ಹಕ್ಕು ಬದ್ದ ಸೌಕರ್ಯ; ವಂಚಿತರಿಗೆ ತಲುಪಿಸಲು ಗ್ರಾಮ ವಾಸ್ತವ್ಯ
Team Udayavani, Apr 17, 2022, 10:12 AM IST
ಮೂಡುಬಿದಿರೆ: ತಮ್ಮ ಹಕ್ಕುಬದ್ಧ ಸೌಕರ್ಯ ಗಳನ್ನು ಪಡೆಯಲು ಇನ್ನೂ ಸಾಧ್ಯವಾಗಿಲ್ಲದ ಸ್ಥಿತಿ ನಮ್ಮ ನಡುವೆ ಇದೆ. ಇದನ್ನು ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಹಳಷ್ಟು ಸಹಕಾರಿಯಾಗಿದೆ’ ಎಂದು ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ಹೇಳಿದರು.
ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ‘ಶಿರ್ತಾಡಿ ಗ್ರಾಮ ವಾಸ್ತವ್ಯ’ ದ ಸಭಾ ಕಾರ್ಯ ಕ್ರಮದಲ್ಲಿ ಅವರು ಗ್ರಾಮ ವಾಸ್ತವ್ಯದ ಮೂಲಕ ಜನರ ಮೂಲಭೂತ ಹಕ್ಕುಗಳು, ಸೌಕರ್ಯಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದ್ದು, ಜನರು ಇದರ ಪ್ರಯೋಜನವನ್ನು ಪಡೆಯಬೇಕು; ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳೂ ಸೂಕ್ತವಾಗಿ ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು. ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ, ಜನರ ಸಮಸ್ಯೆಗಳನ್ನು ಪರಿಶೀಲಿಸಲು, ಪರಿಹಾರ ಒದಗಿಸಲು ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿ ದ್ದರು. ತಹಶೀಲ್ದಾರರು ಶಿರ್ತಾಡಿಯ ಮಕ್ಕಿ, ಕಜೆ, ಮೂಡು ಕೊಣಾಜೆ ಗ್ರಾಮದ ಚೀಮುಳ್ಳಗುಡ್ಡೆ, ಪಡುಕೊಣಾಜೆ ಗ್ರಾಮದ ಕಂಚರ್ಲಗುಡ್ಡೆ, ಹೌದಾಲ್ನ ಬಿಲ್ಲುಗುಡ್ಡೆ ಮೊದಲಾದ ಕಡೆಗೆ ಸಂದರ್ಶನವಿತ್ತು ಜನರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.