ಚಾರ್ಮಾಡಿ ಮತ್ತೆ ಭೂಕುಸಿತ: ವಾರಗಳ ಕಾಲ ರಸ್ತೆ ಸಂಚಾರ ಕಡಿತಗೊಳ್ಳುವ ಭೀತಿ
Team Udayavani, Aug 9, 2019, 3:46 PM IST
ಬೆಳ್ತಂಗಡಿ: ಸತತ ಮಳೆಯಿಂದಾಗಿ ಚಾರ್ಮಾಡಿ ರಸ್ತೆಯಲ್ಲಿ ಮಣ್ಣು ಕುಸಿತವಾಗುತ್ತಿದ್ದು, ಒಂದು ಹಂತದ ಮಣ್ಣು ತೆರವಿನ ನಂತರ ಮತ್ತೆ ಕುಸಿತವಾಗುತ್ತಿದೆ. ಚಾರ್ಮಾಡಿ ಹಾದಿ ಸುಗಮವಾಗುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನ ಮತ್ತೆ ಬೃಹದಾಕಾರದ ಬಂಡೆ ಮಣ್ಣು ಕುಸಿತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಕಳೆದ ಬಾರಿ ಭೂಕುಸಿತ ಉಂಟಾಗಿ ಅಣ್ಣಾಮಲೈ ಭೇಟಿ ನೀಡಿದ ಸ್ಥಳದಲ್ಲಿ ಈ ಬಾರಿ ಮತ್ತೆ ಬೃಹದಾಕಾರದ ಬಂಡೆ, ಮಣ್ಣು ಕುಸಿದು ರಸ್ತೆಗೆ ಬೀಳುತ್ತಿದೆ. ಇದರೊಂದಿಗೆ ಜೋರಾದ ಗಾಳಿಯೊಂದಿಗೆ ಮಳೆ ಬೀಳುತ್ತಿದ್ದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಮತ್ತೆ ಮತ್ತೆ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿರುವುದರಿಂದ ಜೆಸಿಬಿ ಚಾಲಕರು ಕೂಡ ಆತಂಕದಿಂದಲೇ ಕಾರ್ಯಾಚರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಿರಂತರವಾಗಿ ಗುಡ್ಡ ಕುಸಿಯುವುದರಿಂದ ವಾರಗಳ ಕಾಲ ರಸ್ತೆ ಸಂಚಾರ ಕಡಿತಗೊಳ್ಳುವ ಭೀತಿ ಎದುರಾಗಿದೆ.