವಿದ್ಯುತ್ ಕಡಿತ, ಸಾರ್ವಜನಿಕರಿಗೆ ಎಚ್ಚರಿಕೆ
ಗ್ಯಾಸ್ ಸೋರಿಕೆ ಸಂದರ್ಭ ಪರಿಸರದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಯಿತಲ್ಲದೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಯಿತು ಮಾತ್ರವಲ್ಲ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಲು ಮನವಿ ಮಾಡಲಾಯಿತು. ಹತ್ತಿರದ ಮನೆಗಳಲ್ಲಿ ಬೆಂಕಿ ಉರಿಸದಂತೆಯೂ ಸೂಚಿಸಲಾಯಿತು.
ಇಕ್ಕಟ್ಟಿನ ಪ್ರದೇಶ
ಟ್ಯಾಂಕರ್ಗಳಿಗೆ ರಾತ್ರಿ ಸಂಚಾರ ನಿಷೇಧ ಇರುವುದರಿಂದ ಸಾಮಾನ್ಯವಾಗಿ ಇಲ್ಲಿನ ಟ್ಯಾಂಕರ್ ಯಾರ್ಡ್ಗಳಲ್ಲಿ ಅನಿಲ ತುಂಬಿಸಿಕೊಂಡ ವಾಹನಗಳು ನಿಲ್ಲುತ್ತವೆ. ಆದರೆ ಕೆಲವು ಕಡೆ ಅಗ್ನಿ ಶಾಮಕ ವಾಹನ ಹೋಗಲು ಸರಿಯಾದ ದಾರಿಯಿಲ್ಲದ ಯಾರ್ಡ್ಗಳಿದ್ದು ಗುರುವಾರ ಇದು ಹಿರಿಯ ಅಧಿಕಾರಿಗಳ ಗಮನಕ್ಕೂ ಬಂತು.
18 ಟನ್, 13 ಟ್ಯಾಂಕರ್
ಗುರುವಾರ ಸೋರಿಕೆಯಾದ ಟ್ಯಾಂಕರ್ನಲ್ಲಿ 18 ಟನ್ ಅನಿಲವಿತ್ತು. ಅದಕ್ಕಿಂತಲೂ ಹೆಚ್ಚಾಗಿ ಈ ಟ್ಯಾಂಕರ್ನ ಹತ್ತಿರದಲ್ಲಿಯೇ ಗ್ಯಾಸ್ ತುಂಬಿದ್ದ 13 ಟ್ಯಾಂಕರ್ಗಳಿದ್ದವು. ಆದುದರಿಂದ ತುರ್ತು ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಇದರಿಂದ ಊಹಿಸಲು ಅಸಾಧ್ಯವಾದ ಅನಾಹುತವನ್ನು ತಪ್ಪಿಸಿದಂತಾಗಿದೆ. ನಿರಂತರ ಕಾರ್ಯಾಚರಣೆಯಲ್ಲಿ 5 ಅಗ್ನಿಶಾಮಕ ವಾಹನಗಳು ಹಾಗೂ ಸಿಬಂದಿ ಭಾಗವಹಿಸಿದ್ದರು. ರಾತ್ರಿ 8 ಗಂಟೆಯಿಂದ ಆರಂಭಗೊಂಡ ಕಾರ್ಯಾಚರಣೆ ತಡರಾತ್ರಿವರೆಗೂ ಮುಂದುವರಿಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!