ಬಸ್ ಮೆಟ್ಟಿಲು ಎತ್ತರ 52 ಸೆಂ.ಮೀ. ಮೀರದಿರಲಿ: ಡಿ.ಸಿ.
Team Udayavani, Aug 1, 2017, 11:53 AM IST
ಮಂಗಳೂರು: ನಗರ ಹಾಗೂ ಗ್ರಾಮಾಂತರ ಸಂಚಾರ ಬಸ್ಗಳ ಮೆಟ್ಟಿಲುಗಳ ಎತ್ತರ ನಿಯಮಗಳ ಪ್ರಕಾರ 52 ಸೆಂ.ಮೀ.ಯೊಳಗೆ ಕಡ್ಡಾಯವಾಗಿರಬೇಕು ಎಂದು ಬಸ್ ಮಾಲಕರಿಗೆ ಸೂಚಿಸಿರುವ ದ.ಕ. ಆರ್ಟಿಎ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ| ಜಗದೀಶ್ ಅವರು ಈ ಮಿತಿಗಿಂತ ಎತ್ತರ ಇರುವ ಮೆಟ್ಟಿಲುಗಳನ್ನು ನಿಗದಿತ ಪ್ರಮಾಣದೊಳಗೆ ಇಳಿಸಲು ಗಡುವು ವಿಧಿಸಿ ಆದೇಶಿಸಿದ್ದಾರೆ.
ಬಸ್ಗಳಲ್ಲಿ ಮೆಟ್ಟಿಲುಗಳ ಎತ್ತರ ಹೆಚ್ಚಾಗಿರುವುದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಬಂದಿರುವ ದೂರು ಗಳಿಗೆ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೋಮವಾರ ಜರಗಿದ ಆರ್ಟಿಎ ಸಭೆಯಲ್ಲಿ ಸಾರ್ವಜನಿಕ ಅಹವಾಲು ಹಾಗೂ ಕುಂದುಕೊರತೆ ಆಲಿಕೆ ವೇಳೆ ಪ್ರತಿ ಕ್ರಿಯಿಸಿ ಈ ಆದೇಶ ನೀಡಿರುವ ಜಿಲ್ಲಾಧಿ ಕಾರಿಯವರು ನಗರ ಪ್ರದೇಶಗಳ ಬಸ್ಗಳ ಮೆಟ್ಟಿಲು ನಿಗದಿತ 52 ಸೆಂ.ಮೀ.ಗಿಂತ ಎತ್ತರವಿದ್ದರೆ ಅವುಗಳನ್ನು ಆ. 31ರೊಳಗೆ ಹಾಗೂ ಗ್ರಾಮಾಂತರ ಪ್ರದೇಶಗಳ ಬಸ್ಗಳಲ್ಲಿ ಸೆ. 30ರೊಳಗೆ ನಿಗದಿತ ಮಿತಿಯೊಳಗೆ ಇರುವಂತೆ ವ್ಯವಸ್ಥೆಗೊಳಿಸಲು ಬಸ್ಗಳ ಮಾಲಕರಿಗೆ ಸೂಚಿಸಿದರು. ಇದು ಖಾಸಗಿ ಬಸ್ಗಳು ಹಾಗೂ ಕೆಎಸ್ಆರ್ಟಿಸಿ ಸಂಸ್ಥೆಗಳೆರಡಕ್ಕೂ ಅನ್ವಯಿಸುತ್ತದೆ. ನಿಗದಿ ಪಡಿಸಿದ ಅವಧಿಯೊಳಗೆ ಇದನ್ನು ಅನು ಷ್ಠಾನ ಗೊಳಿಸಿ ಈ ಬಗ್ಗೆ ಪತ್ರವನ್ನು ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ನಿಯಮ ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದವರು ಹೇಳಿದರು.
