ಕರಾವಳಿ ಅಪರಾಧ ಸುದ್ದಿಗಳು
Team Udayavani, Jun 14, 2019, 9:41 AM IST
ಆತ್ಮಹತ್ಯೆ ಸಂದೇಶ ಕಳಿಸಿ ಯುವಜೋಡಿ ನಾಪತ್ತೆ
ಕಲ್ಲಮುಂಡ್ಕೂರು ಪಿದಮಲೆ ಕಾಡಿನಲ್ಲಿ ಹುಡುಕಾಟ
ಮೂಡುಬಿದಿರೆ: “ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಸ್ನೇಹಿತರೊಬ್ಬರ ಮೊಬೈಲ್ಗೆ ಸಂದೇಶ ಕಳಿಸಿ ನಾಪತ್ತೆಯಾದ ಬಡಗ ಮಿಜಾರಿನ ಪದವೀಧರ ಯುವತಿ ಮತ್ತು ಕಲ್ಲಮುಂಡ್ಕೂರಿನ ಬ್ಯಾಂಡ್ಸೆಟ್ ಕಲಾವಿದನ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಸ್ಥಳೀಯರ ಸಹಕಾರ ದೊಂದಿಗೆ ಗುರು ವಾರ ಕಲ್ಲಮುಂಡ್ಕೂರಿನ ಪಿದಮಲೆ ಕಾಡಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಪರಸ್ಪರ ಪರಿಚಿತರಾಗಿದ್ದ ಇವರು ಇತ್ತೀಚೆಗೆ ನಾಪತ್ತೆಯಾಗಿದ್ದರು. ಯುವಕನ ಸ್ನೇಹಿತನ ಕಾರಿನಲ್ಲಿ ಕಾಪು ಕಡೆಗೆ ಹೋಗಿದ್ದ ಈ ಜೋಡಿ ಅನಂತರ ಮೂಲ್ಕಿಯಿಂದ ಬಾಡಿಗೆ ಕಾರಿನಲ್ಲಿ ಕಲ್ಲಮುಂಡ್ಕೂರು ಪಿದಮಲೆ ಕಾಡು ಪ್ರದೇಶದಲ್ಲಿ ಬಂದಿಳಿದು ನಾಪತ್ತೆಯಾಗಿದ್ದರು. ಕಾರಿನಲ್ಲಿ ಇವರ ಮೊಬೈಲ್ ಮತ್ತು 10 ರೂಪಾಯಿಯ ನೋಟು ಪತ್ತೆ ಯಾಗಿದ್ದು, ನೋಟಿನಲ್ಲಿ “ನಾವು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇವೆ’ ಎಂದು ಬರೆಯಲಾಗಿತ್ತು. ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಜೋಡಿಯನ್ನು ಕಾರಿನಲ್ಲಿ ಕಾಪುವಿಗೆ ಬಿಟ್ಟು ಬಂದಿದ್ದ ಸ್ನೇಹಿತ ರೊಬ್ಬರ ಮೊಬೈಲಿಗೆ, ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂಬ ಸಂದೇಶ ರವಾನಿಸಲಾಗಿತ್ತು. ಈ ವಿಷಯ ತಿಳಿದು ಎರಡೂ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ. ಜೋಡಿಯ ಮೊಬೈಲ್ ಸ್ವಿಚ್ ಆಫ್ ಆಗಿರು ವುದರಿಂದ ಪತ್ತೆಗೆ ತೊಡಕಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಜೋಡಿಯನ್ನು ಕಾರಿನಲ್ಲಿ ಕಾಪುವಿಗೆ ಬಿಟ್ಟು ಬಂದಿದ್ದ ಸ್ನೇಹಿತರಿಬ್ಬರನ್ನು ಪೊಲೀಸರು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.
