ಅಪಘಾತಗಳ ಸಮಗ್ರ ಮಾಹಿತಿಯುಳ್ಳ ದಾಖಲೆ ಸಿದ್ಧಪಡಿಸಲು ಡಿಸಿ ಸೂಚನೆ
ದಕ್ಷಿಣ ಕನ್ನಡ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ
Team Udayavani, Jan 12, 2022, 6:15 AM IST
ಮಂಗಳೂರು: ವಾಹನ ಅಪಘಾತಗಳ ಸಮಗ್ರ ಮಾಹಿತಿ ದೊರೆಯಬಲ್ಲ ದಾಖಲೆಯನ್ನು ಸಿದ್ಧ ಪಡಿಸಿಟ್ಟುಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಸಾರಿಗೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2 ಹಾಗೂ 4 ಚಕ್ರಗಳ ವಾಹನಗಳು ಸೇರಿದಂತೆ ಪ್ರತೀದಿನ ಸಂಭವಿಸುವ ರಸ್ತೆ ಅಪಘಾತಗಳು, ಅವುಗಳ ಪ್ರಕಾರ ಗಳು, ಸಾವು-ನೋವಿನ ಪ್ರಕರಣಗಳು, ಅಪಘಾತ ಸಂಭವಿಸಿದಾಗ ಹೆಲ್ಮೆಟ್ / ಸೀಟ್ ಬೆಲ್ಟ್ ಧರಿಸಿದ್ದರೇ ಇಲ್ಲವೇ, ಮದ್ಯ ಸೇವನೆ ಮಾಡಿದ್ದರೇ ಇತ್ಯಾದಿ ಸಮಗ್ರ ಮಾಹಿತಿಯನ್ನು ಈ ದಾಖಲೆ ಒಳಗೊಂಡಿರ ಬೇಕು. ಇದರಿಂದ ಮುಂದೆ ಈ ರೀತಿಯ ಅಪಘಾತ ಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಉಪ ಸಮಿತಿ
ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಸಮರ್ಪಕ ರೀತಿಯಲ್ಲಿ ಅಳವಡಿಸಬೇಕು, ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲು ಉಪ ಸಮಿತಿಯನ್ನು ರಚಿಸಿ ಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಡಾ| ಭರತ್ ವೈ. ಶೆಟ್ಟಿ, ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಸಾರಿಗೆ ಅಧಿ ಕಾರಿ ಆರ್.ಎಂ. ವರ್ಣೇಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುಧಾಕರ್, ಎಸಿಪಿ ನಟರಾಜ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್, ಪಿಡಬ್ಲ್ಯೂ ಡಿ ಕಾರ್ಯನಿರ್ವಹಕ ಎಂಜಿನಿ ಯರ್ ಯಶವಂತ್ ಸೇರಿ ದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ನಾನು ಭಂಡತನ ಪ್ರದರ್ಶನ ಮಾಡಿಲ್ಲ, ಕ್ಷಮೆ ಕೇಳಿದ್ದೇನೆ: ರೇಣುಕಾಚಾರ್ಯ
ಜಿಲ್ಲಾಧಿಕಾರಿ ಸೂಚನೆಗಳು
-ಖಾಸಗಿ/ ಕೆಎಸ್ಸಾರ್ಟಿಸಿ ಬಸ್ಗಳು ರಸ್ತೆ ಬದಿಯಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು, ಸಾರ್ವಜನಿಕರಿಗೆ ತೊಂದರೆಯಾದರೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸುವವರ ಮೇಲೆ ಕಾನೂನು ಬದ್ಧ ಕ್ರಮ.
-ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣದ ಕಾಮಗಾರಿಗಳ ಕಚ್ಚಾ ವಸ್ತುಗಳನ್ನು ರಸ್ತೆಯಲ್ಲಿ ಹಾಕದಂತೆ ಎಚ್ಚರ ವಹಿಸ ಬೇಕು, ಹಾಕಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ದೂರು ದಾಖಲಿಸಬೇಕು.
-ವಿದ್ಯಾರ್ಥಿಗಳನ್ನು ಕರೆತರುವ ಶಾಲಾ ಬಸ್/ ಆಟೋಗಳ ಫಿಟ್ನೆಸ್ ಪರಿಶೀಲನೆ ಮತ್ತು ನಿಯಮಗಳ ಪಾಲನೆಯಾಗುತ್ತಿರುವ ಬಗ್ಗೆ ತಿಂಗಳ 3ನೇ ಶನಿವಾರ ಆಯಾ ಠಾಣೆ ವ್ಯಾಪ್ತಿಯಲ್ಲಿ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು.
ವಿದ್ಯಾರ್ಥಿಗಳಲ್ಲಿ ಜಾಗೃತಿ
ಸಂಚಾರ ನಿಯಮಗಳ ಬಗ್ಗೆ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು, ಝೀಬ್ರಾ ಕ್ರಾಸಿಂಗ್, ಗುಣಮಟ್ಟದ ಹೆಲ್ಮೆಟ್ ಧಾರಣೆ ಸೇರಿದಂತೆ ಸಂಚಾರ ನಿಯಮಗಳನ್ನು ತಿಳಿಸಿಕೊಡಬೇಕು, ಮಾಹಿತಿ ಪುಸ್ತಕಗಳನ್ನು ನೀಡಬೇಕು, ಪುಸ್ತಕ ರಚನೆಗೆ ತಜ್ಞರೊಬ್ಬರನ್ನು ನೇಮಿಸಬೇಕು.