ಮಕ್ಕಳ ಸುರಕ್ಷೆ ಮಾಹಿತಿ ಕಾರ್ಯಾಗಾರ
Team Udayavani, Dec 10, 2017, 12:46 PM IST
ಹರೇಕಳ: ಲಯನ್ಸ್ ಕ್ಲಬ್ ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ಶ್ರೀರಾಮ ಕೃಷ್ಣ ಪ್ರೌಢಶಾಲೆ ಹರೇಕಳದಲ್ಲಿ ‘ಹದಿಹರೆಯದ ಸಮಸ್ಯೆಗಳು ಹಾಗೂ ಮಕ್ಕಳ ಸುರಕ್ಷೆ’ ಮಾಹಿತಿ ಕಾರ್ಯಾಗಾರವನ್ನು ಖ್ಯಾತ ವೈದ್ಯ ಡಾ| ರಮೇಶ್ ಶೆಟ್ಟಿ ಮುಡಿಪು ಉದ್ಘಾಟಿಸಿದರು.
ರಾಜ್ಯ ತರಬೇತುದಾರ ವಿನಯ್ ಮಾತನಾಡಿ, ಮಕ್ಕಳು ಪ್ರೌಢಾವಸ್ಥೆಯಲ್ಲಿ ಅನುಭವಿಸುವ ಆಂತರಿಕ ಸಮಸ್ಯೆಗಳು ನಿಜವಾದ ಸಮಸ್ಯೆಗಳಲ್ಲ, ಬದಲಾಗಿ ಅದೊಂದು ದೇಹದ ನೈಜ ಚಟುವಟಿಕೆಗಳಾಗಿರುತ್ತದೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಅಲ್ಲದೇ ಕೆಲವೊಂದು ಪರಿಹಾರ ಕಾರ್ಯಗಳನ್ನು ಸೂಚಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಸೂಕ್ತವಾದ ಮಾರ್ಗದರ್ಶನ ನೀಡಿ ಈ ರೀತಿಯ ಸಮಸ್ಯೆಗಳೊಂದಿಗೆ ಸ್ಪಂದಿಸುವುದು ಹಿರಿಯರ ಜವಾಬ್ದಾರಿಯಾಗಿದೆಯೆಂದರು. ಇದು ಎಲ್ಲ ಶಾಲೆಗಳಲ್ಲಿ ನಡೆಯಬೇಕಾದ ಉಪಯುಕ್ತ ಕಾರ್ಯಕ್ರಮವಾಗಿದೆ. ಕಾರ್ಯಾಗಾರದ ಸಭಾಧ್ಯಕ್ಷತೆಯನ್ನು ಕೊಣಾಜೆ ವಿಜಯ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಆತ್ಮಾರಾಮ ಶೆಟ್ಟಿ ವಹಿಸಿದ್ದರು. ಲಯನೆಸ್ ಅಧ್ಯಕ್ಷೆ ಅನಸೂಯ ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮೋಹಿನಿ ವಂದಿಸಿದರು. ಕೃಷ್ಣ ಶಾಸ್ತ್ರೀ ನಿರೂಪಿಸಿದರು.