ನಿಫಾ ವೈರಸ್ ಆಂತಕಗೊಂಡ ಉಳ್ಳಾಲ ಕೋಡಿ ನಿವಾಸಿಗಳಿಂದ ನಗರಸಭೆಗೆ ದೂರು
Team Udayavani, May 24, 2018, 12:34 PM IST
ಉಳ್ಳಾಲ: ನೆರೆಯ ಕೇರಳದಲ್ಲಿ ಬಾವಲಿಗಳಿಂದ ಹರಡುತ್ತಿರುವ ‘ನಿಫಾ’ ವೈರಸ್ ಮಂಗಳೂರಿಗೂ ಹರಡುತ್ತಿದೆ ಎನ್ನುವ ಸುದ್ದಿಯಿಂದ ಕಂಗೆಟ್ಟಿರುವ ಉಳ್ಳಾಲದ ಕೋಡಿನಿವಾಸಿಗಳು ಸಮೀಪದ ಗೋಳಿ ಮರದಲ್ಲಿ ನೆಲೆಸಿರುವ ಬಾವಳಿಗಳ ರಾಶಿಯಿಂದ ಆತಂಕಿತರಾಗಿ ಉಳ್ಳಾಲ ನಗರಸಭೆಗೆ ದೂರು ನೀಡಿದ್ದಾರೆ.
ಉಳ್ಳಾಲ ಕೋಡಿ ಮೊಹಿಯುದ್ದೀನ್ ಮಸೀದಿ ಹಾಗೂ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಸಮೀಪ ಇರುವ ಗೋಳಿ
ಮರದಲ್ಲಿ ಬಾವಳಿಗಳ ರಾಶಿ ಹಲವು ವರ್ಷಗಳಿಂದ ಇದೆ. ಆದರೆ ಈ ಕುರಿತು ಈವರೆಗೆ ಯಾರು ತಲೆಕೆಡಿಸಿ ಕೊಂಡಿರಲಿಲ್ಲ. ಈಗ ಕೇರಳದಲ್ಲಿ ಹರಡುತ್ತಿರುವ ವೈರಸ್ ನಿಂದ ಆತಂಕಿತರಾಗಿರುವ ಸ್ಥಳೀಯ ನಾಗರಿಕರ ತಂಡ ನಗರಸಭೆಗೆ ದೂರು ನೀಡಿದೆ.
ಈ ಪ್ರದೇಶದಲ್ಲಿ ಸುಮಾರು 350 ಮನೆಗಳು, ಮಸೀದಿ, ದೇವಸ್ಥಾನಗಳಿವೆ. ಸಮುದ್ರ ತೀರದ ಪ್ರದೇಶ ಆಗಿರುವುದರಿಂದ ಕೇರಳ ಭಾಗದಲ್ಲಿನ ಬಾವಲಿಗಳು ಇಲ್ಲಿಗೆ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಗರ ಸಭೆಯ ಸಹಕಾರದೊಂದಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರ ಪರವಾಗಿ ಹನೀಫ್ ಸೋಲಾರ್ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.