2.50 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಅಡಮಾನವಿರಿಸಿ ವಂಚನೆ
Team Udayavani, Aug 5, 2022, 10:29 PM IST
ಮಂಗಳೂರು: ಸಾಲಕ್ಕಾಗಿ 2.50 ಕೋ. ರೂ. ಬೆಲೆ ಬಾಳುವ ಸ್ಥಿರಾಸ್ತಿ ಅಡಮಾನವಿರಿಸಿ ಮೂರು ಮಂದಿ ವಂಚಿಸಿರುವುದಾಗಿ ಮಧ್ವರಾಯ ಭಟ್ ಅವರು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.
ರಕ್ಷಾ ಬಾಳಿಗ, ನಿಧಿ ವಾಸುದೇವ ಕಾಮತ್ ಮತ್ತು ವಾಸುದೇವ ಕಾಮತ್ ಅವರು ಮಹಾರಾಷ್ಟ್ರದಲ್ಲಿ ಡೇರಿ ಫಾರಂ ಮಾಡುವ ಉದ್ದೇಶದಿಂದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮಂಗಳೂರು ಶಾಖೆಯಿಂದ 1.75 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ವಾಸುದೇವ ಕಾಮತ್ ನಿವೃತ್ತ ಬ್ಯಾಂಕ್ ಪ್ರಬಂಧಕರಾಗಿದ್ದು, ಮಧ್ವರಾಯ ಭಟ್ ಅವರಿಗೆ ಪರಿಚಿತರು. ಸಾಲಕ್ಕೆ ಜಾಮೀನುದಾರರಾಗಿ ನಿಲ್ಲುವಂತೆ ಕೇಳಿಕೊಂಡಿದ್ದರು. ಅದರಂತೆ ಮಧ್ವರಾಯ ಭಟ್ ಅವರು ಕೆಲವು ಷರತ್ತುಗಳನ್ನು ತಿಳಿಸಿ ಜಾಮೀನುದಾರರಾಗಿ ಸಹಿ ಹಾಕಿದ್ದರು. 2.50 ಕೋ.ರೂ. ಮೌಲ್ಯದ ಸ್ಥಿರಾಸ್ತಿ ಅಡಮಾನ ಇಟ್ಟಿದ್ದರು.
ಆರೋಪಿಗಳು ಮುಂದಿನ 6 ತಿಂಗಳೊಳಗೆ ಬದಲಿ ವ್ಯವಸ್ಥೆ ಮಾಡಿ ಬೇರೆ ಸ್ಥಿರಾಸ್ತಿ ಅಡಮಾನವಿಟ್ಟು ಮಧ್ವರಾಯ ಭಟ್ ಅವರ ಆಸ್ತಿಯನ್ನು ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಆದರೆ ಆರೋಪಿಗಳು ಸಾಲ ಮರುಪಾವತಿಸದೆ ಇದ್ದುದರಿಂದ ಭಟ್ ಅವರು ಹಣವನ್ನು ಮರುಪಾವತಿ ಮಾಡುವಂತೆ ತಿಳಿಸಿದಾಗ ಆರೋಪಿಗಳು ಜೀವಬೆದರಿಕೆ ಹಾಕಿ ತಪ್ಪಿಸಿಕೊಂಡಿದ್ದರು. ಬ್ಯಾಂಕ್ನವರು ಸಾಲ ಪಾವತಿ ಮಾಡುವಂತೆ ಹಾಗೂ ಸ್ಥಿರಾಸ್ತಿ ಮುಟ್ಟುಗೋಲು ಹಾಕುವುದಾಗಿ ನೋಟಿಸು ನೀಡಿದ್ದಾರೆ. ಆರೋಪಿಗಳು ಬ್ಯಾಂಕ್ಗೆ ಹಾಗೂ ಮಧ್ವರಾಯ ಭಟ್ ಅವರಿಗೆ ಮೋಸ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.