ಮಂಗಳೂರು-ಮೂಡಬಿದಿರೆ-ಕಾರ್ಕಳ: ಸರಕಾರಿ ಬಸ್ ಸಂಚಾರ ಸಮೀಕ್ಷೆ
ಮಂಗಳೂರು – ಮೂಡಬಿದಿರೆ – ಕಾರ್ಕಳ ಮಾರ್ಗದಲ್ಲಿ ಸರಕಾರಿ ಬಸ್ಗಳ ಸಂಚಾರ ಆರಂಭಿಸಬೇಕು ಎಂದು ಸಾರ್ವಜನಿಕರಿಂದ ಬಂದಿರುವ ಬೇಡಿಕೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು, ಈ ಮಾರ್ಗದಲ್ಲಿ ಬಸ್ ಪರವಾನಿಗೆ ಕೋರಿ ಕೆಎಸ್ ಆರ್ಟಿಸಿಯಿಂದ 2010ರಿಂದ ಈವರೆಗೆ ಸಲ್ಲಿ ಸಿರುವ 14 ಅರ್ಜಿಗಳು ಕ್ರಮಕ್ಕೆ ಬಾಕಿಯುಳಿದಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳು 1 ತಿಂಗಳೊಳಗೆ ಸಮೀಕ್ಷೆ ನಡೆಸಿ ಮುಂದಿನ ಆರ್ಟಿಎ ಸಭೆಗೆ ಮಂಡಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು – ಪೊಳಲಿ ಸರಕಾರಿ ಬಸ್ಗೆ ತಾತ್ಕಾಲಿಕ ಪರವಾನಿಗೆಗೆ ಕ್ರಮ
ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್ ಓಡಿಸಬೇಕು ಎಂಬ ಬೇಡಿಕೆ ಹಲವಾರು ಸಮಯದಿಂದ ಕೇಳಿಬಂದಿದೆ. ಡಿಎಂ ನೋಟಿಫಿಕೇಶನ್ ಪ್ರಕಾರ ಸ್ಟೇಟ್ ಬ್ಯಾಂಕಿನಿಂದ ಇದಕ್ಕೆ ಪರವಾನಿಗೆ ನೀಡಲು ಆಗುವುದಿಲ್ಲ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪೊಳಲಿಗೆ ಸಂಚಾರ ನಡೆಸಬಹುದಾಗಿದೆ. ಈ ನೆಲೆಯಲ್ಲಿ ತಾತ್ಕಾಲಿಕ ಪರವಾನಿಗೆ ಕುರಿತಂತೆ ಕ್ರಮವಹಿಸಿ ಮುಂದಕ್ಕೆ ಪಕ್ಕಾ ಪರವಾನಿಗೆ ಬಗ್ಗೆ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ನರ್ಮ್ ಬಸ್ಗಳ ಪರವಾನಿಗೆ ಕುರಿತಂತೆ ನ್ಯಾಯಾಲಯದಲ್ಲಿ ದಾವೆಗಳಿರುವುದರಿಂದ ಅವುಗಳ ಬಗ್ಗೆ ಇಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಸುಧೀರ್ ರೆಡ್ಡಿ, ಮಂಗಳೂರು ಆರ್ಟಿಒ ಜಿ.ಎಸ್. ಹೆಗಡೆ ಅವರು ಉಪಸ್ಥಿತರಿದ್ದರು.
ಟಿಕೇಟು ನೀಡದಿದ್ದರೆ ಕ್ರಮ
ಸಿಟಿಬಸ್ಗಳಲ್ಲಿ ಪ್ರಯಾಣಿಕರಿಗೆ ಟಿಕೇಟು ನೀಡದಿರುವ ಬಗ್ಗೆ ದೂರುಗಳು ವ್ಯಕ್ತವಾಗಿವೆ. ನಿರ್ವಾಹಕರು ಟಿಕೇಟು ಮೆಷಿನ್ ಬಳಸಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಟಿಕೇಟು ನೀಡಬೇಕು. ಬಸ್ಗಳಲ್ಲಿ ಹೆಚ್ಚುವರಿಯಾಗಿ ಒಂದು ಟಿಕೇಟು ಮೆಷಿನ್ ಇಟ್ಟುಕೊಳ್ಳಬೇಕು ಎಂದು ಬಸ್ ಮಾಲಕರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು ಟಿಕೇಟು ನೀಡದ ನಿರ್ವಾಹಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಆರ್ಟಿಎ ಸೂಚನೆಗಳು
ನಿರ್ವಾಹಕರು, ಚಾಲಕರಿಗೆ ಸಮವಸ್ತ್ರ ನಿಯಮ ಕಡ್ಡಾಯ ಪಾಲನೆ
ಬಸ್ಗಳಲ್ಲಿ ಮಹಿಳೆಯರಿಗೆ ಮುಂದಿನ ಬಾಗಿಲು ಮೀಸಲು ನಿಯಮ ಕಟ್ಟುನಿಟ್ಟಿನ ಪಾಲನೆ
ಬಸ್ಬೇಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸುವುದು
ಹೊರವಲಯಗಳಿಗೆ ಪರವಾನಿಗೆ ಪಡೆದಿರುವ ಬಸ್ಗಳಲ್ಲಿ ಅಂತಿಮ ನಿಲುಗಡೆ ಪ್ರದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು
ಆಟೋರಿಕ್ಷಾಗಳಲ್ಲಿ ಮೀಟರ್ ಕಡ್ಡಾಯವಾಗಿ ಹಾಕಬೇಕು