ಚುನಾವಣೆ ಪ್ರಚಾರದಿಂದ ದೂರ ಉಳಿದ ಕೋಸ್ಟಲ್ವುಡ್ ಕಲಾವಿದರು!
Team Udayavani, May 10, 2018, 2:42 PM IST
ಸ್ಯಾಂಡಲ್ವುಡ್ನ ಬಹುತೇಕ ನಟರು ಸಿನೆಮಾ ಶೂಟಿಂಗ್ ಬಿಟ್ಟು ಮತ ಪ್ರಚಾರದಲ್ಲಿಯೇ ಬ್ಯುಸಿಯಾಗಿದ್ದಾರೆ. ಸುದೀಪ್, ದರ್ಶನ್, ಯಶ್ ಸಹಿತ ಸಿನೆಮಾ ಸ್ಟಾರ್ ಗಳು ಒಂದೊಂದು ಪಕ್ಷದ ಅಭ್ಯರ್ಥಿಯ ಪರವಾಗಿ ರೋಡ್ ಶೋ ನಡೆಸುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸುತ್ತಾಡಿ ಮತ ಕೇಳುತ್ತಿದ್ದಾರೆ. ಆದರೆ, ಕೋಸ್ಟಲ್ವುಡ್ನಲ್ಲಿ ಮಾತ್ರ ಇಂತಹ ಯಾವುದೇ ಸನ್ನಿವೇಶವಿಲ್ಲ.
ತುಳುವಿನ ಹಲವು ಸ್ಟಾರ್ ನಟ-ನಟಿಯರು ಸಿನೆಮಾ ಮೂಲಕ ಕೋಸ್ಟಲ್ ನೆಲದಲ್ಲಿ ಹೆಸರು ಪಡೆದಿದ್ದಾರೆ. ಈ ಕಲಾವಿದರನ್ನು ತುಳುನಾಡಿನಲ್ಲಿ ತುಂಬಾನೆ ಇಷ್ಟಪಡುತ್ತಾರೆ. ಹೀಗಾಗಿ ಇವರನ್ನು ಇಟ್ಟುಕೊಂಡು ಮತ ಕೇಳುವ ಬಗ್ಗೆ ರಾಜಕೀಯ ನಾಯಕರು ಯೋಚನೆ ಮಾಡಿದ್ದರೂ, ನಟ-ನಟಿಯರು ಮಾತ್ರ ಇದಕ್ಕೆ ಒಪ್ಪಲಿಲ್ಲ. ನಾವು ಸರ್ವರ ಜತೆಗೂ ಇರುವವರು ಹಾಗೂ ಪಕ್ಷಪಾತಿಯಾಗಿ ಹೋದರೆ ಕಲಾವಿದನಿಗೆ ಭವಿಷ್ಯ ಇರುವುದಿಲ್ಲ ಎಂದು ಅರಿತುಕೊಂಡ ಇಲ್ಲಿನ ಕಲಾವಿದರು ರಾಜಕೀಯ ಪ್ರಚಾರಕ್ಕೆ ಒಲ್ಲೆ ಎಂದಿದ್ದಾರೆ. ಈ ಮೂಲಕ ಕೋಸ್ಟಲ್ವುಡ್ ಕಲಾವಿದರು ಕಲಾ ಶ್ರೀಮಂತಿಕೆಯ ಜತೆಗೆ ಪಕ್ಷ ಸಾಮರಸ್ಯ ಮೆರೆದಿದ್ದಾರೆ.
ತಮಿಳು- ತೆಲುಗು ಚಿತ್ರರಂಗದಲ್ಲಂತೂ ಬಹುತೇಕ ನಟ ನಟಿಯರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಿಂದ ಬಂದು ಮುಖ್ಯಮಂತ್ರಿಯಾದ ಉದಾಹರಣೆಯೂ ಇದೆ. ತಮ್ಮದೇ ಪಕ್ಷ ಕಟ್ಟಿದ ನಟ- ನಟಿಯರ ಸಂಖ್ಯೆಗೂ ಕಡಿಮೆಯಿಲ್ಲ. ಇದರೆ ತುಳು ಚಿತ್ರರಂಗ ಮಾತ್ರ ಇದಕ್ಕೆ ಹೊರತಾಗಿದೆ ಎಂಬುದು ಇಲ್ಲಿನ ವಿಶೇಷ. ಈ ಹಿಂದೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಒಂದಿಬ್ಬರು ಪ್ರಸ್ತುತ ರಾಜಕೀಯದಲ್ಲಿದ್ದು, ಅವರನ್ನು ಹೊರತುಪಡಿಸಿದರೆ, ಈಗಿನ ಹೊಸಪೀಳಿಗೆಯ ಕಲಾವಿದರು ರಾಜಕೀಯವನ್ನು ತಮ್ಮಿಂದ ದೂರವೇ ಇಟ್ಟಿದ್ದಾರೆ.
