ಸೇತುವೆ ಇಲ್ಲದೆ ಮುಚ್ಚುವಂತಾದ ಮೊಗ್ರಶಾಲೆ, ಆರೋಗ್ಯ ಕೇಂದ್ರ
Team Udayavani, Dec 29, 2018, 4:27 AM IST
ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಸಾಂಸ್ಕೃತಿಕ ಸಾಧನೆಯಿಂದ ಗುರುತಿಸಿಕೊಂಡಿದೆ. ಸ್ವಾತಂತ್ರ್ಯಪೂರ್ವದಲ್ಲಿ ಕಟ್ಟಲಾಗಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿದೆ. ಈ ಶಾಲೆ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ಇಲ್ಲಿ ವೈದ್ಯಕೀಯ ಸೇವೆ ಒದಗಿಸುವ ಆರೋಗ್ಯ ಉಪಕೇಂದ್ರ ಇದೆಯಾದರೂ ಎಲ್ಲ ಅವಧಿಯಲ್ಲಿ ಅದರ ಸೇವೆಯೂ ಇಲ್ಲಿನವರಿಗೆ ದೊರಕುತಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಈ ಊರಿನ ಹೊಳೆಗೆ ಸೇತುವೆ ಇಲ್ಲದಿರುವುದು ಎಂದು ಗ್ರಾಮಸ್ಥರು ಹೇಳುತ್ತಾರೆ.
ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ, ನಾಗರಿಕರಿಗೆ ಸಂಪರ್ಕ ಕಷ್ಟವಾಗುತ್ತಿದೆ. ಮೊಗ್ರ ಶಾಲೆ ಈ ಗ್ರಾಮದ ಕೇಂದ್ರವೂ ಆಗಿದೆ. ಇಲ್ಲಿ ಆರೋಗ್ಯ ಉಪಕೇಂದ್ರ, ಅಂಗನವಾಡಿ, ಭಜನ ಮಂದಿರ, ಮೊಗ್ರ ದೈವಸ್ಥಾನ ಇದೆ. ಆಟಿ ಕಳಂಜದ ಸಂಪ್ರದಾಯವು ಇಲ್ಲಿ ಈಗಲೂ ಆಚರಣೆಯಲ್ಲಿದೆ.
ಅಘೋಷಿತ ರಜೆ!
ಪ್ರತಿ ವರ್ಷವೂ ಮೊಗ್ರ ಪ್ರದೇಶದ ಏರಣಗುಡ್ಡೆಯಿಂದ ಮಕ್ಕಳು ಮೊಗ್ರ ಸರಕಾರಿ ಶಾಲೆಗೆ ಬರುತ್ತಾರೆ. ಆದರೆ ಈ ಮಕ್ಕಳಿಗೆ ಪ್ರತಿ ವರ್ಷವೂ ಮಳೆಗಾಲದ ಬವಣೆ ಮಾತ್ರ ತಪ್ಪುವುದಿಲ್ಲ. ಮೊಗ್ರ ಹೊಳೆ ತುಂಬಿ ಹರಿದರೆ ಏರಣಗುಡ್ಡೆಯಿಂದ ಮೊಗ್ರ ಶಾಲೆಗೆ ಬರುವ ಮಕ್ಕಳಿಗೆ ಅಘೋಷಿತ ರಜೆ.
ಶಾಲೆಗೆ ತೆರಳಬೇಕಾದರೆ ಈ ಮಕ್ಕಳು ಹೊಳೆ ದಾಟಲೇಬೇಕು. ವಿಪರೀತ ಮಳೆ ಬಂದರೆ ಶಾಲೆಗೆ ಹೋಗಲು ಸಾಧ್ಯವೇ ಇಲ್ಲ. ಮುರಿದು ಬೀಳಲು ಸಿದ್ಧವಾಗಿರುವ ಅಡಿಕೆ ಮರದ ಪಾಲ ಒಂದು ಇದೆ. ಅದರಲ್ಲಿ ಸರ್ಕಸ್ ಮಾಡಿಕೊಂಡು ಹೋಗಬೇಕಿದೆ. ಮಕ್ಕಳು ಭಯದಲ್ಲಿ ಇದರಲ್ಲಿ ನಡೆದಾಡಲು ಕೇಳುವುದಿಲ್ಲ. ಆಯ ತಪ್ಪಿದರೆ ಅಪಾಯವೂ ಖಚಿತ.
ಮುಚ್ಚುವ ಹಂತಕ್ಕೆ
ಸಮಸ್ಯೆಗಳಿರುವ ಕಾರಣದಿಂದ 1943ರಲ್ಲಿ ಪ್ರಾರಂಭವಾದ ಮೊಗ್ರ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಕೊರತೆಯಾಗುತ್ತಲಿದೆ. ಶಾಲೆಯ ಎದುರು ಡಾಮರು ರಸ್ತೆ ಇದೆ. ಆದರೆ ಹೊಳೆಗೆ ಸೇತುವೆಯಾಗದ ಕಾರಣ ರಸ್ತೆಯಾಗಿಯೂ ಪ್ರಯೋಜನ ಇಲ್ಲದಂತಾಗಿದೆ.
