ಹಂತಕ ಪ್ರವೀಣ್ಗೆ ಬಿಡುಗಡೆ ಇಲ್ಲ? ಕುಟುಂಬಸ್ಥರ ಹೋರಾಟಕ್ಕೆ ಜಯ ಸಾಧ್ಯತೆ
Team Udayavani, Aug 15, 2022, 6:55 AM IST
ಮಂಗಳೂರು: ಚಿನ್ನಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಜೈಲಿನಲ್ಲಿರುವ ಪ್ರವೀಣ್ ಕುಮಾರ್ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಬಿಡುಗಡೆಯಾಗುವ ಕೈದಿಗಳಲ್ಲಿ ಪ್ರವೀಣ್ ಕುಮಾರ್ ಕೂಡ ಇದ್ದು ಬಿಡುಗಡೆಗೆ ಮುನ್ನ ಆತನ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ದ.ಕ. ಜಿಲ್ಲಾ ಪೊಲೀಸರಿಂದ ವರದಿ ಕೇಳಿತ್ತು. ಅದರಂತೆ ಕುಟುಂಬಸ್ಥರ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಪ್ರವೀಣ್ನನ್ನು ಬಿಡುಗಡೆ ಮಾಡಬಾರದು, ಬಿಡುಗಡೆ ಮಾಡಿದರೆ ಕುಟುಂಬಕ್ಕೆ ಜೀವ ಭಯವಿದೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಪತ್ನಿ ಸೇರಿದಂತೆ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು.
ಜನಪ್ರತಿನಿಧಿಗಳು, ವಿವಿಧ ಸ್ತರದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರು. ಈ ಬಗ್ಗೆ ದ.ಕ. ಜಿಲ್ಲಾ ಎಸ್ಪಿ ಹೃಷಿಕೇಶ್ ಸೋನಾವಣೆ ಪ್ರತಿಕ್ರಿಯಿಸಿ, “ಕುಟುಂಬಸ್ಥರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರವೀಣ್ನನ್ನು ಬಿಡುಗಡೆ ಮಾಡಬಾರದು ಎಂಬುದಾಗಿ ಇಲಾಖೆಗೆ ವರದಿ ನೀಡಿದ್ದೇವೆ. ಹಾಗಾಗಿ ಬಿಡುಗಡೆ ಸಾಧ್ಯತೆ ಕಡಿಮೆ’ ಎಂದು ತಿಳಿಸಿದ್ದಾರೆ.
ಪ್ರವೀಣ್ 1994ರಲ್ಲಿ ವಾಮಂಜೂರಿನಲ್ಲಿರುವ ಸೋದರತ್ತೆ ಅಪ್ಪಿ ಶೇರಿಗಾರ್ತಿ, ಅವರ ಮಗ ಗೋವಿಂದ, ಮಗಳು ಶಕುಂ ತಳಾ ಹಾಗೂ ಶಕುಂತಳಾ ಅವರ ಪುತ್ರಿ ದೀಪಿಕಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ.
ಸಚಿವಾಲಯದಿಂದ ಮಾಹಿತಿ
“ಪ್ರವೀಣ್ ಕುಮಾರ್ನನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸಚಿವಾಲಯದಿಂದ ಮಾಹಿತಿ ದೊರೆತಿದ್ದು, ಆತ ಬಿಡು ಗಡೆ ಆಗಲಾರ’ ಎಂಬ ವಿಶ್ವಾಸವಿದೆ ಎಂದು ಅಪ್ಪಿ ಶೇರಿಗಾರ್ತಿ ಅವರ ಪುತ್ರ ಸೀತಾರಾಮ ಗುರುಪುರ ತಿಳಿಸಿದ್ದಾರೆ.