ಪಕ್ಷದ ಮುಖಂಡರೊಂದಿಗೆ ಗುರುತಿಸಿಕೊಳ್ಳುವುದಾಗಲಿ, ಪಕ್ಷದ ಪರ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗಲೀ ಇಲ್ಲಿ ಇಲ್ಲ. ಸೀಮಿತ ಪ್ರೇಕ್ಷಕರಿರುವುದರಿಂದ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡರೆ ತಮ್ಮ ಚಿತ್ರಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣವೂ ಇರಬಹುದು. ಜತೆಗೆ ಕಲಾವಿದನಾದವ ಒಂದು ಜಾತಿ, ಧರ್ಮ, ಪಕ್ಷದೊಂದಿಗೆ ಗುರುತಿಸಿಕೊಳ್ಳಬಾರದು. ಎಲ್ಲ ಜಾತಿ, ಧರ್ಮ, ಪಕ್ಷದಲ್ಲಿಯೂ ಅಭಿಮಾನಿಗಳಿರುತ್ತಾರೆ. ಕಲಾವಿದನಿಗೆ ಕಲೆಯೇ ಮೊದಲು ಎನ್ನುವ ಮನೋಭಾವವೂ ಕೋಸ್ಟಲ್ ನೆಲದಲ್ಲಿದೆ ಎಂಬ ಅಭಿಪ್ರಾಯ ಇಲ್ಲಿದೆ.
ಇನ್ನೊಂದು ವಿಶೇಷವೆಂದರೆ, ರಾಜಕೀಯದಿಂದ ದೂರ ಉಳಿದಿರುವ ಕೋಸ್ಟಲ್ವುಡ್ ಕಲಾವಿದರು ರಾಜಕೀಯ ಪಕ್ಷಗಳ ಜತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಆದರೆ, ಒಂದು ಪಕ್ಷದ ಜತೆ ಗುರುತಿಸಿಕೊಳ್ಳಲು ಬಯಸುವವರೂ ಮಾತ್ರ ಕಡಿಮೆ.
ಎಲ್ಲ ಕಲಾವಿದರಿಗೂ ಒಂದು ಪಕ್ಷ ಎಂದು ಇರುತ್ತದೆ. ಚುನಾವಣೆಯಲ್ಲಿ ಆ ಪಕ್ಷಕ್ಕೆ ಅವರು ಮತವನ್ನೂ ಚಲಾಯಿಸುತ್ತಾರೆ. ಆದರೆ ಒಂದು ಪಕ್ಷದ ಜತೆ ನೇರವಾಗಿ ಗುರುತಿಸಿಕೊಳ್ಳಲು ಅವರು ಒಪ್ಪುವುದಿಲ್ಲ. ಕಲಾವಿದರಿಗೆ ಅಭಿಮಾನಿಗಳೇ ದೇವರಾಗಿದ್ದು, ಪಕ್ಷದ ಪರ ಗುರುತಿಸಿಕೊಂಡರೆ ಅದು ಅಭಿಮಾನಿಗಳು ದೂರ ಹೋಗುವ ಸಾಧ್ಯತೆಯೂ ಇದೆ.
ಕಲಾವಿದನಿಗೆ ಜಾತಿ, ಧರ್ಮ, ಪಕ್ಷ ಯಾವುದೂ ಇರಬಾರದು. ಕಲಾವಿದರು ಎಲ್ಲ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ. ಒಂದು ಪಕ್ಷದಲ್ಲಿ ಗುರುತಿಸಿಕೊಂಡರೆ ಇನ್ನೊಂದು ಪಕ್ಷದವರೊಂದಿಗೆ ಇದ್ದ ಸಂಬಂಧವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಭಿಮಾನಿಗಳೂ ತಾವು ಇಷ್ಟಪಡುವ ನಟರು ಒಂದು ಪಕ್ಷದ ಪರ ಗುರುತಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನಟರು ತಟಸ್ಥರಾಗಿರುವುದು ಉತ್ತಮ ಎಂಬುದು ಕಲಾವಿದರ ಅಭಿಪ್ರಾಯ.