ಉಪಯೋಗಕ್ಕಿಲ್ಲ ಉಪ ಕೇಂದ್ರ
ಆರೋಗ್ಯ ಉಪಕೇಂದ್ರ ಕಟ್ಟಡ ಸುಂದರವಾಗಿದೆ. ಆದರೆ ಇಲ್ಲಿ ಹೆಚ್ಚಿನ ಅವಧಿಯಲ್ಲಿ ಸೇವೆ ದೊರಕುತ್ತಿಲ್ಲ. ಆರೋಗ್ಯ ಕಾರ್ಯಕರ್ತೆ ಬೇಸಗೆಯಲ್ಲಿ ವಾರದಲ್ಲಿ ಒಂದು ದಿನ ಲಭ್ಯವಿರುತ್ತಾರೆ. ಮಳೆಗಾಲದಲ್ಲಿ ಅವರೂ ಹತ್ತಿರ ಸುಳಿಯುವುದಿಲ್ಲ. ಅವರು ಬರುವುದಕ್ಕೂ ಹೊಳೆಯೇ ಅಡ್ಡಿ. ಹೀಗಾಗಿ ಆರೋಗ್ಯ ಕೇಂದ್ರ ಬಹುತೇಕ ಉಪಯೋಗಕ್ಕೆ ಸಿಗುತ್ತಿಲ್ಲ. ಇಲ್ಲಿನ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವಂತಹ ಜನಪ್ರತಿನಿಧಿಗಳಿಲ್ಲದೆ ಶಾಲೆ, ಆರೋಗ್ಯ ಕೇಂದ್ರ ನಿರ್ಲಕ್ಷಿತವಾಗಿದ್ದು, ಮುಚ್ಚುವ ಹಂತಕ್ಕೆ ಬಂದು ನಿಂತಿದೆ.
ಭರವಸೆ ನೀಡಿದ್ದರು
2017ರ ಜನವರಿಯಲ್ಲಿ ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿ ಸೇತುವೆ ನಿರ್ಮಾಣದ ಕುರಿತು ಭರವಸೆ ನೀಡಿದ್ದರು. ಅದಾದ ಬಳಿಕ ಅದೇ ವರ್ಷ ಆಗಸ್ಟ್ ತಿಂಗಳಲ್ಲಿ ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮಾಡಲಾಗಿತ್ತು. ಸದ್ಯ ವರ್ಷ ಕಳೆದರೂ ಸೇತುವೆ ಭಾಗ್ಯ ಇಲ್ಲಿಗೆ ಕೂಡಿ ಬಂದಿಲ್ಲ.
ಆಡಳಿತದ ನಿರ್ಲಕ್ಷ್ಯ
ಸಮಸ್ಯೆಯ ಕುರಿತು ಹಲವು ಬಾರಿ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿದೆ. ತಾ.ಪಂ. ಸಭೆ, ಕೆಡಿಪಿ ಸಭೆಯಲ್ಲಿ ಪ್ರಸ್ತಾವ ಮಾಡಲಾಗಿತ್ತು. ಮಳೆಗಾಲದಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಸಾಧ್ಯವಾಗದೇ ಇರುವ ಬಗ್ಗೆಯೂ ದೂರು ನೀಡಲಾಗಿದೆ. ಆದರೆ ಆಡಳಿತದ ನಿರ್ಲಕ್ಷ್ಯದ ಕಾರಣದಿಂದ ಸೇತುವೆಯ ಕನಸು ನನಸಾಗಲೇ ಇಲ್ಲ.
ಮಾಧ್ಯಮಗಳ ಮೂಲಕ ಗಮನ ಸೆಳೆದಾಗ ಸಂಸದರು ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೂ ಪ್ರಯೋಜನ ಶೂನ್ಯ. ಮುಂದಿನ ಮಳೆಗಾಲಕ್ಕೆ ಮುಂಚಿತವಾದರೂ ಸೇತುವೆಯಾಗಲಿ ಎನ್ನುವುದು ಇಲ್ಲಿನ ಗ್ರಾಮಸ್ಥರ ಆಶಯವಾಗಿದೆ.
ಶೀಘ್ರ ಚಾಲನೆ ನೀಡುವ ವಿಶ್ವಾಸ
ಸೇತುವೆ ಆವಶ್ಯಕತೆ ಕುರಿತು ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಅಂದಾಜು ಪಟ್ಟಿ ಸಿದ್ಧಗೊಂಡು ಅನುಮೋದನೆಗೆ ಹೋಗಿದೆ. ಶೀಘ್ರ ಚಾಲನೆ ಸಿಗುವ ಸಾಧ್ಯತೆ ಇದೆ.
– ಅಶೋಕ ನೆಕ್ರಾಜೆ
ತಾ.ಪಂ. ಸದಸ್ಯರು
ಪ್ರಗತಿಯಾಗಿಲ್ಲ
ಸಂಪರ್ಕ ಸೇತುವೆ ಇಲ್ಲದೆ ಕಷ್ಟವಾಗಿದೆ. ಭರವಸೆ ನಂಬಿ ದಿನ ಕಳೆಯುತ್ತಿದ್ದೇವೆ. ಮೂಲ ಸೌಕರ್ಯದಿಂದ ವಂಚಿತರಾಗಿದ್ದೇವೆ. ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧವಾಗಿದೆ ಎನ್ನುತ್ತಿದ್ದರೂ ಯಾವುದೇ ಪ್ರಗತಿಯಾಗಿಲ್ಲ.
-ವಿನಯಚಂದ್ರ,
ಎಸ್ಡಿಎಂಸಿ ಅಧ್ಯಕ್ಷರು, ಮೊಗ್ರ ಶಾಲೆ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು
Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?