ಸೋಮವಾರ ಕೂಡಾ ದಕ್ಷಿಣ ಕನ್ನಡ ಸಂಪೂರ್ಣ ಬಂದ್; ಮಂಗಳವಾರ ಅಂಗಡಿಗಳು ಓಪನ್
Team Udayavani, Mar 29, 2020, 6:15 PM IST
ಮಂಗಳೂರು: ಕೋವಿಡ್ -19 ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ದಿನದ ಸಂಪೂರ್ಣ ಬಂದ್ ಸೋಮವಾರವೂ ಮುಂದುವರಿಯಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ಧಾರೆ.
ಮಂಗಳೂರಿನ ಜಿಲ್ಲಾಡಳಿತದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವರು, ಎರಡು ದಿನದ ಕಡ್ಡಾಯ ಬಂದ್ ಗೆ ಬೆಂಬಲ ನೀಡಿದ್ದೀರಿ. ಕೋವಿಡ್-19 ನಿಯಂತ್ರಣಕ್ಕಾಗಿ ನಾವು ಕಟು ನಿರ್ಧಾರ ತೆಗೆದುಕೊಂಡಿದ್ದೇವು ಎಂದರು.
ಸೋಮವಾರ ಕೂಡಾ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಮಂಗಳವಾರ ಒಂದು ದಿನ ಅಂಗಡಿಗಳು ತೆರೆದಿರಲಿದೆ. ಮಂಗಳವಾರ ಬೆಳಗ್ಗೆ 6 ರಿಂದ 3 ಗಂಟೆ ತನಕ ದಿನಸಿ ಅಂಗಡಿಗಳು ತೆರೆದಿರುತ್ತದೆ ಎಂದು ಸಚಿವರು ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಸಾಮಾನುಗಳನ್ನು ಖರೀದಿಸಿ ಎಂದು ಜನರಲ್ಲಿ ಮನವಿ ಮಾಡಿದ ಸಚಿವರು, ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬರಬೇಕು. ವ್ಯಾಪಾರಿಗಳು ನಿಗದಿತ ದರದಲ್ಲೇ ಆಹಾರ ಸಾಮಾಗ್ರಿಗಳನ್ನು ಕೊಡಬೇಕು. ವ್ಯಾಪಾರಿಗಳು ದರ ಹೆಚ್ಚು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.