ಧರ್ಮಸ್ಥಳ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕುಟುಂಬ
Team Udayavani, Aug 14, 2018, 3:55 AM IST
ಬೆಳ್ತಂಗಡಿ: ಧಾರ್ಮಿಕ ಕ್ಷೇತ್ರಗಳ ಭೇಟಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬ ಸಮೇತರಾಗಿ ಸೋಮವಾರ ರಾತ್ರಿ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಚಾರ್ಮಾಡಿ ಘಾಟಿ ರಸ್ತೆಯ ಮೂಲಕ ಆಗಮಿಸಿದ ಮುಖ್ಯಮಂತ್ರಿಗಳ ಕುಟುಂಬ ಸಂಜೆ 7.30ರ ಸುಮಾರಿಗೆ ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ಸ್ನಾನ ಪೂರೈಸಿ, ರಾತ್ರಿ 9ಕ್ಕೆ ದೇವಸ್ಥಾನಕ್ಕೆ ಆಗಮಿಸಿತು. ಕುಮಾರಸ್ವಾಮಿ ಜತೆ ಪತ್ನಿ ಅನಿತಾ ಹಾಗೂ ತಾಯಿ ಚೆನ್ನಮ್ಮ ಇದ್ದರು. ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಕುಟುಂಬವನ್ನು ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಮೊಹಮ್ಮದ್ ಕುಂಞಿ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಎಂ.ಬಿ. ಸದಾಶಿವ ಉಪಸ್ಥಿತರಿದ್ದರು.
ರಸ್ತೆ ಬದಲು!
ನಿಗದಿಯಂತೆ ಶಿರಾಡಿ ಘಾಟಿ ರಸ್ತೆಯ ಮೂಲಕ ಆಗಮಿಸಬೇಕಾಗಿದ್ದ ಸಿಎಂ, ಶಿರಾಡಿ ಬ್ಲಾಕ್ ಆದ ಕಾರಣದಿಂದ ರಸ್ತೆ ಬದಲಿಸಿ, ಹಾಸನದಿಂದ ಚಾರ್ಮಾಡಿ ಘಾಟಿ ಮೂಲಕ ಆಗಮಿಸಿದ್ದರು. ಮುಖ್ಯಮಂತ್ರಿಗಳು ಸಂಜೆ ಧರ್ಮಸ್ಥಳಕ್ಕೆ ಆಗಮಿಸಿ, ಬಳಿಕ ಸುಬ್ರಹ್ಮಣ್ಯಕ್ಕೆ ತೆರಳಿ ವಾಸ್ತವ್ಯ ಹೂಡಬೇಕಿತ್ತು. ಕೊವೆ ಕ್ಷಣದಲ್ಲಿ ಧರ್ಮಸ್ಥಳದಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿದರು.
ಪೂಂಜಾ ಭೇಟಿ
ಧರ್ಮಸ್ಥಳದ ಸನ್ನಿಧಿ ವಸತಿಗೃಹದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು, ಕ್ಷೇತ್ರಕ್ಕೆ ಮಳೆ ಹಾನಿ ಪರಿಹಾರಕ್ಕೆ 1,000 ಕೋಟಿ ರೂ., ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ, ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವಸ್ತುನಿಷ್ಠ ವರದಿ ತಯಾರಿಸಿ ಕೇಂದ್ರಕ್ಕೆ ಆ. 25ರೊಳಗೆ ಅಭಿಪ್ರಾಯ ಮಂಡಿಸುವಂತೆ, ಎಂಡೋ ಪೀಡಿತರಿಗೆ ಮೂಲಸೌಕರ್ಯ ಒದಗಿಸುವಂತೆ ಮನವಿ ನೀಡಿದರು.ಮುಖ್ಯಮಂತ್ರಿಗಳ ಭೇಟಿ ಸಂದರ್ಭ ಅಪರ ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಡಾ| ರವಿಕಾಂತೇಗೌಡ, ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ ಪಿ.ಎಸ್.ಐ. ಅವಿನಾಶ್ ಜತೆಗಿದ್ದರು.
ಡಾ| ಹೆಗ್ಗಡೆ ಭೇಟಿ
ದೇವರ ದರ್ಶನ ಪಡೆದ ಬಳಿಕ ಹೆಗ್ಗಡೆಯವರ ನಿವಾಸವಾದ ಬೀಡಿಗೆ ತೆರಳಿದ ಸಿಎಂ ಕುಟುಂಬ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಚರ್ಚಿಸಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.