ಭೂಗತ ಕೇಬಲ್ ಇನ್ನೂ ಮುಚ್ಚಿಲ್ಲ
Team Udayavani, Mar 17, 2021, 4:45 AM IST
ಸುಳ್ಯ: ಸುಳ್ಯ ಜ್ಯೋತಿ ವೃತ್ತದಿಂದಾಗಿ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆಯ ಬದಿ ಕಳೆದ 2 ತಿಂಗಳ ಹಿಂದೆ ಮೆಸ್ಕಾಂನಿಂದ ಭೂಗತ ಕೇಬಲ್ ಅಳವಡಿಸಲಾಗಿತ್ತು. ತಿಂಗಳು 2 ಕಳೆದರೂ ಸರಿಯಾಗಿ ಗುಂಡಿಯನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಸ್ಕಾಂ ಕೇಬಲ್ ಅಳವಡಿಕೆಯನ್ನು ವೈಜ್ಞಾನಿಕವಾಗಿ ಮಾಡಿರಲಿಲ್ಲ ಎಂಬ ಆರೋಪ ವ್ಯಕ್ತ ವಾಗಿತ್ತು. ಶಾಲಾ ಮಕ್ಕಳು ಹೆಚ್ಚಾಗಿ ಸಂಚರಿಸುವ ರಸ್ತೆ, ನೀರಿನ ಪೈಪ್ಲೈನ್ ಅದೇ ಗುಂಡಿ ಯಲ್ಲಿ ಹೋಗುವುದರಿಂದ ಅಪಾಯ ಸಂಭವಿಸಬಹುದು ಎಂದು ಎಚ್ಚರಿಸಿ ಪ್ರತಿಭಟನೆಯೂ ನಡೆದಿತ್ತು.
ಇಷ್ಟು ಪ್ರಮಾಣದ ಒತ್ತಡ ಹೇರಿದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ 20 ಮೀಟರ್ ಉದ್ದದ ಗುಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಈ ರಸ್ತೆಯನ್ನು ನೆಚ್ಚಿಕೊಂಡು ಸುಮಾರು 50 ಕ್ಕೂ ಹೆಚ್ಚು ಮನೆಗಳಿವೆ. ಮಣ್ಣು ಕೂಡ ರಸ್ತೆಗೆ ತಾಗಿಯೇ ಗುಡ್ಡ ಹಾಕಿರುವುದರಿಂದ ವಾಹನಗಳ ಸಂಚಾರವೂ ಕಷ್ಟವಾಗಿದೆ.
ಎಚ್ಚರಿಸಲಾಗಿದೆ
ಗುತ್ತಿಗೆದಾರರಿಗೆ ಈ ಬಗ್ಗೆ ಎಚ್ಚರಿಸಲಾಗಿದೆ. ಶೀಘ್ರವೇ ಈ ಕಾರ್ಯ ಮುಗಿಸಿ ಜನರ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುವುದು.
-ಹರೀಶ್ ನಾಯ್ಕ, ಸುಳ್ಯ ಮೆಸ್ಕಾಂ ಎ.ಇ.