ನದಿ ಸ್ವಚ್ಛತೆ ಅತ್ಯಂತ ಪುಣ್ಯದ ಕಾರ್ಯ: ಡಾ| ಹೆಗ್ಗಡೆ
Team Udayavani, Jun 6, 2018, 2:25 AM IST
ಬೆಳ್ತಂಗಡಿ: ನೇತ್ರಾವತಿ ನದಿ ಸ್ವಚ್ಛತಾ ಅಭಿಯಾನದೊಂದಿಗೆ ಭಕ್ತರಿಗೆ ಉತ್ತಮ ಸಂಸ್ಕಾರ ಮತ್ತು ಜ್ಞಾನದಾನವನ್ನು ಚಕ್ರವರ್ತಿ ಸೂಲಿಬೆಲೆ ಹಾಗೂ ತಂಡದ ಎಲ್ಲ ಕಾರ್ಯಕರ್ತರು ನೀಡಿದ್ದಾರೆ. ದೃಢ ಸಂಕಲ್ಪದಿಂದ ಹಾಗೂ ಶ್ರದ್ಧಾ-ಭಕ್ತಿಯಿಂದ ಮಾಡಿದ ನದಿ ಸ್ವಚ್ಛತಾ ಕಾರ್ಯ ಅತ್ಯಂತ ಪುಣ್ಯದ ಕಾರ್ಯವಾಗಿದ್ದು ಧರ್ಮಸ್ಥಳಕ್ಕೆ ದೊಡ್ಡ ಸೇವೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು. ಅವರು ಧರ್ಮಸ್ಥಳದ ಬೀಡಿನಲ್ಲಿ ನೇತ್ರಾವತಿ ನದಿ ಸ್ನಾನಘಟ್ಟ ಬಳಿ ನೇತ್ರಾವತಿ ನದಿಯ ಸ್ವಚ್ಛತಾ ಅಭಿಯಾನ ಆಯೋಜಿಸಿದ್ದ ಯುವಾ ಬ್ರಿಗೇಡ್ ಕಾರ್ಯಕರ್ತರ ಸೇವೆ ಶ್ಲಾಘಿಸಿ ಅಭಿನಂದಿಸಿ ಮಾತನಾಡಿದರು.
ಅಭಯದಾನ ಸರ್ವದಾನಗಳಲ್ಲಿ ಶ್ರೇಷ್ಠವಾಗಿದೆ. ಧರ್ಮಸ್ಥಳ ಅಭಯದಾನ ನೀಡುವ ಪವಿತ್ರ ಕ್ಷೇತ್ರವಾಗಿದೆ. ವ್ಯವಹಾರದಲ್ಲಿ ಸೋಲು, ಕಷ್ಟ, ನಷ್ಟ ಉಂಟಾದಾಗ, ಕೌಟುಂಬಿಕ ಕಲಹವಾದಾಗ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ಉಂಟಾದಾಗ, ನೊಂದು, ಬೆಂದು, ಭಯ, ಭೀತಿಯಿಂದ ಧರ್ಮಸ್ಥಳಕ್ಕೆ ಬಂದ ಭಕ್ತರಿಗೆ ಹೆದರಬೇಡಿ ಎಂಬ ಅಭಯದಾನ ನೀಡಲಾಗುತ್ತದೆ. ಮನೆಯಲ್ಲಿ ಹಿರಿಯರು ನೊಂದು ಕಣ್ಣೀರು ಸುರಿಸಿದರೂ ಅದು ಶಾಪವಾಗಿ ಪರಿಣಮಿಸುತ್ತದೆ. ಪೂರ್ವಜರ ಶಾಪ ದೋಷ ಪರಿಹಾರ, ವಾಕ್ ದೋಷ ನಿವೃತ್ತಿ, ಕೌಟುಂಬಿಕ ಕಲಹ, ಮನಸ್ತಾಪ ನಿವಾರಣೆಗಾಗಿ ಭಕ್ತರು ಪರಿಹಾರ ಕೋರಿ ಧರ್ಮಸ್ಥಳಕ್ಕೆ ಬರುತ್ತಾರೆ. ಅವರಿಗೆ ಅಭಯ ನೀಡಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ, ಆಶೀರ್ವಾದ ಪಡೆದು, ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸುವಂತೆ ತಿಳಿಸಲಾಗುತ್ತದೆ ಎಂದರು.
ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಚತುರ್ವಿಧ ದಾನ ಪರಂಪರೆ, ಶಿಸ್ತು, ಸ್ವಚ್ಛತೆ, ದಕ್ಷತೆ ಮತ್ತು ಸೇವಾ ಕಾರ್ಯ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಧರ್ಮಸ್ಥಳ ಎಲ್ಲ ದೇವಸ್ಥಾನಗಳಿಗೆ ಮಾದರಿಯಾಗಿದೆ. ವೀರೇಂದ್ರ ಹೆಗ್ಗಡೆಯವರ ಪ್ರೀತಿ ಮತ್ತು ಆಶೀರ್ವಾದ ಯುವಾ ಬ್ರಿಗೇಡ್ ಕಾರ್ಯಕರ್ತರ ಮೇಲೆ ಇರಲಿ ಎಂದರು. ಹೆಗ್ಗಡೆಯವರು ಚಕ್ರವರ್ತಿ ಸೂಲಿಬೆಲೆ ಅವರನ್ನು ಗೌರವಿಸಿ ಅಭಿನಂದಿಸಿದರು.
ಶ್ರದ್ಧಾ – ಭಕ್ತಿ
ಧರ್ಮಸ್ಥಳದಲ್ಲಿ ವಿಶಿಷ್ಟ ಶಿಸ್ತು, ಸಂಪ್ರದಾಯ ಮತ್ತು ಪರಂಪರೆ ಇದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಿದೆ. ಧರ್ಮಸ್ಥಳದಿಂದ ಒಂದು ಕಲ್ಲನ್ನೂ ಹೊರಗೆ ತೆಗೆದುಕೊಂಡು ಹೋಗಬಾರದು ಎಂಬ ಸಂಪ್ರದಾಯವಿದೆ. ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಶ್ರದ್ಧಾ – ಭಕ್ತಿ ಹಾಗೂ ಅಣ್ಣಪ್ಪ ಸ್ವಾಮಿಯ ಭಯದಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದು ಹೆಗ್ಗಡೆ ಅವರು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