ದೂರು ದಾಖಲು:ಮೂಡುಬಿದಿರೆ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಮನೆಯವರು ದೂರು ಸಲ್ಲಿಸಿದ್ದಾರೆ. ಯುವಕನ ಬಗ್ಗೆ ದೂರು ಸಲ್ಲಿಕೆಯಾದ ಮಾಹಿತಿ ಇಲ್ಲ.
*
ಕಾಸರಗೋಡು: ಸರಣಿ ಕಳವು
ಕಾಸರಗೋಡು: ಜಿಲ್ಲೆಯ ವಿವಿಧೆಡೆ ಜೂ. 12ರಂದು ರಾತ್ರಿ ಕಳವು ನಡೆದಿದೆ. ಪಾಲಕುನ್ನಿನ ಸೂಪರ್ ಮಾರ್ಕೆಟ್, ಬೇಕಲ ಕೋಟೆ ಸಮೀಪದ ಅಂಚೆ ಕಚೇರಿ, ಕಾಂಞಂಗಾಡ್ನಲ್ಲಿ ಮನೆ ಮತ್ತು ಕುಟುಂಬಶ್ರೀ ಹೊಟೇಲ್ನಲ್ಲಿ ಕಳವು ಮಾಡಲಾಗಿದೆ. ಪಾಲಕುನ್ನಿನಲ್ಲಿ ಕೆ.ಎಸ್.ಟಿ.ಪಿ. ರಸ್ತೆ ಬದಿಯಲ್ಲಿ ಇರುವ ಸೂಪರ್ ಮಾರ್ಕೆಟ್ನ ಗೋಡೆ ಕೊರೆದು ಕಳ್ಳರು ಒಳಗೆ ನುಗ್ಗಿ ಕಳ್ಳತನ ಮಾಡಿದ್ದು, ಕಳವಾದ ಸಾಮಗ್ರಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ ನೌಕರರು ಬಂದಾಗಲೇ ಕಳವು ನಡೆದಿರುವುದು ಬೆಳಕಿಗೆ ಬಂತು. ಇಲ್ಲಿಂದ ಕಳವಾದ ಸೊತ್ತುಗಳ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ.
*
ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಉಪ್ಪಿನಂಗಡಿ: ಕಾಲೇಜಿಗೆ ಹೋಗುವ ಮೊದಲು ಡೈರಿಗೆ ಹಾಲು ಕೊಟ್ಟುಹೋಗು ಎಂದು ಹೇಳಿದ್ದಕ್ಕೆ ನೊಂದು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಉಪ್ಪಿನಂಗಡಿಯಲ್ಲಿನಡೆದಿದೆ.
ಬಜತ್ತೂರು ಗ್ರಾಮದ ಕುವೆಚ್ಚಾರು ಮನೆ ನಿವಾಸಿ ಮೋನಪ್ಪ ಗೌಡ ಅವರ ಪುತ್ರಿ ತೇಜಕುಮಾರಿ (18) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪದವಿ ಶಿಕ್ಷಣಕ್ಕಾಗಿ ಸೇರಿದ್ದಳು.
ಗುರುವಾರ ಕಾಲೇಜಿಗೆ ಹೋಗುವಾಗ ಮನೆಯಲ್ಲಿದ್ದ ಹಾಲನ್ನು ಪೆರಿಯಡ್ಕದ ಡೇರಿಗೆ ಕೊಟ್ಟು ಹೋಗು ಎಂದು ಮನೆಯವರು ಹೇಳಿದ್ದರು. ಆಕೆ ನಿರಾಕರಿಸಿದ್ದು, ಬಳಿಕ ಮನೆಯವರು ಒತ್ತಾಯದಿಂದ ಡೇರಿಗೆ ಕಳುಹಿಸಿದ್ದರು. ಇದೇ ಕಾರಣಕ್ಕೆ ಡೇರಿಯಿಂದ ವಾಪಸ್ ಬರುವಾಗ ದಾರಿ ಮಧ್ಯದ ಗೇರುಮರಕ್ಕೆ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.