ಇಷ್ಟಿದ್ದರೂ ತುಳು ಸಿನೆಮಾದಲ್ಲಿ ರಾಜಕೀಯವಿಲ್ಲವೇ ಎಂದು ಹೇಳುವ ಹಾಗಿಲ್ಲ. 1971ರಲ್ಲಿ ಬಿಡುಗಡೆಯಾಗಿದ್ದ ‘ಎನ್ನ ತಂಗಡಿ’ ಚಿತ್ರದಲ್ಲಿ ನಟಿಸಿದ್ದ ಲೋಕಯ್ಯ ಶೆಟ್ಟಿಯವರು ರಾಜಕೀಯದಲ್ಲಿ ಗುರುತಿಸಿಕೊಂಡು ಸುರತ್ಕಲ್ ಶಾಸಕರಾಗಿದ್ದರು. 1978ರಲ್ಲಿ ಬಿಡುಗಡೆಯಾಗಿದ್ದ ‘ಸಂಗಮ ಸಾಕ್ಷಿ’ ಚಿತ್ರದ ನಿರ್ಮಾಪಕರಾಗಿದ್ದ ವಸಂತ ಬಂಗೇರರು ಇಂದು ಬೆಳ್ತಂಗಡಿ ಶಾಸಕರು. ಪುತ್ತೂರು ಶಾಸಕಿ 2011ರಲ್ಲಿ ಬಿಡುಗಡೆಯಾದ ‘ಕಂಚಿಲ್ದ ಬಾಲೆ’ ಚಿತ್ರದಲ್ಲಿ ನಟಿಸಿದ್ದರು. ಇನ್ನೂ ಕೆಲವರು ಸಿನೆಮಾ ಸಂಪರ್ಕ ಬೆಳೆಸಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇಲೆಕ್ಷನ್ ಮುಗಿದ ಕೂಡಲೇ ‘ಪೆಟ್ ಕಮ್ಮಿ’ಗಳ ಪ್ರವೇಶ
ಕೋಸ್ಟಲ್ವುಡ್ನಲ್ಲಿ ವಿಭಿನ್ನ ಕಥೆ ಹಾಗೂ ಹೊಸ ಕಲಾವಿದರ ಜತೆಗೆ ಹೆಣೆದ ವಿನೂತನ ಶೈಲಿಯ ‘ಪೆಟ್ ಕಮ್ಮಿ’ ಈಗಾಗಲೇ ಸೆನ್ಸಾರ್ ಪಡೆದು ಮೇ 18ಕ್ಕೆ ‘ಪೆಟ್ ಕಮ್ಮಿ’ ರಿಲೀಸ್ಗೆ ಚಿತ್ರತಂಡ ದಿನ ಪಕ್ಕಾ ಮಾಡಿದೆ. ಸುದೀರ್ಘ ವರ್ಷ ಬಾಲಿವುಡ್ನಲ್ಲಿ ಕೆಲಸ ಮಾಡಿರುವ ಉಡುಪಿ ಮೂಲದ ಅಶೋಕ್ ಶೆಟ್ಟಿಯವರು ನಿರ್ಮಿಸಿದ ‘ಪೆಟ್ ಕಮ್ಮಿ’ ಕೋಸ್ಟಲ್ವುಡ್ನಲ್ಲಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.
ಮಾಲ್ಗುಡಿ ಡೇಸ್ ಬ್ಯಾನರ್ನಡಿ ಈ ಚಿತ್ರ ರೆಡಿಯಾಗಿದೆ. ತುಳು ಲಿಪಿಯಲ್ಲಿ ತುಳು ಚಿತ್ರದ ಟೈಟಲ್ ಮಾಡುವ ಮೂಲಕ ಮೊದಲ ಬಾರಿಗೆ ಸುದ್ದಿಗೆ ಬಂದ “ಪೆಟ್ ಕಮ್ಮಿ’ ಅನಂತರ ಒಂದೊಂದೇ ರೀತಿಯ ಅವತಾರಗಳ ಮೂಲಕ ಗಮನಸೆಳೆಯಿತು.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